ಲೋಕಸಭಾ ಚುನಾವಣೆ 2024: ಕರ್ನಾಟಕದ ನಾಲ್ವರು ವಿಶೇಷ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್, ಹೊಸ ಟ್ರೆಂಡ್ ಹುಟ್ಟುಹಾಕಿದ ಕೇಸರಿ ಪಕ್ಷ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿರೋಧದ ನಡುವೆಯೂ ಹಲವು ಹೊಸಬರಿಗೆ ಮಣೆ ಹಾಕಿದ್ದ ಭಾರತೀಯ ಜನತಾ ಪಾರ್ಟಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಕೂಡ ಹಲವು ಕಡೆಗಳಲ್ಲಿ ಹೊಸಬರಿಗೆ ಅವಕಾಶ ನೀಡಿದೆ.
ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯು ಅಸಾಧಾರಣ ಹಾಗೂ ಖ್ಯಾತನಾಮರನ್ನು ಕಣಕ್ಕಿಳಿಸಿದೆ.

ರಾಜಕೀಯ ಹಿನ್ನೆಲೆ ಇಲ್ಲದೇ ಇದ್ದರೂ, ಜನಸೇವೆ ಮಾಡಲು ಬಯಸುವ, ಸಮಾಜದಲ್ಲಿ ತಮ್ಮ ಸಮಾಜ ಸೇವೆಯಿಂದ ಉತ್ತಮ ಹೆಸರು ಪಡೆದಿರುವ ನಾಲ್ವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ನಾಲ್ಕು ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ವಿವರ ಇಲ್ಲಿದೆ.
ಹೃದಯ ಗೆದ್ದ ಹೃದ್ರೋಗ ತಜ್ಞ 'ಡಾ.ಸಿ.ಎನ್. ಮಂಜುನಾಥ್'
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹೆಸರಾಂತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಇಡೀ ದೇಶದಲ್ಲೇ ಇಂದು ಹೆಸರಾಗಿರುವ ಶ್ರೀ ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಅಪಾರ ಹೆಸರು ಮಾಡಿರುವ ಡಾ.ಸಿ.ಎನ್. ಮಂಜುನಾಥ್ ವೈದ್ಯಕೀಯ ಸೇವೆಯಿಂದ ನಿವೃತ್ತಿಯಾದ ಬಳಿಕ ಜನಸೇವೆ ಮಾಡಲು ಮುಂದಾಗಿದ್ದಾರೆ.

ವೈದ್ಯರಾಗಿ 26,000 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರ ಸೇವೆಗೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.
ಯಾವ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ, ಉನ್ನತ ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಕಲ್ಪಿಸಿದರು. ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೊದಲು ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಇಲ್ಲಿ ಚಿಕಿತ್ಸೆಗಳು ಕೂಡ ಕಡಿಮೆ ವೆಚ್ಚದಲ್ಲಿ ನೀಡುತ್ತಿರುವುದು ಬಡವರಿಗೆ, ಮಧ್ಯಮವರ್ಗದವರಿಗೆ ವರವಾಗಿದೆ.
ದಕ್ಷಿಣ ಕನ್ನಡದ ಮಾಜಿ ಯೋಧ 'ಕ್ಯಾಪ್ಟನ್ ಬ್ರಿಜೇಶ್ ಚೌಟಾ'
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಾಜಿ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಗೂರ್ಖಾ ರೆಜಿಮೆಂಟ್ನ ಭಾಗವಾಗಿ ಏಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನದಲ್ಲಿ ಪದವಿ ಕೂಡ ಪಡೆದಿದ್ದಾರೆ. 2013ರಲ್ಲಿ ಬಿಜೆಪಿ ಸೇರಿದ ಅವರು, ಪ್ರಸ್ತುತ ಬಿಜೆಪಿಯ ಕರ್ನಾಟಕ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬ್ರಿಜೇಶ್ ಚೌಟಾ ಅವರು ಸೇನಾ ಅವಧಿಯಲ್ಲಿ ಮಣಿಪುರ ಮತ್ತು ಅಸ್ಸಾಂನಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಅವರು ವಾಣಿಜ್ಯೋದ್ಯಮಿ ಕೂಡ ಆಗಿದ್ದು, ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ.
ರಾಜಕೀಯ ಚಟುವಟಿಕೆ ಜೊತೆ, ಸಮರ್ಥನ್ ಫೌಂಡೇಶನ್ ಮೂಲಕ ಮಂಗಳೂರಿನಲ್ಲಿ ಸಮಾಜ ಸೇವೆ ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದು, ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಲಿಟರೇಚರ್ ಫೆಸ್ಟಿವಲ್ ಅನ್ನು ಮಂಗಳೂರಿನಲ್ಲೂ ನಡೆಯುವಂತೆ ಮಾಡಿದರು. ಅವರ ಪರಿಶ್ರಮದಿಂದ 2019ರಿಂದ ಮಂಗಳೂರಿನಲ್ಲಿ ಲಿಟರೇಚರ್ ಫೆಸ್ಟಿವಲ್ ನಡೆಯುತ್ತಿದೆ. ಕಂಬಳಕ್ಕೆ ನಿಷೇಧ ಹೇರಿದಾಗಲೂ ಅದರ ವಿರುದ್ಧ ಹೋರಾಡಿದ್ದರು.
ಮಾಜಿ ಸೈನಿಕನೊಬ್ಬ ಸಂಸದನಾಗಿ ಲೋಕಸಭೆ ಪ್ರವೇಶಿಸುವುದು ನಿಜಕ್ಕೂ ವಿಶೇಷವೇ ಸರಿ. ಉತ್ತಮ ನಾಯಕ ಎನಿಸಿಕೊಂಡಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟಾ ತಮ್ಮ ಮೊದಲ ಚುನಾವಣೆಯಲ್ಲಿ ಸಂಸತ್ ಪ್ರವೇಶಿಸುವ ಆತ್ಮವಿಶ್ವಾಸ ಹೊಂದಿದ್ದಾರೆ.
ರಾಜ ವಂಶದ ಕುಡಿ 'ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್'
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ್ದು, ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ.

