ಅಕ್ಟೋಬರಿನಲ್ಲಿ ಮೋದಿ ಬೆಂಗಳೂರು ಭಾಷಣ:10 ರೂ ಶುಲ್ಕ
ಬೆಂಗಳೂರು, ಸೆಪ್ಟೆಂಬರ್ 21: ಕಳೆದ ವಾರ ಬೆಂಗಳೂರಿನಲ್ಲಿ ಸಭೆ ಸೇರಿದ್ದ ರಾಜ್ಯ ಬಿಜೆಪಿ ಪಕ್ಷವು ಅಕ್ಟೋಬರ್ 26 ಅಥವಾ 27ರಂದು ಪಕ್ಷದ ಪಕ್ಷದ ಪ್ರಧಾನಿ ಅಭ್ಯರ್ಥಿ, ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಬೆಂಗಳೂರಿಗೆ ಕರೆತರುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. ಅದನ್ನು ಮೋದಿ ಅವರಿಗೆ ತಿಳಿಸಿ, ಅವರ ದಿನಾಂಕವನ್ನು ಪಕ್ಕಾ ಮಾಡಿಕೊಳ್ಳಲು ಮುಂದಿನ ವಾರ ರಾಜ್ಯ ತಂಡವೊಂದು ಮೋದಿ ಅವರನ್ನು ಭೇಟಿಯಾಘಲು ತೆರಲಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಮಧ್ಯೆ, ಹೈದರಾಬಾದಿನಲ್ಲಿ ಮೋದಿ ಭಾಷಣ ಕೇಳಲು ಪಕ್ಷದ ಕಾರ್ಯಕರ್ತರಿಂದ ಶುಲ್ಕ ವಸೂಲು ಮಾಡಿದ ರೀತಿ ಬೆಂಗಳೂರಿನಲ್ಲೂ ಮೋದಿ ಭಾಷಣಕ್ಕೆ ಶುಲ್ಕ ವಸೂಲು ಮಾಡಲು ನಿರ್ಧರಿಸಲಾಗಿದೆ. ಹೈದರಾಬಾದಿನಲ್ಲಿ 5 ರೂ. ಶುಲ್ಕ ಪಡೆದಿದ್ದರೆ ಬೆಂಗಳೂರಿನಲ್ಲಿ 10 ರೂ. ಪಡೆಯಲಾಗುತ್ತದೆ. ಆದರೆ ಸಂಗ್ರಹವಾಗುವ ಹಣವನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬ ತೀರ್ಮಾನ ಇನ್ನೂ ಆಗಿಲ್ಲ.

ಮೋದಿ ಬೆಂಗಳೂರು ಸಮಾವೇಶಕ್ಕೆ ಸುಮಾರು 4-5 ಲಕ್ಷ ಮಂದಿಯನ್ನು ಸೇರಿಸುವ ಉದ್ದೇಶ ಹೊಂದಲಾಗಿದ್ದು, ಈ ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳದ ಬಗ್ಗೆ ಮುಂದಿನ ವಾರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಹೈದರಾಬಾದಿನಲ್ಲಿ ನಡೆದ ಸಮಾವೇಶದಲ್ಲಿ ಸಂಗ್ರಹಿಸಲಾಗಿದ್ದ ತಲಾ 5 ರೂ. ಶುಲ್ಕವನ್ನು ಉತ್ತರಾಖಂಡ ಪ್ರವಾಹ ಸಂತ್ರಸ್ತರ ನಿಧಿಗೆ ನೀಡಲಾಗಿತ್ತು. ಅದರ ದುಪ್ಪಟ್ಟು ಪ್ರಮಾಣದ ಶುಲ್ಕ ವಿಧಿಸುವ ಮೂಲಕ ಜನರಲ್ಲಿ ಮೋದಿ ಕುರಿತ ಪ್ರೀತಿಯನ್ನು ಪ್ರದರ್ಶಿಸೋಣ ಎಂಬ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ನಾಯಕರು ತಳೆದಿದ್ದಾರೆ.
ಭೋಪಾಲ್ ಸಮಾವೇಶಕ್ಕೆ 5 ರೂ:
ಈ ಮಧ್ಯೆ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಹುಟ್ಟುಹಬ್ಬ ಮತ್ತು ಮಧ್ಯ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಭೋಪಾಲ್ ನಲ್ಲಿಯೂ ಸಮಾವೇಶ ಆಯೋಜಿಸಲಾಗಿದೆ. ಸೆ. 25ರಂದು ಈ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಂದಲೂ ತಲಾ 5 ರೂ. ಶುಲ್ಕ ಪಡೆಯಲು ಬಿಜೆಪಿ ನಿರ್ಧರಿಸಿದೆ.
ಗಮನಾರ್ಹವೆಂದರೆ. ಸಮಾವೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 7 ಲಕ್ಷ ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.












Click it and Unblock the Notifications