ಸಿದ್ದರಾಮಯ್ಯ ವಾಚ್ ವಿವಾದ ಎಲ್ಲಿಗೆ ಬಂತು?
ಬೆಂಗಳೂರು, ಫೆಬ್ರವರಿ 23 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪುರಾಣದ ಬಗ್ಗೆ ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ. ವಾಚ್ ಬಗ್ಗೆ ತನಿಖೆ ನಡೆಸಬೇಕು ಎಂದು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಕೇಂದ್ರ ಕಾನೂನು ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, 'ಪ್ರಹ್ಲಾದ್ ಜೋಶಿ ಅವರು ಜಾರಿ ನಿರ್ದೇಶನಾಲಯಕ್ಕೆ ದೂರು ಕೊಡುವ ಮೂಲಕ ಕಾನೂನು ಹೋರಾಟ ಆರಂಭಿಸಿದ್ದಾರೆ' ಎಂದು ಹೇಳಿದರು. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]

'ಸಿದ್ದರಾಮಯ್ಯ ಅವರ ವಾಚ್ನ ವಿಷಯವನ್ನು ಮೊದಲು ಎತ್ತಿದ ಕುಮಾರಸ್ವಾಮಿ ಅವರು ಅದನ್ನು ಮುಂದುವರೆಸಬೇಕಿತ್ತು. ಆದರೆ, ಅವರ ವಾಚ್ ಮತ್ತು ಕಾರುಗಳ ಪಟ್ಟಿಯನ್ನು ಕಾಂಗ್ರೆಸ್ನವರು ಬಿಡುಗಡೆ ಮಾಡಿದ್ದಾರೆ. ಆದ್ದರಿಂದ, ಅವರು ಹೋರಾಟ ಮುಂದುವರೆಸುವಂತೆ ಕಾಣುತ್ತಿಲ್ಲ' ಎಂದು ಸದಾನಂದ ಗೌಡರು ತಿಳಿಸಿದರು. [ಕುಮಾರಸ್ವಾಮಿ ದುಬಾರಿ ಕಾರುಗಳ ಪಟ್ಟಿ ಬಿಡುಗಡೆ!]
ದೂರು ನೀಡಿದ ಜೋಶಿ : ಧಾರವಾಡ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಶನಿವಾರ ಜಾರಿ ನಿರ್ದೇಶನಾಲಯದ ನಿರ್ದೇಶಕ ಕರ್ನಲ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. 'ಸಿದ್ದರಾಮಯ್ಯ ಅವರು ವಾಚ್ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಸತ್ಯಾಂಶವನ್ನು ಬಹಿರಂಗಪಡಿಸಬೇಕು' ಎಂದು ಮನವಿ ಮಾಡಿದ್ದಾರೆ. [ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿ 'ಹ್ಯೂಬ್ಲೋಟ್' ಕಂಪನಿಯ ವಜ್ರ ಖಚಿತ ವಾಚ್ ಇದ್ದು, ಇದು 50 ರಿಂದ 70 ಲಕ್ಷ ಬೆಲೆಬಾಳುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಹೇಳಿದ್ದರು. ನಂತರ ವಾಚ್ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ.
ಸಿದ್ದರಾಮಯ್ಯ ಅವರ ವಾಚ್ ಪುರಾಣ ಬಯಲಿಗೆಳೆದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನಾಯಕರು ಸರಿಯಾದ ತಿರುಗೇಟು ಕೊಟ್ಟಿದ್ದು, ಅವರ ಬಳಿ ಇರುವ ಐಷಾರಾಮಿ ಕಾರು ಮತ್ತು ವಾಚ್ಗಳ ಪಟ್ಟಿಯನ್ನು ಶನಿವಾರ ವಿ.ಎಸ್.ಉಗ್ರಪ್ಪ ಅವರು ಬಿಡುಗಡೆ ಮಾಡಿದ್ದರು.












Click it and Unblock the Notifications