ಕಾಂಗ್ರೆಸ್ ಸರ್ಕಾರದ 1 ತಿಂಗಳ ಸಾಧನೆಗಳ ಪಟ್ಟಿ ಕೊಟ್ಟ ಬಿಜೆಪಿ!
ಬೆಂಗಳೂರು, ಜುಲೈ 04; ಕರ್ನಾಟಕಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಹಲವು ಜಾರಿಗೆ ಬಂದಿದೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಾಧನೆ ಏನು?. ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ಒಂದು ತಿಂಗಳ ಸಾಧನೆಗಳ ಪಟ್ಟಿಯನ್ನು ಮಂಗಳವಾರ ನೀಡಿದೆ.

ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ, 'ರಾಜ್ಯದಲ್ಲಿ @siddaramaiahರ #ATMSarkara ಒಂದು ತಿಂಗಳ ಅವಧಿಯಲ್ಲೇ ಮಾಡಿದ ಘನಾಂಧಾರಿ ಸಾಧನೆಗಳ ಪಟ್ಟಿ' ಎಂದು ಹಲವು ಅಂಶಗಳನ್ನು ಉಲ್ಲೇಖ ಮಾಡಿದೆ. ಎಟಿಎಂ ಸರ್ಕಾರ ಎಂಬ ಹ್ಯಾಷ್ಟ್ಯಾಗ್ ಬಳಕೆ ಮಾಡಿ ಸರ್ಕಾರವನ್ನು ಟೀಕಿಸಿದೆ.
'ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬರ ಬಂದಿದೆ. ಶಾಂತಿ, ನೆಮ್ಮದಿಯ ಬೆಳೆ ಇಲ್ಲ, ಜನರಿಗೆ ಬೆಲೆ ಏರಿಕೆಯ ಬರೆ ಎಳೆದು, ಕಿವಿಯ ಮೇಲೆ ಕಲರ್ ಕಲರ್ ಹೂ ಇಡುವುದು ಉಚಿತ, ಖಚಿತ, ನಿಶ್ಚಿತ' ಎಂದು ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದೆ.
ಬಿಜೆಪಿ ನೀಡಿದ ಸಾಧನೆಗಳ ಪಟ್ಟಿ
* ಸರ್ಕಾರಿ ಇಲಾಖೆಯ ಅಧಿಕಾರಿಗಳ ಜತೆ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕಮಿಷನ್ ಸಭೆ..!
* ಚುನಾವಣಾ ಪೂರ್ವ ಘೋಷಿಸಿದ ಗ್ಯಾರಂಟಿಗಳ ಮುಂದೂಡಿಕೆ ಜತೆಗೆ ನೀಡದ ಗ್ಯಾರಂಟಿಗೆ ಕಂಡೀಷನ್ ಅಪ್ಲೈ..!
* ವಿದ್ಯುತ್, ಕುಡಿಯುವ ನೀರು, ತಿನ್ನುವ ಅಕ್ಕಿ ಸೇರಿ ಎಲ್ಲಾ ಬೆಲೆಯೂ ಏರಿಕೆ..!
* ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಕಾಯಿದೆ ವಾಪಸ್..!
* ಪಠ್ಯ ಪುಸ್ತಕದಲ್ಲಿ ಎಡಬಿಡಂಗಿ ಸಿದ್ಧಾಂತದ ಹೇರಿಕೆ, ಕ್ರಾಂತಿಕಾರಿಗಳು, ರಾಜರ ಪಾಠಗಳಿಗೆ ಕೂಕ್..!
* ಅಕ್ರಮ ಮರಳು ಮಾಫಿಯಾಗೆ ಚಾಲನೆ ಕೊಟ್ಟು ಕರ್ತವ್ಯ ನಿರತ ಪೊಲೀಸ್ ಪೇದೆಯ ಕೊಲೆ..!
