ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಶೈಕ್ಷಣಿಕ ಪ್ರವಾಸ; ಬಿಜೆಪಿ ವ್ಯಂಗ್ಯ
ಬೆಂಗಳೂರು, ಜನವರಿ 10; ಕರ್ನಾಟಕ ಕಾಂಗ್ರೆಸ್ ನಾಯಕರ 'ಪ್ರಜಾಧ್ವನಿ ಯಾತ್ರೆ'ಯನ್ನು ಬಿಜೆಪಿ ವ್ಯಂಗ್ಯವಾಡಿದೆ. 'ಡಬಲ್ಎಂಜಿನ್ ಸರ್ಕಾರದ ಪರಿಣಾಮ ರಾಜ್ಯದಲ್ಲಿ ಉತ್ತಮ ರಸ್ತೆಗಳು ನಿಮಗೆ ಇಷ್ಟು ವೇಗದಲ್ಲಿ ಸುದೀರ್ಘ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ' ಎಂದು ಹೇಳಿವೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೆ ಬುಧವಾರ ಚಾಲನೆ ಸಿಕ್ಕಿದೆ. 21 ಜಿಲ್ಲೆಗಳಲ್ಲಿ ಸಂಚಾರ ನಡೆಸುವ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟಾಗಿ ಸಾಗಲಿದ್ದಾರೆ.
ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, 'ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರದ್ದು ಪರಸ್ಪರ ಮಾರಕ ಜೊತೆಗಾರಿಕೆ. ಅವರನ್ನು ಒಂದು ಮಾಡುವ ಪ್ರಯತ್ನವನ್ನು ಕೈ ಹೈಕಮಾಂಡ್ ಹಲವು ಬಾರಿ ಮಾಡಿ ಸೋತಿದೆ. ಬಸ್ ಯಾತ್ರೆ ಎಂಬುದು ಅದರ ಮುಂದುವರಿದ ಭಾಗದ ಪ್ರಯೋಗ' ಎಂದು ಹೇಳಿದೆ.
ಬಸ್ ಯಾತ್ರೆ ಬಗ್ಗೆ ಸಿದ್ದರಾಮಯ್ಯ ಫೇಸ್ಬುಕ್ ಪೋಸ್ಟ್ ಹಾಕಿದ್ದು, 'ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಕೊನೆಗಾಣಿಸಿ, ಜನಪರವಾದ, ಅಭಿವೃದ್ಧಿಪರವಾದ ಕಾಂಗ್ರೆಸ್ ಸರ್ಕಾರ ಸ್ಥಾಪನೆಗೆ ನಮ್ಮ ಪ್ರಜಾಧ್ವನಿ ಯಾತ್ರೆ ಮುನ್ನುಡಿಯಾಗಲಿದೆ. ಬನ್ನಿ, ಭಾಗವಹಿಸಿ, ಕರುನಾಡಿಗಾಗಿ ಕೈಜೋಡಿಸಿ' ಎಂದು ಕರೆ ನೀಡಿದ್ದಾರೆ.

ಸುದೀರ್ಘ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ
ಬಿಜೆಪಿ ತನ್ನ ಟ್ವೀಟ್ನಲ್ಲಿ, 'ಹತ್ತು ದಿನಗಳಲ್ಲಿ 20 ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ಒಂದು ಉತ್ತಮವಾದ ಶೈಕ್ಷಣಿಕ ಪ್ರವಾಸ. ಡಬಲ್ಎಂಜಿನ್ ಸರ್ಕಾರದ ಪರಿಣಾಮ ರಾಜ್ಯದಲ್ಲಿ ಉತ್ತಮ ರಸ್ತೆಗಳು ನಿಮಗೆ ಇಷ್ಟು ವೇಗದಲ್ಲಿ ಸುದೀರ್ಘ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ' ಎಂದು ಹೇಳಿದೆ.
'ಪ್ರಜಾಧ್ವನಿ ಅರಿಯಲು ಇದು ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ. ಐದು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತಕ್ಕೆ ಬೇಸತ್ತು ಮತದಾರರು ನಿಮ್ಮ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಿದರು. ಈಗ ನೆಮ್ಮದಿಯಿಂದ ಬದುಕುತ್ತಿರುವ ಜನರಲ್ಲಿ ಮತ್ತೆ ಭಯ ಹುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದೀರಿ' ಎಂದು ಟ್ವೀಟ್ ಮಾಡಿದೆ.

