ಕಾಂಗ್ರೆಸ್-ಜೆಡಿಎಸ್ ಮೈತ್ರಿ ಜನಾದೇಶಕ್ಕೆ ವಿರುದ್ಧ: ಅಮಿತ್ ಶಾ
ನವ ದೆಹಲಿ, ಮೇ 21: ಕಾಂಗ್ರೆಸ್-ಜೆಡಿಎಸ್ ಮೈತ್ರಿಯು ಜನಾದೇಶಕ್ಕೆ ವಿರುದ್ಧವಾದ ಅಪವಿತ್ರ ಮೈತ್ರಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹರಿಹಾಯ್ದಿದ್ದಾರೆ.
ನವ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕದ ಜನತೆ ಸ್ಪಷ್ಟವಾಗಿ ಕಾಂಗ್ರೆಸ್ ಅನ್ನು ನಿರಾಕರಿಸಿದ್ದಾರೆ, ಅವರ 14 ಸಚಿವರು ಸೋಲು ಕಂಡಿದ್ದಾರೆ, ಕಾಂಗ್ರೆಸ್ನ ಮುಖ್ಯಮಂತ್ರಿ ಕೂಡ ಸೋಲನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯನ್ನು ಅತಿದೊಡ್ಡ ಪಕ್ಷವನ್ನಾಗಿ ಮಾಡಿದ ಕರ್ನಾಟಕದ ಜನತೆಗೆ ಧನ್ಯವಾದ ಅರ್ಪಿಸಿದ ಅವರು, ಬಿಜೆಪಿಯು ಬಹುಮತಕ್ಕಿಂದ ಕೆಲವು ಸೀಟುಗಳಷ್ಟೆ ಹಿಂದುಳಿದೆ ಆದರೆ ಹಲವು ಕ್ಷೇತ್ರಗಳಲ್ಲಿ ನೋಟಾಗಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿದೆ ಇದರಿಂದ ಸಾಬೀತಾಗುತ್ತದೆ ಜನ ಬಿಜೆಪಿಗೆ ಬಹುಮತ ನೀಡಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್ನ 70 ಕ್ಕೂ ಹೆಚ್ಚು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ, ಕಾಂಗ್ರೆಸ್ನ ಅರ್ಧ ಸಚಿವರು ಸೋತಿದ್ದಾರೆ, ಅವರ ಮುಖ್ಯಮಂತ್ರಿ ಸೋತಿದ್ದಾರೆ ಆದರೂ ಅವರು ಯಾವ ಕಾರಣಕ್ಕೆ ವಿಜಯೋತ್ಸವ ಆಚರಿಸುತ್ತಿದ್ದಾರೆ ಎಂದು ಎರಡೂ ಪಕ್ಷದ ಮುಖಂಡರು ಜನತೆಯ ಮುಂದೆ ಸಾಬೀತು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕೆಟ್ಟದಾಗಿ ಚುನಾವಣೆ ಎದುರಿಸಿತು, ಹಿಂದೂ ಧರ್ಮ ವಿಭಜನೆ, ಎಸ್ಡಿಪಿಐ, ಪಿಎಫ್ಐ ಜೊತೆ ಕೈಜೋಡಿಸಿತು, ಸುಳ್ಳು ಪ್ರಚಾರ ಮಾಡಿ ದಲಿತರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿತು, ಜನ ಬಲ, ಹಣ ಬಳಸಿತು, ನಕಲಿ ಚುನಾವಣಾ ಗುರುತಿನ ಚೀಟಿ ಮಾಡಿ ಸಿಕ್ಕಿಬಿದ್ದಿತು ಆದರೂ ಅದು ಗೆಲ್ಲಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಮೋದಿ ಅವರ ಸರ್ಕಾರ ಮತ್ತು ಅದರ ಜನಪರ ಆಡಳಿತಕ್ಕೆ ಸಿಕ್ಕ ಜಯ ಎಂದು ಪರಿಗಣಿಸಲಾಗುವುದು, ಕರ್ನಾಟಕದ ಮೂಲಕ ಬಿಜೆಪಿಗೆ ದಕ್ಷಿಣದ ಬಾಗಿಲು ತೆಗೆದಿದ್ದು, ಮೋದಿ ಅವರ ವಿಜಯ ರಥ ಇನ್ನು ಮುಂದೆ ದಕ್ಷಿಣದಲ್ಲೂ ಪಥಾಕೆ ಹಾರಿಸಲಿದ್ದಾರೆ ಎಂದರು.
ಚುನಾವಣೆಗೆ ಮುಂಚೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳು ಏನೆನೆಲ್ಲಾ ಪರಸ್ಪರ ಮೂದಲಿಸಿಕೊಂಡಿದ್ದರು ಎಂಬುದರ ದಾಖಲೆಗಳನ್ನು ಅಮಿತ್ ಶಾ ಬಿಡುಗಡೆ ಮಾಡಿದರು.












Click it and Unblock the Notifications