ಸ್ವಾತಂತ್ರ್ಯಪೂರ್ವದಿಂದಲೂ ತಮಿಳುನಾಡಿನದ್ದು ಇದೇ ಉದ್ಧಟತನ!
ಬೆಂಗಳೂರು, ಫೆ. 26: ಕಾವೇರಿ ನದಿ ನೀರಿಗಾಗಿ ತಮಿಳುನಾಡು ಮತ್ತೆ ಖ್ಯಾತೆ ಶುರುಮಾಡಿದೆ. ಆದರೆ ಆರಂಭದಲ್ಲಿಯೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿರುವುದರಿಂದ ಮುಂದಾಗುವ ಸಮಸ್ಯೆ ಈಗಲೇ ನೀಗಿದಂತಾಗಿದೆ. ತಮಿಳುನಾಡಿನ ಉದ್ಧಟತನದ ಹಿನ್ನೆಲೆಯಲ್ಲಿ ವಿಕಾಸೌಧದಲ್ಲಿ ಸಂಬಂಧಿಸಿದ ಇಲಾಖೆಗಳ ಸಚಿವರು ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ವಿವಾದದ ಕುರಿತು ಸಚಿವರು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ.
ಕೃಷ್ಣಾ ಹಾಗೂ ಕಾವೇರಿ ಜಲಾನಯನ ಪ್ರದೇಶಗಳು ಹಾಗೂ ಅಂತಾರಾಜ್ಯ ನೀರು ವ್ಯಾಜ್ಯದ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಸಚಿವರು, ತಮಿಳುನಾಡಿನ ಮೇಲೆ ಹರಿಹಾಯ್ದಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಮಾಡಲು ಉದ್ಧಟತನವನ್ನು ತಮಿಳುನಾಡು ಮಾಡುತ್ತಿದೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡೋಣ ಎಂಬ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಗಿದೆ. ಸಭೆಯ ಸಚಿವರಾದ ಬಸವರಾಜ್ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಮಿಳುನಾಡಿಗೆ ಖಡಕ್ ಸಂದೇಶ ರವಾನಿಸಿದ್ದಾರೆ? ಏನದು ಸಂದೇಶ? ಮುಂದಿದೆ ಮಾಹಿತಿ!
ತಮಿಳುನಾಡಿಗೆ ಖಡಕ್ ಸಂದೇಶ!
ತಮಿಳುನಾಡು ನಮ್ಮ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದಕ್ಕೆ ಕರ್ನಾಟಕದ ತೀವ್ರ ವಿರೋಧ ಇದೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ನೀರಾವರಿ ಯೋಜನೆಗಳಿಗೆ ನಾವು ಒಪ್ಪಿಗೆ ಕೊಡಲ್ಲ. ಇದುವರೆಗೆ ಕಾವೇರಿ ಹೆಚ್ಚುವರಿ ನೀರು ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಅದಕ್ಕೂ ಮುಂಚೆಯೇ ತಮಿಳುನಾಡು ಕಾವೇರಿ-ವೈಗೈ-ಗುಂಡಾರ್ ಜೋಡಣೆ ಯೋಜನೆಗೆ ಅಡಿಗಲ್ಲು ಹಾಕಿದೆ. ಇದರೊಂದಿಗೆ 45 ಟಿಎಂಸಿ ನೀರು ಬಳಕೆಗೆ ತಮಿಳುನಾಡು ಮುಂದಾಗಿರೋದು ಖಂಡನೀಯ ಎಂದು ಜಂಟಿ ಸುದ್ದಿಗೋಷ್ಠೀಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸ್ವಾತಂತ್ರ್ಯಪೂರ್ವದಿಂದಲೂ ಉದ್ಧಟತನ
