ಸಮ್ಮಿಶ್ರ ಸರಕಾರದ ಅಸ್ಥಿರತೆ: ಬಿಜೆಪಿ ಬಿಡುಗಡೆ ಮಾಡಿದ ತುರ್ತು ಮಾಧ್ಯಮ ಪ್ರಕಟಣೆ
ಜಾರಕಿಹೊಳಿ ಸಹೋದರರು ಸದ್ಯಕ್ಕೂ ಸುಮ್ಮನಾದರೂ, ಸಿದ್ದರಾಮಯ್ಯ ವಿದೇಶದಿಂದ ವಾಪಸ್ ಬಂದರೂ, ಸಮ್ಮಿಶ್ರ ಸರಕಾರ ಅಸ್ಥಿರತೆಯ ತೂಗುಗತ್ತಿಯಿಂದ ಪಾರಾಗಲೇ ಇಲ್ಲ.
ದಿನಕ್ಕೊಂದು ತಿರುವು ಪಡೆಯುತ್ತಿರುವ ರಾಜ್ಯ ರಾಜಕಾರಣದಲ್ಲಿ, ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಕಾಂಗ್ರೆಸ್ಸಿನ ಅತೃಪ್ತ ಶಾಸಕ ಎಂಟಿಬಿ ನಾಗರಾಜ್, ಪತ್ರಿಕಾಗೋಷ್ಠಿಯನ್ನು ಮಂಗಳವಾರ (ಸೆ 18) ಕರೆದಿದ್ದಾರೆ. ಇವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದವರು.
ಈ ನಡುವೆ, ಬಿಜೆಪಿಯ ಎಲ್ಲಾ 104 ಶಾಸಕರಿಗೂ ತುರ್ತು ಬುಲಾವ್ ಹೋಗಿದ್ದು, ಎಲ್ಲರೂ ಮಂಗಳವಾರ ಬೆಂಗಳೂರಿನಲ್ಲಿ ಬಂದು ಸೇರುವಂತೆ ಸೂಚಿಸಲಾಗಿದೆ. ಹಠಾತ್ತಾಗಿ ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಉದ್ದೇಶ ಗೌಪ್ಯವಾಗಿಯೇ ಉಳಿದಿದೆ.
ಸಮ್ಮಿಶ್ರ ಸರಕಾರ ಉರುಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ ಎನ್ನುವ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆ, ಇಂತಿದೆ:
ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ಕಾರ ಬೀಳುತ್ತದೆ ಎಂಬ ಭಯದಿಂದ ಬುದ್ಧಿಭ್ರಮಣೆ ಆದಂತೆ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಬಲವಾದ ವಿರೋಧ ಪಕ್ಷ ಹೇಗೆ ಕೆಲಸ ಮಾಡುತ್ತದೆ ಎಂಬ ಅರಿವು ಅವರಿಗಿಲ್ಲ. ಪ್ರಬಲ 104 ಶಾಸಕರಿದ್ದ ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿ, ಅದರ ದೌರ್ಬಲ್ಯವನ್ನು ಎತ್ತಿ ಹಿಡಿದು ಅಭಿವೃದ್ಧಿಯಲ್ಲಿ ಸಹಕರಿಸುವುದು ನಮ್ಮ ಕೆಲಸ.
ಸಮ್ಮಿಶ್ರ ಸರ್ಕಾರ ಪಕ್ಷಗಳ ಒಳ ಜಗಳದಿಂದ ಜರ್ಜರಿತವಾಗಿದ್ದು, ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳುವುದು ತಪ್ಪೇ? ಒಂದು ರಾಜಕೀಯ ಪಕ್ಷವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಂವಿಧಾನಿಕ ಬಿಕ್ಕಟ್ಟು ಎದುರಾದಾಗ ನಾವು ಕೈಕಟ್ಟಿ ಕೂರುವುದಿಲ್ಲ. ಸಂವಿಧಾನ ಬಿಕ್ಕಟ್ಟನ್ನು ಬಗೆಹರಿಸಿ ಸರ್ಕಾರ ರಚಿಸಿ ಜನರಿಗೆ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ಮುಂದೆ ಓದಿ..

