ಬಿ.ಪಿ. ಹರೀಶ್ ಅವರೇ ಹರಿಹರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಹರಿಹರ, ಜನವರಿ 19: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ಹೇಳಿರುವ ಬಿ.ಪಿ. ಹರೀಶ್ ಅವರೇ ಹರಿಹರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರನ್ನು ಗೆಲ್ಲಿಸಲು ನೀವು ಸಂಕಲ್ಪ ಮಾಡಿ ಹೋರಾಟ ಮಾಡಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಮಿಟ್ಲಕಟ್ಟೆ ಗ್ರಾಮದಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ ನಡೆಸಿ, ನಂತರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು.

ಹರಿಹರ ಕ್ಷೇತ್ರದಲ್ಲಿ ಹರೀಶ್ ಅವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲು ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ಸರ್ಕಾರದಿಂದ ಎಲ್ಲಾ ಜನರಿಗೂ ಅನುಕೂಲವಾಗುವಂತೆ ಯಾವುದೇ ಜನಪರ ಕೆಲಸವಾಗಿಲ್ಲ. ಭಾಗ್ಯದ ಯೋಜನೆಗಳ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಿದೆ ಎಂದು ದೂರಿದರು.
ಬಿಎಸ್ವೈ ಬೆಂಬಲಿತ ಹರೀಶ್: ಹರಿಹರ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ಒಬ್ಬೇ ಒಬ್ಬ ಬಿಜೆಪಿ ಸದಸ್ಯರನ್ನು ಹೊಂದಿರದ ಕಾಲದಲ್ಲಿ ಅಚ್ಚರಿಯ ಜಯ ದಾಖಲಿಸಿದ ಬಿ.ಪಿ ಹರೀಶ್ ಅವರು ಯಡಿಯೂರಪ್ಪ ಅವರ ಬೆಂಬಲಿತ ಅಭ್ಯರ್ಥಿ.
ಜೆಡಿಎಸ್ ನ ಎಚ್ ಶಿವಪ್ಪ, ಕಾಂಗ್ರೆಸ್ಸಿನ ವೈ ನಾಗಪ್ಪ ಅವರಂಥ ಅನುಭವಿಗಳ ವಿರುದ್ಧ 2008ರಲ್ಲಿ ಗೆಲುವು ಸಾಧಿಸಿದ್ದ ಹರೀಶ್ ಈಗ ಈ ಕ್ಷೇತ್ರದಲ್ಲಿ ಮತ್ತೆ ಗೆಲುವಿನ ರುಚಿ ಕಾಣಬೇಕಿದೆ.
2013ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎಚ್. ಎಸ್ ಶಿವಶಂಕರ್ 59,666 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ಸಿನ ಎಸ್ ರಾಮಪ್ಪ 40,613 ಮತಗಳನ್ನು ಗಳಿಸಿ ಎರಡನೇ ಸ್ಥಾನಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹರೀಶ್ ಅವರ ಈ ಬಾರಿಯ ಗೆಲುವು ಭದ್ರಾ ನದಿ ನೀರು ಹಂಚಿಕೆ ಮೇಲೆ ನಿಂತಿದೆ. ತುಂಗಭದ್ರಾ ನದಿ ತೀರದಲ್ಲಿರುವ ಕೈಗಾರಿಕಾ ನಗರ ಹರಿಹರಕ್ಕೆ ಸೂಕ್ತ ಮಾನ್ಯತೆ ಕೊಡಿಸಬಲ್ಲವರಿಗೆ ಗೆಲುವು ಖಚಿತ.












Click it and Unblock the Notifications