ಪ್ರಜಾದ್ರೋಹಯಾತ್ರೆ ಎಂದ ಬಿಜೆಪಿ
'ನಿಮ್ಮ ಅಧಿಕಾರಾವಧಿಯಲ್ಲಿ ಡಿ. ಕೆ. ರವಿಯವರಂಥ ನಿಷ್ಠಾವಂತ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೋಲಾರದ ಜನತೆ ಮರೆತಿಲ್ಲ. ಆ ಕಡೆಗೂ ನಿಮ್ಮ ಬಸ್ ಹೋಗಲಿ, ಜನರ ನೋವು, ಸಂಕಟ ಏನೆಂದು ನಿಮಗೂ ತಿಳಿಯಬಹುದು' ಎಂದು ಹೇಳಿರುವ ಬಿಜೆಪಿ ತನ್ನ ಟ್ವೀಟ್ಗೆ #ಪ್ರಜಾದ್ರೋಹಯಾತ್ರೆ ಎಂಬ ಹ್ಯಾಷ್ಟ್ಯಾಗ್ ಬಳಕೆ ಮಾಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 'ಜನ ಈ ಸರ್ಕಾರದ ದ್ವೇಷ ರಾಜಕೀಯದಿಂದ ಬೇಸತ್ತು ಹೋಗಿದ್ದಾರೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರು, ರೈತರು ಆತಂಕದಿಂದ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಇಂದು ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಎರಡು ದಶಕಗಳಷ್ಟು ಹಿಂದಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ನಾವು ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ಧ್ವನಿಯಾಗಬೇಕು ಎಂದು ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.

ಯಾತ್ರೆಯ ಉದ್ದೇಶವೇನು ಎಂದು ಸಿದ್ದರಾಮಯ್ಯ ವಿವರಣೆ
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಸಿದ್ದರಾಮಯ್ಯ ಮಾತನಾಡಿ, "ಯಾತ್ರೆಯ ಮೂಲಕ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಮೊದಲು ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಯಾತ್ರೆ ಮಾಡಿ, ನಂತರ ಸಮಯದ ಅಭಾವ ಇರುವುದರಿಂದ 2 ತಂಡಗಳಾಗಿ ವಿಂಗಡಿಸಿ ಯಾತ್ರೆ ಮಾಡಲಿದ್ದೇವೆ" ಎಂದರು.
"ಡಿ. ಕೆ. ಶಿವಕುಮಾರ್ ಹಾಗೂ ಇತರೆ ಹಿರಿಯ ನಾಯಕರ ನೇತೃತ್ವದಲ್ಲಿ ಒಂದು ತಂಡ ಮತ್ತು ನಾನು ಹಾಗೂ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಇನ್ನೊಂದು ತಂಡ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ. ಮೊದಲ ಹಂತದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಭೇಟಿ ನೀಡಲಿದೆ. ಡಿ. ಕೆ. ಶಿವಕುಮಾರ್ ಅವರ ತಂಡ ಹಳೇ ಮೈಸೂರು ಭಾಗದಲ್ಲಿ ಯಾತ್ರೆ ನಡೆಸಲಿದೆ. ಎರಡನೇ ಹಂತದ ಪ್ರವಾಸದಲ್ಲಿ ನಮ್ಮ ತಂಡ ಹಳೇ ಮೈಸೂರು ಭಾಗದಲ್ಲಿ ಯಾತ್ರೆ ಮಾಡಲಿದೆ. ಶಿವಕುಮಾರ್ ಅವರ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಹೋಗಲಿದೆ. ಹೀಗೆ ರಾಜ್ಯದ ಮೂಲೆ ಮೂಲೆಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪುರಾಣ, ಸಾಲದ ಹೊರೆ, ದ್ವೇಷ ರಾಜಕಾರಣವನ್ನು ಜನರ ಮುಂದಿಡುತ್ತೇವೆ" ಎಂದು ಸಿದ್ದರಾಮಯ್ಯ ಹೇಳಿದರು.

ಯಾತ್ರೆ ಬಗ್ಗೆ ಡಿ. ಕೆ. ಶಿವಕುಮಾರ್ ಹೇಳಿಕೆ
ಬಸ್ ಯಾತ್ರೆ ಬಗ್ಗೆ ಡಿ. ಕೆ. ಶಿವಕುಮಾರ್ ಮಾತನಾಡಿ, "ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಪ್ರಜಾಧ್ವನಿ ಪ್ರಜೆಗಳ ಧ್ವನಿ. ಮೂರೂವರೆ ವರ್ಷದ ಬಿಜೆಪಿ ಸರ್ಕಾರದ ವೈಫಲ್ಯ, ಜನರ ಬದುಕಿಗಾಗಿ ಕಾಂಗ್ರೆಸ್ ಏನೂ ಮಾಡಲು ಸಿದ್ಧವಿದೆ ಎಂದು ತಿಳಿಸಲು ಈ ಯಾತ್ರೆ ಹಮ್ಮಿಕೊಂಡಿದ್ದೇವೆ" ಎಂದರು.
ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಯಾತ್ರೆ ಸಾಗುವ ಬಸ್ಗೆ ಪೂಜೆ ಸಲ್ಲಿಸಿದರು. ಬೆಳಗಾವಿಯಲ್ಲಿ ಬುಧವಾರ ಬಸ್ ಯಾತ್ರೆಗೆ ಚಾಲನೆ ಸಿಕ್ಕಿದೆ.












Click it and Unblock the Notifications