ಕಂಡಕ್ಟರ್ ಐಎಎಸ್ ಪಾಸ್; ಸುಳ್ಳು ಸುದ್ದಿ ಸ್ಫೂರ್ತಿ ತುಂಬಿದ ಕಥೆ
ಬೆಂಗಳೂರು, ಫೆಬ್ರವರಿ 02 : 'ಬಿಎಂಟಿಸಿ ಬಸ್ ಕಂಡಕ್ಟರ್ ಐಎಎಸ್ ಮುಖ್ಯ ಪರೀಕ್ಷೆ ಪಾಸು, ಮಾರ್ಚ್ನಲ್ಲಿ ಸಂದರ್ಶನ' ಐದು ದಿನಗಳ ಹಿಂದೆ ರಾಜ್ಯದಲ್ಲಿ ವೈರಲ್ ಆದ ಸುದ್ದಿ. ಇಂದಿಗೂ ಸಾಮಾಜಿಕ ತಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ಜನವರಿ 28ರಂದು ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಎರಡು ದಿನದಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿತು. ವಿವಿಧ ಕನ್ನಡ ಪತ್ರಿಕೆ, ಚಾನಲ್ಗಳಲ್ಲಿಯೂ ಈ ಸುದ್ದಿ ಪ್ರಕಟವಾಯಿತು. ಬಸ್ ಕಂಡಕ್ಟರ್ ಸಾಧನೆಗೆ ಜನರು ಸೆಲ್ಯೂಟ್ ಎಂದರು.
ರಸ್ತೆಯಲ್ಲಿ ಗೂಂಡಾ ವರ್ತನೆ ತೋರಿದ ಬಸ್ ಚಾಲಕ; ವಿಡಿಯೋ ವೈರಲ್
ಬಿಎಂಟಿಸಿ ಬಸ್ ಕಂಡಕ್ಟರ್ ಮಂಡ್ಯ ಮೂಲದ ಮಧು ಎನ್. ಸಿ. ಐಎಎಸ್ ಪರೀಕ್ಷೆ ಪಾಸಾಗಿಲ್ಲ. ಅವರು ನೀಡಿರುವ ರಿಜಿಸ್ಟರ್ ನಂಬರ್ ತಪ್ಪಿದೆ, ಈ ಸುದ್ದಿ ಸುಳ್ಳು ಎಂದು ವರದಿಯನ್ನು ಮೊದಲು ಪ್ರಕಟಿಸಿದ ಆಂಗ್ಲ ಪತ್ರಿಕೆಯ ಸಂಪಾದಕರು ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೆಳಕಿನ ವೇಗದಲ್ಲಿ ಸುದ್ದಿಗಳು ಶೇರ್ ಆಗುವ ಇಂದಿನ ಕಾಲದಲ್ಲಿ ಮಧು ಐಎಎಸ್ ಪಾಸಾಗಿರುವ ಸುದ್ದಿಗಳು ಅವರ ಚಿತ್ರದೊಂದಿಗೆ ಶೇರ್ ಆಗುತ್ತಿವೆ. ಟ್ರಾಲ್ ಪೇಜ್ಗಳಲ್ಲಿ ಮಧು ಸಾಧನೆಯನ್ನು ಕೊಂಡಾಡಲಾಗುತ್ತಿದೆ. ವರದಿಯನ್ನು ಪ್ರಕಟಿಸಿದ್ದ ಪತ್ರಿಕೆ ಈಗಾಗಲೇ ಅದರ ಲಿಂಕ್ ಅನ್ನು ಡಿಲೀಟ್ ಮಾಡಿಸಿದೆ.
ಒನ್ ಇಂಡಿಯಾ ಕನ್ನಡದಲ್ಲಿ ' ಐಎಎಸ್ ಅಧಿಕಾರಿ ಆಗುವ ಹಂತದಲ್ಲಿ ಬಸ್ ಕಂಡಕ್ಟರ್' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿ ಸುಳ್ಳು ಎಂದು ಈ ಮೂಲಕ ಸ್ಪಷ್ಟನೆಯನ್ನು ನೀಡಲಾಗುತ್ತಿದೆ.
ಸಂಪಾದಕರ ಟ್ವೀಟ್
ಮಧು ಐಎಎಸ್ ಪಾಸಾಗಿರುವ ಸುದ್ದಿಯ ಸತ್ಯಾಸತ್ಯತೆ ಒಂದು ಕಡೆ ಇರಲಿ. ಎಲ್ಲರ ಕೈಯಲ್ಲೂ ಮೊಬೈಲ್ ಇರುವ, ಒಂದು ಲಿಂಕ್ ಫೇಸ್ ಬುಕ್, ವಾಟ್ಸಪ್ ಎಂದು ನಿಮಿಷಗಳಲ್ಲಿ ಷೇರ್ ಆಗುವ ಇಂದಿನ ಕಾಲದಲ್ಲಿ ಈ ಸುಳ್ಳು ಸುದ್ದಿ ಅನೇಕರಿಗೆ ಸ್ಫೂರ್ತಿ ಆಗಿದೆ ಎಂದರೆ ಎಲ್ಲರೂ ನಂಬಬೇಕು.
ನಿತ್ಯಗಂಟೆ 8 ಗಂಟೆ ಕೆಲಸ ಮಾಡಿ, 5 ಗಂಟೆ ಯುಪಿಎಸ್ಸಿ ಪರೀಕ್ಷೆಗಾಗಿ ಮಧು ಓದುತ್ತಿದ್ದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರು ಸಹ ಸಂದರ್ಶನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದು ಸುದ್ದಿಯಾಗಿತ್ತು.
ಸುದ್ದಿ ಸತ್ಯವಾಗಿ ಇಲ್ಲದಿದ್ದರೂ ಈ ಸುಳ್ಳು ಸುದ್ದಿ ಅನೇಕರಿಗೆ ಸ್ಫೂರ್ತಿಯಾಗಿದ್ದು ನಿಜ. ಸಾವಿರಾರು ಜನರು ಐಎಎಸ್, ಐಪಿಎಸ್ ಪರೀಕ್ಷೆ ಪಾಸ್ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಅವರಿಗೆಲ್ಲ ಮಧು ಸುದ್ದಿ ಛಲ ತುಂಬಿತ್ತು.
ಈ ಸುದ್ದಿಯನ್ನು ನೋಡಿದ ಅನೇಕರು ನಾವು ಸಹ ಮಧುವಿನಂತೆ ಓದಿ ಪರೀಕ್ಷೆ ಪಾಸು ಮಾಡಬೇಕು, ಮಾಡಬಹುದು ಎಂದು ಸ್ಫೂರ್ತಿ ಪಡೆದಿದ್ದರು.