ತಮಿಳುನಾಡಿನ ಕ್ರಮವನ್ನು ವಿರೋಧಿಸಿ ಸಿಎಂ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಈ ಯೋಜನೆ ಅಂತಾರಾಜ್ಯ ನದಿ ನೀರು ಕಾಯಿದೆಗೂ ವಿರುದ್ಧವಾಗಿದೆ. ಹೆಚ್ಚುವರಿ ನೀರು ಬಳಕೆಯನ್ನು ಮಾಡುವುದನ್ನು ತಮಿಳುನಾಡು ಸರ್ಕಾರ ಸ್ವೇಚ್ಛಾಚಾರ ಎಂದು ಭಾವಿಸಿದಂತಿದೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಕಾನೂನಿಗೆ ಸಂಪೂರ್ಣ ವಿರುದ್ಧವಾಗಿ ಈ ಯೋಜನೆ ಜಾರಿಯಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ನಮ್ಮ ರಾಜ್ಯದ ನೀರಾವರಿ ಯೋಜನೆಗಳಿಗೆ ತಮಿಳುನಾಡು ವಿರೋಧ ಮಾಡುತ್ತಲೇ ಬಂದಿದೆ. ಈ ಯೋಜನೆಯ ವಿರುದ್ಧ ನಾವೂ ಕಾನೂನು ಹೋರಾಟ ಮಾಡುತ್ತೇವೆ. ಅಂತಿಮ ನಿರ್ಧಾರ ಆಗೋವರೆಗೆ ಹೆಚ್ಚುವರಿ ನೀರು ಬಳಕೆಗೆ ಅವಕಾಶ ನೀಡದಂತೆ ನಮ್ಮ ವಾದ ಮಂಡಿಸುತ್ತೇವೆ ಎಂದು ತಮಿಳುನಾಡಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರದ ನೆರವು?
ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತಮಿಳುನಾಡು ಯೋಜನೆಯನ್ನು ಆರಂಭಿಸಿಲ್ಲ. ಆದರೆ ಯೋಜನೆಗೆ ಅಡಿಗಲ್ಲು ಹಾಕಿದ್ದು ನಿಜ. ತಕ್ಷಣ ಅದಕ್ಕೆ ಸಿಎಂ ಯಡಿಯೂರಪ್ಪ ಅವರು ಆಕ್ಷೇಪಣಾ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಕ್ಷೇಪಣಾ ಪತ್ರ ಬರೆದು ಯೋಜನೆ ಮುಂದುವರೆಯದಂತೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಆ ಯೋಜನೆಗೆ ಯಾವುದೇ ಹಣಕಾಸು ನೆರವು ನೀಡಿಲ್ಲ. ಸುಮ್ಮನೆ ಊಹಾಪೋಹದ ಮಾತು ಬೇಡ ಎಂದು ವಿರೋಧ ಪಕ್ಷಗಳ ಆರೋಪವನ್ನು ನಿರಾಕರಿಸಿದ್ದಾರೆ.
Recommended Video
ರೈತನಿಂದ ಪಿಟಿಶನ್
ತಮುಳುನಾಡು ಸರ್ಕಾರ ಮಧುರೈ ಕೋರ್ಟ್ನಲ್ಲಿ ಪಿಟಿಷನ್ ಹಾಕಿಸಿದ್ದಾರೆ. ಅದು ರೈತನ ಕಡೆಯಿಂದ ಪಿಟಿಶನ್ ಹಾಕಿಸಿದ್ದಾರೆ. ನಾವು ಆ ಕುರಿತು ಕಾನೂನು ಹೋರಾಟ ಮಾಡಲು ಕಾನೂನು ಹಾಗೂ ಜಲಸಂಪನ್ಮೂಲ ಇಲಾಖೆಗಳ ಸಭೆ ನಡೆಸಿದ್ದೇವೆ. ಕಾನೂನು ತಜ್ಞರೊಂದಿಗೂ ಚರ್ಚಿಸಿದ್ದೇವೆ. ರಾಜ್ಯಕ್ಕೆ ಅನ್ಯಾಯವಾಗದಂತೆ ಗಮನಹರಿಸಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.