ಪಿಎಸ್ಐ ಹಗರಣ; ಬಂಧಿತ ಅಧಿಕಾರಿಗಳ ಮಂಪರು ಪರೀಕ್ಷೆಗೆ ಒತ್ತಾಯ
ಬೆಂಗಳೂರು ಜುಲೈ 14: ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮ್ರಿತ್ ಪೌಲ್ ಮತ್ತು ಇತರ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಬಹಿರಂಗವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದ ಕುರಿತು ಟ್ವಿಟ್ ಮಾಡಿರುವ ಅವರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಅನೇಕ ಸಚಿವರು, ಸಚಿವರ ಆಪ್ತರು ಶಾಮೀಲಾಗಿದ್ದಾರೆ ಎಂಬ ಸಂದೇಶಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಕನ್ನಡಕ್ಕೂ ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ನಂಟು?
ಪ್ರಕರಣ ಸಂತ್ಯಾಂಶ ನಾಡಿಗೆ ಗೊತ್ತಾಗಬೇಕಾದರೆ ಬಂಧಿತ ಎಡಿಜಿಪಿ ಅಮ್ರಿತ್ ಪೌಲ್ ಸೇರಿದಂತೆ ಈಗಾಗಲೇ ಬಂಧಿತರಾಗಿರುವ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿಬೇಕು. ಆ ಮೂಲಕ ತಪ್ಪತಸ್ಥರಿಂದ ಸತ್ಯ ಬಯಲಿಗೆಳೆಯಬೇಕು ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ನೀರು ಕುಡಿಯಬೇಕು; ಮಪರು ಪರೀಕ್ಷೆ ನಡೆಸಿದರೆ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದಲ್ಲಿ ಭಾಗಿಯಾದವರು ಯಾರು, ಯಾರು?, ಎಷ್ಟು ಜನ? ಎಂಬುದು ತಿಳಿಯುತ್ತದೆ. ತಪ್ಪು ಯಾರೇ ಮಾಡಿದ್ದರೂ ಅದು ತಪ್ಪೆ. ಸಚಿವರಾಗಲಿ, ಅವರ ಆಪ್ತರಾಗಲಿ ತಪ್ಪಿಗೆ ಕಾನೂನಿನಡಿ ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.
"ಎಡಿಜಿಪಿ ಅಮ್ರಿತ್ ಪೌಲ್ ಮಂಪರು ಪರೀಕ್ಷೆಗೆ ಒಳಪಡಿಸುವ ಜತೆಗೆ ಪೊಲೀಸರಿಗೆ ದೊರೆತ ಪೌಲ್ ಬರೆದ ಡೈರಿಯ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ" ಅವರು ಟ್ವೀಟ್ ಮಾಡಿದ್ದಾರೆ.
ಪಿಎಸ್ಐ ಅಕ್ರಮದಲ್ಲಿ ಭಾಗಿ ಶಂಕೆ ಹಿನ್ನೆಲೆ ಬಂಧನವಾಗಿರುವ ಎಡಿಜಿಪಿ ಅಮ್ರಿತ್ ಪೌಲ್ ಸದ್ಯ ಸಿಐಡಿ ವಶದಲ್ಲಿದ್ದಾರೆ. ಐಪಿಎಸ್ ಅದಿಕಾರಿ ಮತ್ತು ಹಗರಣದ ಆರೋಪಿ ಶಾಂತಕುಮಾರ್ ನಡುವೆ 1.36ಕೋಟಿ ರೂ. ಹಣ ವರ್ಗಾವಣೆ ಆಗಿದೆ. ಆ ಸಂಬಂಧ ಮೊಬೈಲ್ ದತ್ತಾಂಶ ಅಳಿಸಿ ಹಾಕಲಾಗಿದೆ ಎಂಬ ಆರೋಪವಿದೆ.
ಈ ಕಾರಣದಿಂದಲೇ ಒಂದನೇ ಎಸಿಎಂಎಂ ನ್ಯಾಯಾಲಯ ಬುಧವಾರ ಮತ್ತೆ ಮೂರು ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಎಂದು ಪೌಲ್ ಅವರನ್ನು ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.