'ರಾಜ್ಯ ಬಿಜೆಪಿಯ ಹಿಡಿತ BSY ಕೈತಪ್ಪಿ BL ಸಂತೋಷ್ ಕೈಸೇರಿಯಾಗಿದೆ, ಬಿಜೆಪಿ ಟಿಕೆಟ್ ಹಂಚಿಕೆಯ ಮೇಲೆ ಸಂತೋಷ್ ಪ್ರಾಬಲ್ಯ'
ರಾಜ್ಯ ಬಿಜೆಪಿಯ ಹಿಡಿತ ಬಿಎಸ್ ಯಡಿಯೂರಪ್ಪ ಕೈತಪ್ಪಿ ಬಿಎಲ್ ಸಂತೋಷ್ ಕೈಸೇರಿಯಾಗಿದೆ. ಬಿಜೆಪಿ ಟಿಕೆಟ್ ಹಂಚಿಕೆಯ ಮೇಲೆ ಸಂತೋಷ್ ಪ್ರಾಬಲ್ಯ ಹೊಂದಿದ್ದಾರೆ. ಏನಿದು ವರದಿ? ತಿಳಿಯಿರಿ
ಬೆಂಗಳೂರು, ಜನವರಿ 30: ರಾಜ್ಯ ಬಿಜೆಪಿಯ ಹಿಡಿತ ಯಡಿಯೂರಪ್ಪ ಕೈತಪ್ಪಿ ಬಿಎಲ್ ಸಂತೋಷ್ ಕೈಸೇರಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. 'ಯಾರೋ ನಾಲ್ಕು ಜನ ಹೇಳಿದಾಕ್ಷಣ ಟಿಕೆಟ್ ನೀಡಲು ಸಾಧ್ಯವಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು, 'ಬಿಎಲ್ ಸಂತೋಷ್ ಪರೋಕ್ಷವಾಗಿ ಬಿವೈ ವಿಜಯೇಂದ್ರ ಅವರಿಗೆ ಹೇಳಿದ ಮಾತೇ ಇದು. ಬಿಜೆಪಿಯ ಟಿಕೆಟ್ ಹಂಚಿಕೆಯ ಹಿಡಿತವನ್ನು ಸಂತೋಷ್ ಹಿಡಿದಿರುವಾಗ BSY ಬಣದ ಶಾಸಕರ ಕೈಗೆ ತಾಮ್ರದ ಚೊಂಬು ನಿಶ್ಚಿತ' ಎಂದು ತಿಳಿಸಿದೆ. ಎರಡು ದಿನಗಳ ಹಿಂದೆ ಮಾತನಾಡಿದ್ದ ಬಿವೈ ವಿಜಯೇಂದ್ರ ಅವರು, ಯಡಿಯೂರಪ್ಪನವರಿಗೆ ಕಲ್ಲು ಹೊಡೆದರೆ, ಬಿಜೆಪಿಗೇ ನಷ್ಟವಾಗಲಿದೆ ಎಂದು ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದ ಬಿಎಲ್ ಸಂತೋಷ್ ಅವರು, 'ಯಾರೋ ನಾಲ್ಕು ಜನರು ಹೇಳಿದಾಕ್ಷಣ ಟಿಕೆಟ್ ನೀಡಲು ಆಗುವುದಿಲ್ಲ' ಎಂದು ತಿಳಿಸಿದ್ದರು.

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರು
'ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮುಂದಿನ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ ₹6,000 ನೀಡುವುದಾಗಿ ಹೇಳಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ವಿಚಾರವಾಗಿ ಷಡ್ಯಂತ್ರ ರೂಪಿಸುತ್ತಿದ್ದು, ದೂರಿನಲ್ಲಿ ಈ ಬಗ್ಗೆ ಐದು ಆಗ್ರಹಗಳನ್ನು ಮುಂದಿಡಲಾಗಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಎಸ್ ಉಗ್ರಪ್ಪ ಅವರ ನೇತೃತ್ವದ ಕಾಂಗ್ರೆಸ್ ನಿಯೋಗ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮುಂಬರುವ ಚುನಾವಣೆಯಲ್ಲಿ ಮತದಾರರನ್ನು ಓಲೈಕೆ ಮಾಡಿಕೊಳ್ಳಲು ಬಿಜೆಪಿ ಮಾಡಲು ಮುಂದಾಗಿರುವ ಅಕ್ರಮಗಳ ವಿರುದ್ಧ ದೂರು ನೀಡಲಾಯಿತು' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಮಲ್ಟಿ ಆರ್ಗನ್ ಫೆಲ್ಯೂರ್ ಆಗಿರುವ ಸರ್ಕಾರ
'ಸಾರಿಗೆ ನೌಕರರು ಪ್ರತಿಭಟಿಸುತ್ತಿದ್ದಾರೆ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟಿಸುತ್ತಿದ್ದಾರೆ. ಸಮರ್ಪಕ ವ್ಯವಸ್ಥೆಗಳಿಲ್ಲದೆ, ಹಗಲು ರಾತ್ರಿ ಚಳಿಯಲ್ಲಿ ನಡುಗುತ್ತಿರುವ ಪ್ರತಿಭಟನಾಕಾರರ ಅಳಲು ಕೇಳುವ ಕನಿಷ್ಠ ಸೌಜನ್ಯ ಸರ್ಕಾರಕ್ಕೆ ಇಲ್ಲವೇ? ಮಲ್ಟಿ ಆರ್ಗನ್ ಫೆಲ್ಯೂರ್ ಆಗಿರುವ ಸರ್ಕಾರಕ್ಕೆ ಹೃದಯ, ಕಣ್ಣು, ಕಿವಿ ಯಾವುದೂ ಕೆಲಸ ಮಾಡ್ತಿಲ್ಲ' ಎಂದು ಕಾಂಗ್ರೆಸ್ ಟ್ವೀಟಿಸಿದೆ.

ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ. ಕನಿಷ್ಠ ನಾಲ್ಕು ಜನಪರ ಕೆಲಸ ಮಾಡದ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ ಎನ್ನುವುದಕ್ಕೆ ಪ್ರತಿ ಸಮಾರಂಭದಲ್ಲೂ ಕಾಣುವ ಖಾಲಿ ಕುರ್ಚಿಗಳೇ ಸಾಕ್ಷಿ. ಕುರ್ಚಿಗಳಿಗೆ ಜೀವವಿದ್ದಿದ್ದರೆ, ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಎದ್ದು ಹೊರಡುತ್ತಿದ್ದವು' ಎಂದೂ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಅನ್ನಭಾಗ್ಯದ ಅಕ್ಕಿ ಕಡಿತ
ರಾಜ್ಯದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಪ್ರದರ್ಶಿಸಲು "ಆಹಾರ" ಉಪಕ್ರಮ ಪ್ರಾರಂಭಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ಮಾಡಿದ್ದೇನು? ಅನ್ನಭಾಗ್ಯದ ಅಕ್ಕಿ ಕಡಿತ. ಇಂದಿರಾ ಕ್ಯಾಂಟೀನ್ ಸ್ಥಗಿತ. ಅಂಗನವಾಡಿ ಆಹಾರದಲ್ಲಿ ಹುಳುಗಳು. ಬಿಸಿಯೂಟದ ಅನುದಾನ ಕಡಿತ ಆಹಾರಕ್ಕೇ ಹಾಹಾಕಾರ ಸೃಷ್ಟಿಸಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಸ್ತೆಗುಂಡಿಗಳಿಗೆ 25ಕ್ಕೂ ಹೆಚ್ಚು ಜನರ ಬಲಿ
'ಬನ್ನಿ, ಅವರ ಬೆಂಗಳೂರಿನ ಅಭಿವೃದ್ಧಿ ನೋಡಬನ್ನಿ. ಬಿಜೆಪಿಯ ಬೆಂಗಳೂರಿನ ಅಭಿವೃದ್ಧಿಯಲ್ಲಿ ರಸ್ತೆಗುಂಡಿಗಳಿಗೆ 25ಕ್ಕೂ ಹೆಚ್ಚು ಜನರ ಬಲಿಯಾಗಿದೆ. ಮೆಟ್ರೋ ಕಳಪೆ ಕಾಮಗಾರಿಗೆ ಎರಡು ಬಲಿಯಾಗಿದೆ. ರಸ್ತೆಗಳಲ್ಲೇ ಕಂದಕ, ಸುರಂಗಗಳು ಸೃಷ್ಟಿಯಾಗುತ್ತಿವೆ. ವಿಲೇವಾರಿಯಾಗದ ಕಸ ಬಿದ್ದು ಕೊಳೆಯುತ್ತಿದೆ. ಇದೇ ಬಿಜೆಪಿ ಅಭಿವೃದ್ಧಿ' ಎಂದು ಕಾಂಗ್ರೆಸ್ ಟೀಕಿಸಿದೆ.

ರೇಣುಕಾಚಾರ್ಯರನ್ನು ವೇದಿಕೆಯಿಂದ ಇಳಿಸಿದ ಜನ
'ಶಾಲಾ ಕಾರ್ಯಕ್ರಮದಲ್ಲಿ ನಿಂತು ರಾಜಕೀಯ ಭಾಷಣ ಮಾಡಿದ ಬಿಜೆಪಿ ಶಾಸಕ ರೇಣುಕಾಚಾರ್ಯರನ್ನು ಜನ ವೇದಿಕೆಯಿಂದ ಇಳಿಸಿ ಓಡಿಸಿದ್ದಾರೆ. ಕೆಲವೇ ತಿಂಗಳಲ್ಲಿ ಜನತೆ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಇಳಿಸಿ ಓಡಿಸುವ ಮುನ್ಸೂಚನೆ ಇದು. ಬಿಜೆಪಿಯ ದುರಾಡಳಿತಕ್ಕೆ ಜನತೆ ಬೇಸತ್ತಿರುವುದಕ್ಕೆ ನಿದರ್ಶನಗಳಿವು' ಎಂದು ವಾಗ್ದಾಳಿ ನಡೆಸಿದೆ.












Click it and Unblock the Notifications