ಕರ್ನಾಟಕದಲ್ಲಿ ಡಿಸಿಎಂ ಕುರ್ಚಿ ಜಗಳ ಒಂದು ಮೆಗಾ ಸೀರಿಯಲ್!
ಬೆಂಗಳೂರು, ಸೆಪ್ಟೆಂಬರ್ 26; ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾದರು. ಆದರೆ ಈಗ ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ಉಪ ಮುಖ್ಯಮಂತ್ರಿ ಸ್ಥಾನದ ಚರ್ಚೆಗಳು ಜೋರಾಗಿವೆ.
ಉಪ ಮುಖ್ಯಮಂತ್ರಿ ಹುದ್ದೆಯ ಚರ್ಚೆಯ ವಿಚಾರ ದೆಹಲಿಗೂ ತಲುಪಿದೆ. "ಈ ರೀತಿಯ ವಿಚಾರಗಳು ಪಕ್ಷದ ಒಳಗಾಗಲೀ, ಹೊರಗಡೆಯಾಗಲಿ ಚರ್ಚೆಯಾದಲ್ಲಿ ನಾನು ಸಹಿಸುವುದಿಲ್ಲ" ಎಂದು ಕರ್ನಾಟಕ ಕಾಂಗ್ರೆಸ್ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಖಡಕ್ ಸೂಚನೆ ಕೊಟ್ಟಿದ್ದಾರೆ.

ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದೆ. 'ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಕುರ್ಚಿ ಜಗಳ ಒಂದು ಮೆಗಾ ಸೀರಿಯಲ್ನ ಎಪಿಸೋಡ್ಗಳಂತೆ..!!, ಅದೆಂದಿಗೂ ಮುಗಿಯದ ಕಥೆ..!!' ಎಂದು ಲೇವಡಿ ಮಾಡಿದೆ.
ಬಿಜೆಪಿಯ ಟ್ವೀಟ್; ಬಿಜೆಪಿ ತನ್ನ ಟ್ವೀಟ್ನಲ್ಲಿ, "ಮೂರು ಡಿಸಿಎಂ ಚರ್ಚೆಗಳು ಈಗಾಗಲೇ ಮುಗಿದಿದ್ದು, ಪ್ರಸ್ತುತ ಆರು ಡಿಸಿಎಂಗಳ ಚರ್ಚೆ ನಡೆಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, 12 ಡಿಸಿಎಂ ಸ್ಥಾನ ಸೃಷ್ಟಿಸಿ ಎಂಬ ಕೂಗು ಕೇಳಿದರೂ ಅಚ್ಚರಿ ಇಲ್ಲ..!!' ಎಂದು ವ್ಯಂಗ್ಯವಾಡಿದೆ.
'ಆದರೆ ದೆಹಲಿಯ ಕಲೆಕ್ಷನ್ ಏಜೆಂಟ್ ಸುರ್ಜೆವಾಲಾರವರು ಮಾತ್ರ ಮೂವರು ಡಿಸಿಎಂ ಹೇಳಿಕೆಯನ್ನು ಮಟ್ಟ ಹಾಕಲಾಗುವುದು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುರ್ಜೆವಾಲಾರವರು ಡಿಸಿಎಂ ಜಗಳಕ್ಕೆ ಇತಿಶ್ರೀ ಹಾಡಲು ಸೂಚನೆ ನೀಡಿದ್ದಾರೋ ಅಥವಾ ಮುಂದುವರೆಸಲು ಸೂಚನೆ ನೀಡಿದ್ದಾರೋ ಎಂಬ ಅನುಮಾನ ಮೂಡುವುದಂತು ಸಹಜ' ಎಂದು ಬಿಜೆಪಿ ಟ್ವೀಟ್ನಲ್ಲಿ ಹೇಳಿದೆ.