* ಬರಗಾಲದ ಕರಿಛಾಯಿ ಆವರಿಸಿದರೂ ಕ್ರಮಕೈಗೊಳ್ಳದೆ ಅನ್ನದಾತನ ಮೊದಲ ಬಲಿ ಪಡೆದ ಹೆಗ್ಗಳಿಕೆ..!
* ಶುದ್ಧ ಕುಡಿಯುವ ನೀರು ಪೂರೈಸಲಾಗದೆ ಅಮಾಯಕ ಜೀವಗಳ ಬಲಿ ಪಡೆದ ಕುಖ್ಯಾತಿ..!
* ಅಬಕಾರಿ ಇಲಾಖೆಯ ಉನ್ನತ ಹುದ್ದೆಗಳು ಕೋಟಿ ಕೋಟಿಗೆ ಸೇಲ್, ವರ್ಗಾವಣೆ ದಂಧೆಗೆ ಇಳಿದ ಶ್ಯಾಡೋ ಸಿಎಂ ಯತೀಂದ್ರ..!
* ಕುರ್ಚಿ ಬಿಡಲು ತಯಾರಲ್ಲಿದ ಸಿದ್ದರಾಮಯ್ಯ, ಪಟ್ಟು ಬಿಡದ ಡಿಕೆ ಶಿವಕುಮಾರ್ ಕಾದಾಟದಲ್ಲೇ ಕಾಲ ಹರಣ..!
ಗ್ಯಾರಂಟಿಯ ನಿಜಾಂಶ ಇಷ್ಟೇ; ಸೋಮವಾರ ಕರ್ನಾಟಕ ಬಿಜೆಪಿ ಟ್ವೀಟ್ ಒಂದನ್ನು ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಯ ನಿಜಾಂಶ ಇಷ್ಟೇ: ಗೃಹಜ್ಯೋತಿಗೆ ಶೇ.10 ಮಾತ್ರ ಗ್ಯಾರಂಟಿ, ನಿರುದ್ಯೋಗ ಭತ್ಯೆಯ ಜತೆಗೆ ನಿರುದ್ಯೋಗ ಫ್ರೀ, ಅನ್ನಭಾಗ್ಯಕ್ಕೆ ಕೇಂದ್ರದ ಅಕ್ಕಿ ಮಾತ್ರ ಗ್ಯಾರಂಟಿ, ಗೃಹಲಕ್ಷ್ಮಿಯರು ಯಾರೆಂಬುದೇ ಗೊಂದಲ, ಅಂಗನವಾಡಿ ಕಾರ್ಯಕರ್ತೆಯರಿಗೆ "ಪ್ರಿಯ" ಮೋಸ ಎಂದು ಟೀಕೆ ಮಾಡಿತ್ತು.
ಮತ್ತೊಂದು ಟ್ವೀಟ್ನಲ್ಲಿ, 'ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೆವೆಂದು ಸುಳ್ಳಿನಿಂದ ಶುರುವಾದ #ATMSarkara ಅಧಿಕಾರಕ್ಕೆ ಬಂದ ನಂತರದ ಪ್ರತಿ ಕ್ಷಣದಿಂದಲೂ ದ್ವೇಷವೇ ನಮ್ಮ ತಂದೆ-ತಾಯಿ, ದ್ವೇಷವೇ ನಮ್ಮ ಬಂಧು-ಬಳಗ ಎನ್ನುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಒಂದು ತಿಂಗಳು ಪೂರೈಸಿದೆ. ರಾಜ್ಯದ ಇತಿಹಾಸದಲ್ಲಿಯೇ ಕೇವಲ ಒಂದು ತಿಂಗಳಲ್ಲಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವುದು ಸಿದ್ದರಾಮಯ್ಯ ರವರ ಸರ್ಕಾರದ ಏಕೈಕ ಸಾಧನೆ' ಎಂದು ಹೇಳಿತ್ತು.












Click it and Unblock the Notifications