BL Santosh: ಯಡಿಯೂರಪ್ಪ, ಬಿ. ಎಲ್. ಸಂತೋಷ್ ಭೇಟಿ; ಮೂವರ ಸೋಲಿಗೆ ತಂತ್ರ ರಚನೆ!
ಬೆಂಗಳೂರು, ಏಪ್ರಿಲ್ 25; ಕರ್ನಾಟಕದ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡು ಚುನಾವಣಾ ಕಣ ಅಂತಿಮಗೊಂಡಿದೆ. ವಿವಿಧ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದು, ಎದುರಾಳಿಗಳನ್ನು ಹೇಗೆ ಸೋಲಿಸಬೇಕು ಎಂದು ತಂತ್ರ ರೂಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿಯ ಪ್ರಮುಖ ನಾಯರಿಬ್ಬರ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ. ಎಲ್. ಸಂತೋಷ್ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಉತ್ತರ ಕರ್ನಾಟಕ, ಮೈಸೂರು ಭಾಗದ ಪ್ರವಾಸ ಮುಗಿಸಿ ಬಂದಿರುವ ಬಿ. ಎಲ್. ಸಂತೋಷ್ ಯಡಿಯೂರಪ್ಪ ಜೊತೆ ಕೆಲವು ಹೊತ್ತು ಚರ್ಚೆ ನಡೆಸಿ ವಾಪಸ್ ಆದರು.

ಬಿ. ಎಲ್. ಸಂತೋಷ್ ಭೇಟಿ ಬಳಿಕ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, "ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ. ಈ ಬಗ್ಗೆ ಸಂತೋಷ್ ಅವರಿಗೂ ಸಮಾಧಾನವಿದೆ" ಎಂದು ಹೇಳಿದರು.
ಮೂವರನ್ನು ಸೋಲಿಸಲು ತಂತ್ರ; ಬಿ. ಎಲ್. ಸಂತೋಷ್, ಯಡಿಯೂರಪ್ಪ ಭೇಟಿ ಸಮಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮೂವರು ಪ್ರಮುಖ ನಾಯಕರನ್ನು ಸೋಲಿಸಲು ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಇದೆ. ಇವರಲ್ಲಿ ಇಬ್ಬರು ನಾಯಕರು ಬಿಜೆಪಿ ಟಿಕೆಟ್ ಸಿಗದೆ ಕಾಂಗ್ರೆಸ್ ಪಕ್ಷಕ್ಕೆ ಹೋದ ನಾಯಕರು.

ಬಿಜೆಪಿ ನಾಯಕರ ಟಾರ್ಗೆಟ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್, ಅಥಣಿಯ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಮತ್ತು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ. ಈ ಮೂರು ಕ್ಷೇತ್ರಗಳಿಗೆ ಬಿಜೆಪಿ ಪ್ರತ್ಯೇಕ ಕಾರ್ಯತಂತ್ರವನ್ನು ರಚನೆ ಮಾಡಿದೆ. ಈ ಕುರಿತು ಬಿ. ಎಲ್. ಸಂತೋಷ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡುವಾಗ, "ವರುಣ ಕ್ಷೇತ್ರದಲ್ಲಿ ಬಿ. ಎಲ್. ಸಂತೋಷ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ನಿಲ್ಲಬೇಕಿತ್ತು. ಅವರು ಏಕೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ" ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಬಿ. ಎಲ್. ಸಂತೋಷ್ ಸಹ ಸಿದ್ದರಾಮಯ್ಯ ಸೋಲಿಸಬೇಕು ಎಂದು ಪಣ ತೊಟ್ಟಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಸಬೇಕು ಎಂದು ಬಿಜೆಪಿ ತಂತ್ರ ರೂಪಿಸುತ್ತಿದೆ. ಅದಕ್ಕಾಗಿ ಮೊದಲ ಹೆಜ್ಜೆಯಾಗಿ ಮೈಸೂರಿನ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರಾಳಿಯಾಗಿ ವಿ. ಸೋಮಣ್ಣ ಕಣಕ್ಕಿಳಿಸಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣರನ್ನು ವರುಣ ಮತ್ತು ಚಾಮರಾಜನಗರದಲ್ಲಿ ಕಣಕ್ಕಿಳಿಸಿ ಪಕ್ಷ ಲಿಂಗಾಯತ ದಾಳ ಉರುಳಿಸಿದೆ.
ಕಳೆದ ವಾರ ಬಿ. ಎಲ್. ಸಂತೋಷ್ ಮೈಸೂರು ಮತ್ತು ಚಾಮರಾಜನಗರ ಪ್ರವಾಸ ಕೈಗೊಂಡಿದ್ದರು. ವರುಣ ಕ್ಷೇತ್ರದಲ್ಲಿ ಗೆಲ್ಲಲು ಬೇಕಾದ ತಂತ್ರಗಳ ಕುರಿತು ಸ್ಥಳೀಯ ನಾಯಕರ ಜೊತೆ ಅವರು ಸಭೆ ನಡೆಸಿ, ಸಲಹೆ ನೀಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ ವರುಣದಲ್ಲಿ ಪ್ರಚಾರ ನಡೆಸಿದ್ದರು.
ಈ ಪ್ರವಾಸದ ಬಳಿಕ ಮಂಗಳವಾರ ಬಿ. ಎಲ್. ಸಂತೋಷ್ ಯಡಿಯೂರಪ್ಪ ಭೇಟಿ ಮಾಡಿ, ಅವರ ಸಲಹೆಯನ್ನು ಸಹ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಕರ್ನಾಟಕಲ್ಲಿ ಚುನಾವಣೆ ಘೋಷಣೆ ಆದ ಬಳಿಕ ಬಿ. ಎಲ್. ಸಂತೋಷ್ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ಒಂದು ಕಡೆ ಟಿಕೆಟ್ ಕೈತಪ್ಪಿದ ಬಿಜೆಪಿಯ ಕೆಲವು ನಾಯಕರು ಸಂತೋಷ್ ವಿರುದ್ಧ ಅಸಂತೋಷ ವ್ಯಕ್ತಪಡಿಸಿದ್ದರು. ಮತ್ತೊಂದು ಕಡೆ ಪಕ್ಷ ಸಂಘಟನೆ ಚತುರತೆ ವಿಚಾರದಲ್ಲಿಯೂ ಸಂತೋಷ್ ಸುದ್ದಿಯಲ್ಲಿದ್ದಾರೆ.












Click it and Unblock the Notifications