ಸುರ್ಜೇವಾಲ ಖಡಕ್ ಮಾತು; ಕರ್ನಾಟಕ ಕಾಂಗ್ರೆಸ್ನ ಉಪ ಮುಖ್ಯಮಂತ್ರಿ ಹುದ್ದೆ ಚರ್ಚೆಯ ಕುರಿತು ರಣದೀಪ್ ಸುರ್ಜೇವಾಲ ಖಡಕ್ ಮಾತುಗಳನ್ನು ಆಡಿದ್ದರು. "ನಾವು ಕರ್ನಾಟಕ ಸರ್ಕಾರದ ಯೋಜನೆ ಹಾಗೂ ಮಾದರಿಗಳ ಕುರಿತು ಮಾತನಾಡಬೇಕು. 3 ಡಿಸಿಎಂ ಸ್ಥಾನಗಳ ಸೃಷ್ಟಿಯ ಬಗ್ಗೆಯಲ್ಲ. ಈ ರೀತಿಯ ವಿಚಾರಗಳು ಪಕ್ಷದ ಒಳಗಾಗಲೀ, ಹೊರಗಡೆಯಾಗಲಿ ಚರ್ಚೆಯಾದಲ್ಲಿ ನಾನು ಸಹಿಸುವುದಿಲ್ಲ" ಎಂದಿದ್ದರು.
ಸಹಕಾರ ಸಚಿವ ಕೆ. ಎನ್. ರಾಜಣ್ಣ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಅವರು, "ಈಗಾಗಲೇ ಈ ಬಗ್ಗೆ ಕೆ. ಸಿ. ವೇಣುಗೋಪಾಲ್ ಅವರೂ ಸೂಚನೆ ನೀಡಿದ್ದಾರೆ. ಪಕ್ಷದ ಕೆಲ ನಾಯಕರಿಂದಲೂ ಈ ರೀತಿಯ ಹೇಳಿಕೆಗಳು ಅಲ್ಲಲ್ಲಿ ಹೊರ ಬರುತ್ತಿವೆ. ಹಾಗಾಗಿ ನಾನು ಮಾಧ್ಯಮದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಹೇಳಿದ್ದರು.
ಬಿಜೆಪಿ ಮತ್ತೊಂದು ಪೋಸ್ಟ್ನಲ್ಲಿ, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಬಣಗಳ ಒಳ ಜಗಳ ಅಂತ್ಯ ಕಾಣುತ್ತಿಲ್ಲ. ಸರ್ಕಾರ ರಚನೆಯ ಆರಂಭದ ದಿನಗಳಲ್ಲೇ ಸ್ವತಃ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಸರ್ಕಾರಿ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಆಡಳಿತಾತ್ಮಕ ವಿಚಾರದಲ್ಲಿ ಮೂಗು ತೂರಿಸಿದ್ದರು' ಎಂದು ದೂರಿದೆ.
'ಸಿಎಂ, ಡಿಸಿಎಂ ನಾಮಕಾವಸ್ತೆಗೆ ಅಷ್ಟೇ ಸೀಮಿತವಾಗಿದ್ದು ಶ್ಯಾಡೋ ಸಿಎಂ ಸೇರಿ ಮೂರನೇ ವ್ಯಕ್ತಿಯ ಕೈಗಳೇ #ATMSarkara ದಲ್ಲಿ ಓಡಾಡುತ್ತಿವೆ. ಹೀಗಾಗಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ' ಎಂದು ಹೇಳಿದೆ.
'ಕಾವೇರಿ ತಮಿಳುನಾಡಿಗೆ ಹರಿಯಲು ಕಾಂಗ್ರೆಸ್ ಹೈಕಮಾಂಡ್ ಕಾರಣವಾದರೆ ಅದನ್ನು ತಡೆಯುವ ತಾಕತ್ತು ಸಿದ್ದರಾಮಯ್ಯ ಅವರ ಸರ್ಕಾರಕ್ಕಿಲ್ಲ. ಒಳ ಜಗಳ ಮಿತಿ ಮೀರಿದ ಹಿನ್ನಲೆ ಇದೀಗ ಸ್ವತಃ ಕರ್ನಾಟಕ ಸರ್ಕಾರವನ್ನು ಹೈಜಾಕ್ ಮಾಡಿ ಸುರ್ಜೇವಾಲಾ, ಕೆ. ಸಿ. ವೇಣುಗೋಪಾಲ್ ಅವರುಗಳನ್ನು ಆಡಳಿತ ನಡೆಸಲು ಬಿಟ್ಟಂತಿದೆ..!' ಎಂದು ಬಿಜೆಪಿ ಆರೋಪಿಸಿತ್ತು.












Click it and Unblock the Notifications