ಯದುವೀರ್ ಒಡೆಯರ್ ಅವರು ಮಸಾಚುಸೆಟ್ಸ್ ವಿಶ್ವವಿದ್ಯಾನಿಲಯದ ಪದವೀಧರರಾಗಿದ್ದಾರೆ. ಮೈಸೂರು ರಾಜಮನೆತನಕ್ಕೆ ಸೇರಿದ ಅವರು, ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
ಒಡೆಯರ್ ಕುಟುಂಬಕ್ಕೆ ರಾಜಕಾರಣ ಹೊಸದೇನೂ ಅಲ್ಲ, ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಾಲ್ಕು ಬಾರಿ ಅವರು ಗೆಲುವು ಸಾಧಿಸಿದ್ದರೆ, 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
ಈಗ ಯದುವೀರ್ ಒಡೆಯರ್ ಅವರು ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗುವ ವಿಶ್ವಾಸ ಹೊಂದಿದ್ದಾರೆ. ರಾಜಮನೆತನದ ಕುಟುಂಬದ ಬಗ್ಗೆ ಮೈಸೂರು ಜನ ಕೂಡ ವಿಶೇಷ ಒಲವು ಹೊಂದಿದ್ದಾರೆ.
ಆಧುನಿಕ ಶಿಕ್ಷಣ, ಸಾಂಪ್ರದಾಯಿಕ ಪರಂಪರೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಬದ್ಧತೆನ್ನು ಹೊಂದಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಿಂದಿನ ಮತ್ತು ವರ್ತಮಾನದ ಸೇತುವೆಯಂತಿದ್ದಾರೆ.
ಹೆಸರುವಾಸಿ ಮೂಳೆ ಶಸ್ತ್ರಚಿಕಿತ್ಸಕ 'ಡಾ.ಬಸವರಾಜ ಕ್ಯಾವಟೂರು'
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಬಸವರಾಜ ಕ್ಯಾವಟೂರು ಕಣಕ್ಕಿಳಿಯಲಿದ್ದಾರೆ. ಖ್ಯಾತ ಮೂಳೆ ಶಸ್ತ್ರಚಿಕಿತ್ಸಕರಾಗಿರುವ ಅವರು ಕೆಎಸ್ ಆಸ್ಪತ್ರೆಯ ಮಾಲೀಕರಾಗಿದ್ದಾರೆ.

ವೈದ್ಯರಾಗಿ ತಮ್ಮ ಸಮಾಜ ಸೇವೆಯ ಗುಣದಿಂದ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ವೈದ್ಯಕೀಯ ವೃತ್ತಿಪರರಾಗಿ, ಅವರು ವೈದ್ಯಕೀಯ ಶಿಬಿರಗಳು, ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ.
ವೈದ್ಯರಾಗಿ ಆರೋಗ್ಯ ಕ್ಷೇತ್ರದಲ್ಲಿ ಜನಸೇವೆ ಮಾಡಿರುವ ಅವರು, ಈಗ ರಾಜಕೀಯ ಕ್ಷೇತ್ರದಲ್ಲಿ ಜನರ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.












Click it and Unblock the Notifications