ನರೇಂದ್ರ ಮೋದಿ ಮಾಡಿದ ತಪ್ಪನ್ನೇ ರಾಹುಲ್ ಗಾಂಧಿಯೂ ಮಾಡಿದರಾ?!
ಬಳ್ಳಾರಿ, ಫೆಬ್ರವರಿ 10: ವಿರೋಧ ಪಕ್ಷವನ್ನು, ಅಥವಾ ರಾಜಕೀಯ ವಿರೋಧಿಗಳನ್ನು ಹಳಿಯುವುದೇ ಪ್ರಚಾರದ ಆದ್ಯ ಉದ್ದೇಶವಾದರೆ ಅಂಥ ಪ್ರಚಾರವನ್ನು ಜನರು ಮೆಚ್ಚುತ್ತಾರಾ? ಅಂಥ ಪ್ರಚಾರಗಳು ಪಕ್ಷದ ವರ್ಚಸ್ಸನ್ನು ಹೆಚ್ಚಿಸುತ್ತದಾ..? ಇದುವರೆಗೆ ಅಂಥ ಯಾವುದೇ ಪ್ರಚಾರಗಳು ಚುನಾವಣೆಯಲ್ಲಿ ಯಾವ ಪಕ್ಷಕ್ಕಾದರೂ ಗೆಲುವನ್ನು ತಂದುಕೊಟ್ಟಿದೆಯಾ?
ಈ ಪ್ರಶ್ನೆಗಳು ಪರಿವರ್ತನಾ ಯಾತ್ರೆಯ ಕೊನೇ ದಿನ ಪ್ರಧಾನಿ ಮೋದಿ ಭಾಷಣದ ನಂತರವೂ, ಇಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣದ ನಂತರವೂ ಹುಟ್ಟಿದ್ದರೆ ಅಚ್ಚರಿಯಿಲ್ಲ!
In Pics : ಹೊಸಪೇಟೆಯಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ
ಇಬ್ಬರೂ ಘಟಾನುಘಟಿ ನಾಯಕರು ಲಕ್ಷಾಂತರ ಜನ ಸೇರುವ ವೇದಿಕೆಯನ್ನು ಬಳಸಿಕೊಂಡಿದ್ದು ಪರಸ್ಪರ ಹಳಿದುಕೊಳ್ಳುವುದಕ್ಕಷ್ಟೇ! ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರವನ್ನು ಹಳಿದಾಗ ಕೇಳುವ ಶಿಳ್ಳೆ ಸದ್ದಾಗಲೀ, ಮೋದಿಯವರನ್ನು ರಾಹುಲ್ ಗಾಂಧಿ ಹಳಿದಾಗ ಏಳುವ ಚಪ್ಪಾಳೆ ಸದ್ದಾಗಲೀ ಮತವಾಗಿ ಪರಿವರ್ತನೆಯಾಗುತ್ತಾ..?!

ಕಾಂಗ್ರೆಸ್ ಹಳಿಯುವುದಕ್ಕೆ ಮೋದಿಗೆ ಸಿಕ್ಕ ವೇದಿಕೆ!
ಕಳೆದ ವಾರ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದರು. ಬಿಜೆಪಿ ಸರ್ಕಾರದ ಸಾಧನೆಯ ವರದಿಯನ್ನು ಮೋದಿಯ ಬಾಯಿಂದಲೇಕೇಳೋಣ ಎಂದುಕೊಂಡು ಹೋದವರೆಲ್ಲ ಪೆಚ್ಚುಮೋರೆ ಹಾಕಿಕೊಂಡು ವಾಪಸಾಗಬೇಕಾಯ್ತು!

