ಜೆಡಿಎಸ್ ಶಾಸಕರಿಗೆ ಬಂಪರ್ ಉಡುಗೊರೆ ಕೊಡಲಿದ್ದಾರೆ ಕುಮಾರಸ್ವಾಮಿ!
ಬೆಂಗಳೂರು, ಜುಲೈ 04 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಕ್ಕೆ ವಾಪಸ್ ಅಗುತ್ತಿದ್ದಂತೆ ಜೆಡಿಎಸ್ ಶಾಸಕರಿಗೆ ಬಂಪರ್ ಉಡುಗೊರೆ ಸಿಗಲಿದೆ. ಗುರುವಾರ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 6ರಂದು ಅಮೆರಿಕ ಪ್ರವಾಸದಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಜುಲೈ 12 ರಿಂದ 26ರ ತನಕ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಅದಕ್ಕೂ ಮೊದಲು ಶಾಸಕರಿಗೆ ಉಡುಗೊರೆ ಸಿಗಲಿದೆ.
ನಾಲ್ವರು ಮಾಜಿ ಶಾಸಕರು ಹಾಗೂ ಹಿರಿಯ ಮುಖಂಡರನ್ನು ನಿಗಮ-ಮಂಡಳಿಗಳಿಗೆ ನೇಮಕ ಮಾಡಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಅಧಿವೇಶನ ಆರಂಭವಾಗುವುದಕ್ಕೂ ಮೊದಲು ಶಾಸಕರ ನೇಮಕಾತಿ ನಡೆಯಲಿದೆ.

ಜೆಡಿಎಸ್ ಪಕ್ಷದ ಕೋಟಾದಲ್ಲಿ ಶಾಸಕರು ಸೇರಿ ಒಟ್ಟು 9 ಮಂದಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ. 2ನೇ ಕಂತಿನಲ್ಲಿ ಇನ್ನುಳಿದ ನೇಮಕಾತಿಗಳನ್ನು ಪೂರ್ಣಗೊಳಿಸಲು ಜೆಡಿಎಸ್ ಮುಂದಾಗಿದೆ. ಈ ಮೂಲಕ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸಲಾಗುತ್ತದೆ.
ಮೊದಲ ಹಂತದಲ್ಲಿ ಜೆಡಿಎಸ್ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಸೇರಿದಂತೆ 9 ಮಂದಿಯನ್ನು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಒಂದು ಕಡೆ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಹೊಸ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿರುವ ಜೆಡಿಎಸ್ ಮತ್ತೊಂದು ಕಡೆ ಶಾಸಕರಿಗೆ ಅಧಿಕಾರ ನೀಡಲು ಮುಂದಾಗಿದೆ. ಈ ಮೂಲಕ ಎಲ್ಲರನ್ನೂ ಸಕ್ರಿಯವಾಗಿಸಿ ಸರ್ಕಾರ ನಡೆಸಿಕೊಂಡು ಹೋಗಲು ಬಯಸಿದೆ.












Click it and Unblock the Notifications