ಗಡಿ ವಿವಾದ: ಸಿಎಂ ಬಸವರಾಜ ಬೊಮ್ಮಾಯಿಗೆ ಸವಾಲು ಹಾಕಿದ ಡಿ.ಕೆ. ಶಿವಕುಮಾರ್
ಬೆಳಗಾವಿ, ಡಿಸೆಂಬರ್ 28: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ನೀಡಿರುವ ಪೊಳ್ಳು ಹೇಳಿಕೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ನಿರ್ಣಯವನ್ನು ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿ, ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬ ಮಾತಿಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್ "ಮುಖ್ಯಮಂತ್ರಿಗಳು ಈ ರೀತಿ ಪೊಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಆಶ್ಚರ್ಯಕರವೇನಲ್ಲ" ರಾಜ್ಯದ ಒಂದಿಂಚು ಜಾಗವನ್ನೂ ಬಿಟ್ಟುಕೊಡಲು ಮುಖ್ಯಮಂತ್ರಿ ಬೊಮ್ಮಾಯಿಯವರು ಸಿದ್ಧರಿಲ್ಲದಿದ್ದರೆ, ಇಷ್ಟರಲ್ಲಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದಿರುವ ಅವರು, "ರಾಜ್ಯದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಅವರು ನಿಜಕ್ಕೂ ತಯಾರಿಲ್ಲದಿದ್ದರೆ ತಕ್ಷಣವೇ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದುಕೊಂಡು ಹೋಗಲಿ ಹಾಗೆಯೇ ಕೇಂದ್ರ ಗೃಹ ಸಚಿವರು ಈ ವಿಷಯದ ಬಗ್ಗೆ ಸಾರ್ವಜನಿಕ ಭರವಸೆ ನೀಡಲಿ" ಎಂದು ಸವಾಲೆಸೆದಿದ್ದಾರೆ.

ಈ ಮೂಲಕ ಬೊಮ್ಮಾಯಿಯವರ ಪೊಳ್ಳು ಭರವಸೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಡಿ.ಕೆ ಶಿವಕುಮಾರ್, ಕೇಂದ್ರ ಗೃಹ ಸಚಿವರು ಸಾರ್ವಜನಿಕ ಭರವಸೆ ನೀಡುವಂತೆ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಬಸವರಾಜ ಬೊಮ್ಮಾಯಿ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ನಿರ್ಣಯವನ್ನು ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯ ಪುನರ್ ರಚನಾ ಕಾಯ್ದೆ 1956 ರಲ್ಲಿ ರೂಪಿಸಿ ಇಷ್ಟು ವರ್ಷಗಳಾಗಿವೆ. ಎರಡೂ ಕಡೆ ಜನ ನೆಮ್ಮದಿಯಿಂದಿದ್ದಾರೆ. ಅವರ ರಾಜಕಾರಣಕ್ಕಾಗಿ ಈ ರೀತಿ ಯ ಹೇಳಿಕೆಗಳನ್ನು ಹಾಗೂ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇದೆ. ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಗಡಿಯಿಂದಾಚೆಯಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇನ್ನೂ ಸುಪ್ರೀಂ ಕೋರ್ಟಿನಲ್ಲಿ ವಿಚಾರ ವಿದೆ. ನಾವು ನಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದರೆ ಅವರು ನಮ್ಮ ಜಾಗವನ್ನು ಪಡೆಯುವುದಾಗಿ ನಿರ್ಣಯ ಮಂಡಿಸಿದ್ದಾರೆ. ಇದು ನಮಗೂ ಅವರಿಗಿರುವ ವ್ಯತ್ಯಾಸ. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲಿ ಇದಕ್ಕೆ ಬೆಲೆ ಇಲ್ಲ. ರಾಜ್ಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದೆ.
ನಮ್ಮ ನಿಲುವು ಸಂವಿಧಾನಬದ್ದ ಹಾಗೂ ನ್ಯಾಯಸಮ್ಮತವಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ನಮ್ಮ ನಿರ್ಣಯವೂ ಇದೆ. ವ್ಯತಿರಿಕ್ತವಾದ ಮಹಾರಾಷ್ಟ್ರದ ನಿರ್ಣಯ ಜವಾಬ್ದಾರಿಯುತವಲ್ಲ. ಇಡೀ ದೇಶ ಇದನ್ನು ನೋಡುತ್ತಿದ್ದು, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.












Click it and Unblock the Notifications