ಮೋದಿ ಮೇಲೆ ಗೂಬೆ ಕೂರಿಸೋಕೆ ರಾಹುಲ್ ಗೂ ವೇದಿಕೆ!
ಇಂದು(ಫೆ.10) ಬಳ್ಳಾರಿಯಲ್ಲಿ ನಡೆದ ಜನಾಶಿರ್ವಾದ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕಾಂಗ್ರೆಸ್ ಸರ್ಕಾರದ ಸಾಧನೆಗಳತ್ತ ಮಾತನಾಡುವುದು ಬಿಟ್ಟು ತಮ್ಮ ಭಾಷಣದ ಬಹುಸಮಯವನ್ನು ಮೋದಿಯವರನ್ನು ತೆಗಳುವುದಕ್ಕೇ ಬಳಸಿದ್ದು, ಕಾಂಗ್ರೆಸ್ ಸಾಧನೆಯನ್ನು ಕೇಳಲು ಬಂದ ಜನರಲ್ಲಿ ನಿರಾಸೆ ಮೂಡಿಸಿತು! ತಮ್ಮ ನಾಲ್ಕು ದಿನದ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ಹೊಸಪೇಟೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯ ಸಭೆಯಲ್ಲಿ ಮೋದಿ ಮಾಡಿದ್ದೂ ಅದೇ!
ಇತ್ತೀಚೆಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ಒಂದು ಗಂಟೆಗಳ ತಮ್ಮ ಸಮಯವನ್ನು ಕಾಂಗ್ರೆಸ್ ಅನ್ನು ಹಳಿಯುವುದಕ್ಕೇ ಉಪಯೋಗಿಸಿಕೊಂಡಿದ್ದರು ಎಂದು ಇಂದು ರಾಹುಲ್ ಗಾಂಧಿ ಮಾತು ಆರಂಭಿಸುತ್ತಿದ್ದಂತೆಯೇ ನೆನಪಿಸಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುವುದಕ್ಕೆ ಕೇಲವೇ ನಿಮಿಷಗಳನ್ನು ಮೀಸಲಿಟ್ಟ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಅಪನಗದೀಕರ, ಗಬ್ಬರ್ ಸಿಂಗ್ ಟ್ಯಾಕ್ಸ್ ರೆಫಲ್ ವಿಮಾನ ಖರೀದಿ, ಗುಜರಾತ್ ಸ್ಥಿತಿ... ಹೀಗೇ ಪುಂಖಾನುಪುಂಖವಾಗಿ ಮೋದಿ ಹಳಿಕೆಗೆ ತಮ್ಮ ಸಮಯವನ್ನು ಮೀಸಲಿಟ್ಟರು!

ಮಹಾದಾಯಿ ಬಗ್ಗೆ ರಾಹುಲ್ ಗೂ ಮುನಿಸು..?!
ರಾಹುಲ್ ಗಾಂಧಿಯವರು ಭಾಷಣ ಮಾಡುವ ಮೊದಲು ಮಾತನಾಡಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ಭೇಟಿಯ ಸಮಯದಲ್ಲಿ ಮಹದಾಯಿ ಯೋಜನೆಯ ಬಗ್ಗೆ ಸೊಲ್ಲೆತ್ತಲಿಲ್ಲ' ಎಂದು ದೂರಿದ್ದರು. ಆದರೆ ಅವರ ನಂತರ ಮಾತನಾಡಿದ ರಾಹುಲ್ ಗಾಂಧಿಯವರೂ ಮಹದಾಯಿ ಬಗ್ಗೆ ಸೊಲ್ಲೆತ್ತದಿರುವುದು ಅಚ್ಚರಿ ಮುಡಿಸಿತು! ಒಟ್ಟಿನಲ್ಲಿ ಮಹದಾಯಿ ಬಗ್ಗೆ ಉಭಯ ನಾಯಕರಲ್ಲೂ ಈ ಪರಿ ಮುನಿಸೇಕೆ ಎಂಬುದು ಉತ್ತರ ಕರ್ನಾಟಕ ಜನರ ಪ್ರಶ್ನೆ!












Click it and Unblock the Notifications