ಎಲ್ಲಾ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದು
ಬೆಂಗಳೂರು, ಮೇ 29 : ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ನಿಗಮ, ಮಂಡಳಿ ಹಾಗೂ ಅಕಾಡೆಮಿ ಅಧ್ಯಕ್ಷರ ನೇಮಕವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ಅವರು ಒಂದು ವರ್ಷದ ಹಿಂದೆ ನೇಮಕ ಮಾಡಿದ್ದ ನಿಗಮ, ಮಂಡಳಿ ಹಾಗೂ ಅಕಾಡೆಮಿಗಳ ನೇಮಕಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಒಂದು ವರ್ಷದ ಹಿಂದೆ 83 ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲಾಗಿತ್ತು.
ಹೊಸ ಅಧ್ಯಕ್ಷರು ನೇಮಕವಾಗುವ ತನಕ ಆಯಾ ನಿಗಮ, ಮಂಡಳಿ, ಅಕಾಡೆಮಿಗಳಿಗೆ ಸಂಬಂಧಿಸಿದ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಜ್ಯದಲ್ಲಿ ಸರ್ಕಾರ ಬದಲಾದಾಗ ನಿಗಮ-ಮಂಡಳಿ ಅಧ್ಯಕ್ಷರ ಸ್ಥಾನವೂ ಬದಲಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಹೊಸ ಸರ್ಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯಿಗೆ ಚಾಲನೆ ನೀಡುತ್ತದೆ.
ಅಧಿಕಾರವನ್ನು ಅನುಭವಿಸಿಲ್ಲ : ಸಿದ್ದರಾಮಯ್ಯ ನೇತೃತ್ವದ ಸರ್ಕಾರ 1 ವರ್ಷದ ಹಿಂದೆ 83 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿತ್ತು. ಆದರೆ, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ಯಾವದೇ ಕಾರ್ಯ ಚಟುವಟಿಕೆ ನಡೆಸದಂತೆ ಆದೇಶ ನೀಡಲಾಗಿತ್ತು.
ಚುನಾವಣಾ ಕಾರ್ಯಕ್ಕಾಗಿ ಅಧ್ಯಕ್ಷರ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ಮೇ 18ರಂದು ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಕಾರುಗಳನ್ನು ವಾಪಸ್ ನೀಡಲಾಗಿತ್ತು. ಅಧ್ಯಕ್ಷರು ಈಗ ಚಟುವಟಿಕೆ ಆರಂಭಿಸುವ ಮುನ್ನವೇ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ.












Click it and Unblock the Notifications