BY Vijayendra: ಕಾರ್ಯಕರ್ತರಿಗೆ ಯಾರೇ ತೊಂದರೆ ಕೊಟ್ಟರೂ ನೇರವಾಗಿ ನನ್ನ ಸಂಪರ್ಕಿಸಿ
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ವಿಚಾರದಿಂದ ಆಕ್ರೋಶಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಸುದೀರ್ಘ ಪತ್ರ ಬರೆದು ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾವೊಬ್ಬ ಕಾರ್ಯಕರ್ತನ ಮೇಲೂ ಕಿಂಚಿತ್ತು ಉಪಟಳವಾದರೆ, ಪಕ್ಷ ಸಹಿಸಿಕೊಂಡು ಕೂರುವ ಮಾತೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣಕ್ಕಾಗಿ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಒತ್ತಡ ಹಾಗೂ ಕಿರುಕುಳ ನೀಡುತ್ತಿದೆ. ಈ ಸಂಬಂಧ ಕಾರ್ಯಕರ್ತರ ರಕ್ಷಣೆಗೆ ನಿಲ್ಲಲು ಬಿಜೆಪಿ ಕರ್ನಾಟಕ ಕಟಿಬದ್ಧವಾಗಿದ್ದು ನಮ್ಮ ಜಿಲ್ಲಾಧ್ಯಕ್ಷರಿಗೆ ಈ ಸಂಬಂಧ ಪತ್ರ ಬರೆಯುತ್ತಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

ʼಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ ಸಂಘಟನೆ, ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ದುರಾಡಳಿತದ ಮುಖವಾಡ ಬಯಲು ಮಾಡಲು ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿ ಹೊತ್ತ ಪದಾಧಿಕಾರಿಗಳು, ಕಾರ್ಯಕರ್ತರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದೀರಿ. ನೀವು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಸಹಿಸದೇ ಹತಾಶೆಗೆ ಒಗೊಳಗಾಗಿರುವ ಕಾಂಗ್ರೆಸ್ ಪಕ್ಷ, ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸ್ ಬಲವನ್ನು ಉಪಯೋಗಿಸಿ ಒತ್ತಡ, ಬೆದರಿಕೆಗಳನ್ನು ಒಡ್ಡುವುದು, ಸುಳ್ಳು ದೂರು ಪಡೆದುಕೊಂಡು ಎಫ್ಐಆರ್ ದಾಖಲಿಸುವ ನೀಚ ಕೆಲಸಕ್ಕೆ ಇಳಿದಿದೆ ಎಂದು ಹರಿಹಾಯ್ದಿದ್ದಾರೆ.

ಇದರ ಭಾಗವಾಗಿ ನಮ್ಮ ಪಕ್ಷದ ಕ್ರಿಯಾಶೀಲ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿ ದುರಂತ ಸಾವು ತಂದುಕೊಂಡಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ, ಪಕ್ಷಕ್ಕಾದ ಬಹುದೊಡ್ಡ ನಷ್ಟ. ಅದರಲ್ಲೂ ಅವರ ಕುಟುಂಬದವರಿಗಾಗಿರುವ ಆಘಾತ ಮಾನವೀಯ ಹೃದಯಗಳನ್ನು ಮಮ್ಮಲ ಮರುಗುವಂತೆ ಮಾಡಿದೆ. ಈ ಘಟನೆಯಿಂದ ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಿತೂರಿಗಳಿಗೆ ಹೆದರಿ ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಅಭಯ ನೀಡಿದ್ದಾರೆ.
ಪ್ರತಿಯೊಬ್ಬ ಕಾರ್ಯಕರ್ತನೂ ಭಾರತೀಯ ಜನತಾ ಪಾರ್ಟಿಯ ಆಧಾರಸ್ತಂಭ ಎಂದು ನಂಬಿರುವ ಪಕ್ಷ ನಮ್ಮದು, ಯಾವೊಬ್ಬ ಕಾರ್ಯಕರ್ತನ ಮೇಲೂ ಕಿಂಚಿತ್ ಉಪಟಳವಾಗಲು ಪಕ್ಷ ಸಹಿಸಿಕೊಂಡು ಕೂರುವ ಮಾತೇ ಇಲ್ಲ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುವುದು ನಮ್ಮ ಪ್ರಥಮ ಆದ್ಯತೆ. ಈ ಹಿನ್ನೆಲೆಯಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಸರ್ಕಾರ ಹಾಗೂ ಇತರ ಶಕ್ತಿಗಳಿಂದ ಯಾವುದೇ ರೀತಿಯ ತೊಂದರೆ, ಒತ್ತಡಗಳು ಬರುತ್ತಿದ್ದಲ್ಲಿ ತಡ ಮಾಡದೆ ನಮ್ಮನ್ನು ನೇರವಾಗಿ ಸಂಪರ್ಕಿಸಿ ಎಂದಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯದ ಕಾರ್ಯದರ್ಶಿ ಅಥವಾ ಸಹಕಾರ್ಯದರ್ಶಿಗಳನ್ನು ಈ ಸಂಬಂಧವಾಗಿ ನೀವು ಸಂಪರ್ಕಿಸಿ, ಮಾಹಿತಿಗಳನ್ನು ಹಂಚಿಕೊಂಡು ಒತ್ತಡ ಹಾಗೂ ಕಷ್ಟಕ್ಕೆ ಸಿಲುಕಿರುವ ಕಾರ್ಯಕರ್ತರಿಗೆ ಕಾನೂನಿನ ನೆರವು ಹಾಗೂ ನೈತಿಕ ಬಲವನ್ನು ತುಂಬಲು ಜಾಗ್ರತೆ ವಹಿಸಿ ಎಂದು ವಿಜಯೇಂದ್ರ ಕರೆ ನೀಡಿದ್ದಾರೆ.












Click it and Unblock the Notifications