ಸರ್ಕಾರವನ್ನು ಕೆಡವುತ್ತಿದ್ದೇವೆ ಎನ್ನುವ ಭ್ರಮೆ ಅವರಲ್ಲಿ ಇರಬಾರದು
ಈ ರಾಜಕೀಯ ಪ್ರಕ್ರಿಯೆಯಲ್ಲಿ ಸರ್ಕಾರವನ್ನು ಕೆಡವುತ್ತಿದ್ದೇವೆ ಎನ್ನುವ ಭ್ರಮೆ ಅವರಲ್ಲಿ ಇರಬಾರದು. ಕಾಂಗ್ರೆಸ್ ನಾಯಕರುಗಳ ಅಸಮಾಧಾನವನ್ನು ಹೋಗಲಾಡಿಸಲಾಗದೇ ಮುಖ್ಯಮಂತ್ರಿಗಳು ಈ ರೀತಿಯ ಸ್ವೇಚ್ಛಾಚಾರದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯಾವುದೇ ಕಾಂಗ್ರೆಸ್ ಮುಖಂಡರನ್ನು ದೂಷಿಸಿದರೂ ಸರ್ಕಾರ ಉರುಳಿ ಹೋಗುತ್ತದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳು ವಿರೋಧ ಪಕ್ಷದ (ಬಿಜೆಪಿ) ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಲು ಕುಮಾರಸ್ವಾಮಿ ಹಿಂಜರಿಯುತ್ತಿದ್ದಾರೆ
ನಿರಾಯಾಸವಾಗಿ ಸಿಕ್ಕಿರುವ ಮುಖ್ಯಮಂತ್ರಿ ಗಾದಿ ಕೈತಪ್ಪುವ ಭಯದಿಂದ ಯಾವುದೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಲು ಕುಮಾರಸ್ವಾಮಿ ಹಿಂಜರಿಯುತ್ತಿದ್ದಾರೆ. ಈ ಅತಂತ್ರ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿಗೆ ವಿಲನ್ ಖುದ್ದು ಕುಮಾರಸ್ವಾಮಿ ಮತ್ತು ಅಪ್ಪ ಮಕ್ಕಳು. ಜನರ ಕಣ್ಣಿಗೆ ಮಣ್ಣೆರಚಿ, ಅಧಿಕಾರದಲ್ಲಿ ಮುಂದುವರಿಯುವುದರಿಂದ ರಾಜ್ಯಕ್ಕೇನೂ ಪ್ರಯೋಜನವಿಲ್ಲ.

ಸಮ್ಮಿಶ್ರ ಸರ್ಕಾರ ಉಳಿದರೂ ಒಂದೇ, ಉರುಳಿದರೂ ಒಂದೇ
ನಾಲ್ಕು ತಿಂಗಳ ನಂತರವೂ ಸ್ಥಿರ ಸರ್ಕಾರ ನೀಡುವುದು ಸಾಧ್ಯವಾಗಲಿಲ್ಲ ಎಂದರೆ, ಸಮ್ಮಿಶ್ರ ಸರ್ಕಾರ ಉಳಿದರೂ ಒಂದೇ, ಉರುಳಿದರೂ ಒಂದೇ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನಗೆ ವಿಲನ್ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಅಭಿವೃದ್ಧಿ ವಿಷಯದಲ್ಲೂ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಎರಡು ರೂ ಇಳಿಸಿದ್ದು ಜನರ ಕಣ್ಣಿಗೆ ಮಣ್ಣೆರಿಚಿದ್ದಾರೆ
ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎರಡು ರೂ ಇಳಿಸಿದ್ದು ಜನರ ಕಣ್ಣಿಗೆ ಮಣ್ಣೆರೆಚಿದ್ದಾರೆ. ಬಜೆಟ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರಿಗೆ 1.56 ಪೈಸೆ ಏರಿಸಿ ಇಂದು ಎರಡು ರೂಪಾಯಿ ಇಳಿಸಿ ಜನರಿಗೆ ತಲುಪಿದ ಲಾಭ ಕೇವಲ 44 ಪೈಸೆ (0.52%). ಕುಮಾರಸ್ವಾಮಿಯವರೇ, ಬೇರೆಯವರಿಗೆ ವಿಲನ್ ಎಂದು ಹೇಳುವ ಬದಲು ನಿಮ್ಮ ಅಣ್ಣ, ಮಂತ್ರಿ ಹೆಚ್.ಡಿ ರೇವಣ್ಣ ಅವರ ಹಗರಣಗಳ ಬಗ್ಗೆ ಮಾತಾಡಿ.

ಮಿತ್ರ ಪಕ್ಷದ ಮುಖಂಡರಾದ ಮತ್ತು ಮಾಜಿ ಮಂತ್ರಿಗಳಾದ ಎ.ಮಂಜು
ಇಂದು ನಿಮ್ಮ ಮಿತ್ರ ಪಕ್ಷದ ಮುಖಂಡರಾದ ಮತ್ತು ಮಾಜಿ ಮಂತ್ರಿಗಳಾದ ಎ.ಮಂಜು ಅವರು ರೇವಣ್ಣನವರ ಭೂ-ಕಬಳಿಕೆಯ ಬಗ್ಗೆ ನೀಡಿರುವ ಹೇಳಿಕೆಗೆ ನಿಮ್ಮ ಉತ್ತರವೇನು? ಹೊಳೇನರಸೀಪುರ ತಾಲ್ಲೂಕಿನಲ್ಲಿ 54.29 ಎಕರೆ ಗೋಮಾಳವನ್ನು ಕಬಳಿಸಿ ತಮ್ಮ ಕುಟುಂಬಸ್ಥರ ಹೆಸರಿಗೆ ಬದಲಾಯಿಸಿದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?. ಎ. ಮಂಜು ಅವರು ಮಾಡಿರುವ ಆಪಾದನೆಗೆ ಉತ್ತರ ಕೊಡುವ ಬದಲು ನನ್ನ ಮೇಲೆಯೇ ವಾಗ್ದಾಳಿ ಮಾಡುವುದರಲ್ಲಿ ನಿಮ್ಮ ಪೌರುಷ ಅಡಗಿದೆ ಎಂದು ಅನಿಸುತ್ತದೆ - ಎಸ್ ಶಾಂತಾರಾಮ್, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ (ರಾಜ್ಯಾಧ್ಯಕ್ಷರ ಪರವಾಗಿ)












Click it and Unblock the Notifications