BMTC ನೌಕರರಿಗೆ ಗುಡ್ ನ್ಯೂಸ್: ವಿಮಾ ಪರಿಹಾರ ಮೊತ್ತ 3 ರಿಂದ 10 ಲಕ್ಷಕ್ಕೆ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಬಿಎಂಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಗುಂಪು ವಿಮಾ ಯೋಜನೆಯ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 17 ಮೃತ ನೌಕರರ ಅವಲಂಬಿತರಿಗೆ ಗುಂಪು ವಿಮಾ ಯೋಜನೆಯ ಪರಿಹಾರದ ಹಣವಾಗಿ ರೂ.10.00 ಲಕ್ಷ ವಿತರಣೆಯನ್ನು ಮಾಡಿದರು.
ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಹಿತದೃಷ್ಟಿಯಿಂದ ಅನಾರೋಗ್ಯ/ಇನ್ನಿತರೆ ಕಾರಣಗಳಿಂದ ಮೃತಪಟ್ಟಂತಹ ಅಧಿಕಾರಿ/ನೌಕರರ ಅವಲಂಭಿತ ಕುಟುಂಬದ ಆರ್ಥಿಕ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಈ ಹಿಂದೆ ಜಾರಿಯಲ್ಲಿದ್ದಂತಹ ಗುಂಪು ವಿಮಾ ಯೋಜನೆಯ ಪರಿಹಾರ ಮೊತ್ತವನ್ನು ರೂ.3.00 ಲಕ್ಷಗಳಿಂದ ರೂ.10.00 ಲಕ್ಷಗಳಿಗೆ ಪರಿಷ್ಕರಿಸಿ ದಿನಾಂಕ:19.02.2024 ರಿಂದ ಜಾರಿಗೆ ತರಲಾಗಿರುತ್ತದೆ ಎಂದಿದೆ.

ಈ ಯೋಜನೆಯನ್ವಯ, ಪ್ರಸ್ತುತ ಅರ್ಹ 17 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ 10 ಲಕ್ಷಗಳಂತೆ ಒಟ್ಟು ಒಂದು ಕೋಟಿ ಎಪ್ಪತ್ತು ಲಕ್ಷ (1,70,00,000) ರೂಪಾಯಿಗಳನ್ನು ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಗುಂಪು ವಿಮಾ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ದಿನಾಂಕ:31.12.2024 ರಂದು ವಿತರಿಸಿದರು.
ಇನ್ನೂ ಹಬ್ಬದ ದಿನಗಳಲ್ಲಿ ಅತ್ಯುತ್ತಮವಾಗಿ ವಾಹನಗಳನ್ನು ಕಾರ್ಯಾಚರಣೆ ಮಾಡಿ ಸಂಸ್ಥೆಗೆ ಹೆಚ್ಚಿನ ಸಾರಿಗೆ ಆದಾಯ ತಂದಂತಹ ಘಟಕ ವ್ಯವಸ್ಥಾಪಕರುಗಳಿಗೆ ಪ್ರಶಾಂಸನ ಪತ್ರ ಮತ್ತು ನಗದು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ ರವರು ಮತ್ತು ಸಂಸ್ಥೆಯ ನಿರ್ದೇಶಕರು (ಭದ್ರತಾ ಮತ್ತು ಜಾಗೃತೆ)ರವರಾದ ಅಬ್ದುಲ್ ಅಹದ್ ರವರು ಹಾಗೂ ಇಲಾಖಾ ಮುಖ್ಯಸ್ಥರುಗಳು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.












Click it and Unblock the Notifications