ಮೈತ್ರಿ ಸರ್ಕಾರದ ಸಾಧನೆ ಶೂನ್ಯ ಎಂದ ಬಿಜೆಪಿ, ಪುಸ್ತಕ ಬಿಡುಗಡೆ
Recommended Video
ಬೆಂಗಳೂರು, ಜೂನ್ 24 : ಹದಿಮೂರು ತಿಂಗಳ ಆಡಳಿತಾವಧಿಯಲ್ಲಿ ಮೈತ್ರಿ ಸರ್ಕಾರದ ಆಡಳಿತದ ವೈಫಲ್ಯಗಳ ಕುರಿತು ಬಿಜೆಪಿ ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿದೆ. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆಯೂ ಪ್ರತಿಪಕ್ಷ ಟೀಕೆ ಮಾಡಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಸೋಮವಾರ ಮುಖ್ಯಮಂತ್ರಿಗಳ 'ಗ್ರಾಮ ವಾಸ್ತವ್ಯ ಶೂನ್ಯ ಸಾಧನೆ' ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವಾರು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿ ಯಡಿಯೂರಪ್ಪ ಅವರು 13 ತಿಂಗಳ ಆಡಳಿತದಲ್ಲಿ ಆಡಳಿತದ ವೈಫಲ್ಯಗಳ ಕುರಿತು ಮುಖ್ಯಮಂತ್ರಿಗಳಿಗೆ 10 ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪ್ರತಿಪಕ್ಷ ಬಿಜೆಪಿ ಟೀಕೆ ಮಾಡಿದೆ. ಬಿಜೆಪಿಯ ಟೀಕೆಗಳಿಗೆ ಟ್ವೀಟರ್ ಮೂಲಕ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.

ಬಿಜೆಪಿಯಿಂದ ಪುಸ್ತಕ ಬಿಡುಗಡೆ
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವೈಫಲ್ಯಗಳ ಕುರಿತು ಪ್ರತಿಪಕ್ಷ ಬಿಜೆಪಿ 'ಗ್ರಾಮ ವಾಸ್ತವ್ಯ - ಶೂನ್ಯ ಸಾಧನೆ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದೆ. ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಪುಸ್ತಕ ಬಿಡುಗಡೆ ಮಾಡಿದೆ. ಯಡಿಯೂರಪ್ಪ ಅವರು 13 ತಿಂಗಳ ಆಡಳಿತದ ವೈಫಲ್ಯಗಳ ಕುರಿತು ಮುಖ್ಯಮಂತ್ರಿಗಳಿಗೆ 10 ಪ್ರಶ್ನೆಗಳನ್ನು ಕೇಳಿದರು.

ಹಾಡಿದ್ದೇ ಹಾಡೊ ಕಿಸಬಾಯಿದಾಸ
ಕರ್ನಾಟಕ ಕಾಂಗ್ರೆಸ್ ಪ್ರತಿಪಕ್ಷ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದೆ. 'ಬಿಜೆಪಿಯ ಎಲ್ಲಾ ರಾಜ್ಯ ನಾಯಕರುಗಳು ರಾಷ್ಟ್ರ ನಾಯಕರುಗಳು ಸರ್ಕಾರ ಬೀಳುತ್ತದೆ ಎಂದು ಒಂದು ವರ್ಷದಿಂದ ಪದೇ ಪದೇ ಹೇಳುತ್ತಿರುವಿರಿ, ಅದು ಸಾಧ್ಯವಿಲ್ಲ ಎಂಬುದು ಇಷ್ಟರೊಳಗೆ ತಮಗೆ ಮನವರಿಕೆ ಆಗಿರಲೇಬೇಕು. ಆದಾಗ್ಯೂ ಮತ್ತದೇ ಹೇಳಿಕೆ ನೀಡಿದರೆ ಬಿಜೆಪಿ ನಾಯಕರನ್ನು ಜನ ಸ್ವೀಕರಿಸುವುದು ಈ ಗಾದೆಯ ರೀತಿ ಹಾಡಿದ್ದೇ ಹಾಡೊ ಕಿಸಬಾಯಿದಾಸ ಎಂದು ಟೀಕಿಸಿದೆ.

ನಿಮ್ಮನ್ನು ಜನರು ವಿದೂಷಕ ಎನ್ನುವುದಿಲ್ಲವೇ?
'ಮೈತ್ರಿ ಸರ್ಕಾರ ಜನಪರ ಕೆಲಸಗಳೊಂದಿಗೆ ಮುನ್ನಡೆಯುತ್ತಿದೆ. ರೈತರ ಸಾಲ ಮನ್ನಾ ಮಾಡಲಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳೂ ಅನುಷ್ಠಾನ ಗೊಳ್ಳುತ್ತಿವೆ. ಜೈಲು ವಾಸ್ತವ್ಯ ಮಾಡಿದವರು ಗ್ರಾಮ ವಾಸ್ತವ್ಯ ಮಾಡುವವರನ್ನು ವ್ಯಂಗ್ಯ ಮಾಡಿದರೆ ಜನ ನಿಮ್ಮನ್ನು ವಿದೂಷಕ ಅನ್ನುವುದಿಲ್ಲವೆ?' ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಕೇಂದ್ರ ಸರ್ಕಾರ ವಿಫಲ
ಕೇಂದ್ರದ ಬಿಜೆಪಿ ಸರ್ಕಾರ ಬಿಎಸ್ಎನ್ಎಲ್ ಹಿತ ಕಾಪಾಡಲು ವಿಫಲವಾಗಿದೆ. ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುವ ಅವರು ಕೋಟ್ಯಾಧಿಪತಿಗಳ ಹಿತ ಕಾಯುತ್ತಿದ್ದಾರೆ. ಬಿಎಸ್ಎನ್ಎಲ್ 4ಜಿ ಸಿಕ್ಕಿಲ್ಲ, ಖಾಸಗಿ ಸಂಸ್ಥೆಗಳು 5ಜಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.












Click it and Unblock the Notifications