ಪಡಿತರ ಚೀಟಿ ವಿತರಣೆ: ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನೇಕ ಯೋಜನೆಗಳನ್ನ ಘೋಷಿಸಿದ್ದು, ಈ ಮೂಲಕ ಜನರ ಮನಸ್ಸು ಗೆಲ್ಲಲು ಮುಂದಾಗಿದೆ. ಆದ್ರೆ ಇದೆಲ್ಲವು ಪಕ್ಕಾ ಗಿಮಿಕ್ ಅಂತಾ ಬಿಜೆಪಿ & ಜೆಡಿಎಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಡಿತರ ಚೀಟಿ ವಿತರಣೆ ವಿಚಾರದಲ್ಲಿ ಹೊಸ ಬಾಂಬ್ನ ಸಿಡಿಸಿದ್ದಾರೆ!
ಹೌದು ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಡಿತರ ಚೀಟಿ ವಿತರಣೆ ಸಹಿತ ಹಲವು ಗಂಭೀರ ಆರೋಪ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಅವರು ಉಗ್ರರ ಜೊತೆ ನಂಟು ಹೊಂದಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಇದು ರಾಜ್ಯಕ್ಕೆ ಅವಮಾನ ಎಂದಿದ್ದರು ಯತ್ನಾಳ್. ಆಗ ಕಾಂಗ್ರೆಸ್ ನಾಯಕರು ಕೂಡ ಸವಾಲನ್ನು ಹಾಕಿ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಈಗ ನೋಡದ್ರೆ ಪಡಿತರ ಚೀಟಿ ವಿತರಣೆ ವಿಚಾರ ಪ್ರಸ್ತಾಪ ಮಾಡಿ ಹೊಸ ಆರೋಪದ ಬಾಂಬ್ ಸಿಡಿಸಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್.

ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದು ಏನು?
ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿರುವಂತೆ, 'ಇತ್ತೀಚೆಗೆ ಸರ್ಕಾರದ ಹಲವು ಯೋಜನೆಗಳಿಗೆ ತೃತೀಯ ಲಿಂಗೀಯರು ಅರ್ಜಿ ಹಾಕಲು ಅರ್ಹತೆ ಇದ್ದರೂ ಸಹ ಸರ್ಕಾರದ ಅಂತರ್ಜಾಲದಲ್ಲಿ ಇದಕ್ಕೆ ಅವಕಾಶ ಇಲ್ಲದೆ ಇರುವುದು ಇವರಿಗೆ ತೀವ್ರ ಹಿನ್ನಡೆಯಾಗಿದೆ. ಅಂತರ್ಜಾಲದಲ್ಲಿ ಅರ್ಜಿ ಹಾಕಿದಾಗ: ಗಂಡು/ಹೆಣ್ಣು ಎರಡೇ ಆಯ್ಕೆಗಳಿದ್ದು, ಅವರು ಇವೆರಡಕ್ಕೂ ಸೇರದ ಕಾರಣ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಸರ್ಕಾರದ ಬೇರೆ ಯೋಜನೆಗಳಿಗೂ ಸಹ ಇವರಿಗೆ ಈ ರೀತಿಯಾದ ಸಮಸ್ಯೆ ಉದ್ಭವಿಸುತ್ತಿದೆ.' ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಸರ್ಕಾರದ ಹಲವು ಯೋಜನೆಗಳಿಗೆ ತೃತೀಯ ಲಿಂಗೀಯರು ಅರ್ಜಿ ಹಾಕಲು ಅರ್ಹತೆ ಇದ್ದರೂ ಸಹ ಸರ್ಕಾರದ ಅಂತರ್ಜಾಲದಲ್ಲಿ ಇದಕ್ಕೆ ಅವಕಾಶ ಇಲ್ಲದೆ ಇರುವುದು ಇವರಿಗೆ ತೀವ್ರ ಹಿನ್ನಡೆಯಾಗಿದೆ. 1
— Basanagouda R Patil (Yatnal) (@BasanagoudaBJP) December 11, 2023
'ಪಡಿತರ ಚೀಟಿ ಕೂಡ...'
ಹಾಗೇ ತಮ್ಮ ಆರೋಪ ಮುಂದುವರಿಸಿರುವ ಅವರು, 'ಸಮಾಜವು ಹಾಗೂ ಸ್ವಂತ ಕುಟುಂಬವು ಇವರನ್ನು ಕೀಳಾಗಿ ಕಾಣುವ ಹಾಗೂ ಬಹಿಷ್ಕಾರ ಮಾಡುವುದರಿಂದ ಬಹುತೇಕ ತೃತೀಯ ಲಿಂಗಿಗಳು ತಮ್ಮ ಕುಟುಂಬವನ್ನು ಬಿಟ್ಟು ಪ್ರತ್ಯೇಕವಾಗಿದ್ದಾರೆ; ಕುಟುಂಬದ ಜೊತೆ ಇಲ್ಲ ಎಂಬ ತಾಂತ್ರಿಕ ನೆಪವನ್ನಿಟ್ಟು, ಇವರಿಗೆ ಪಡಿತರ ಚೀಟಿ ಕೂಡ ನಿರಾಕರಿಸಲಾಗುತ್ತಿದೆ. ಪಡಿತರ ಚೀಟಿಗೆ ಅರ್ಜಿ ಹಾಕುವ ಮಂಗಳಮುಖಿಯರು ತಮ್ಮ ಕುಟುಂಬದ ಜೊತೆಗಿಲ್ಲ ಎಂಬ ಕಾರಣಕ್ಕೆ, ಅವರ ಅರ್ಜಿಯನ್ನು ಸ್ವೀಕೃತಿ ಮಾಡದೆ ಅಥವಾ ಅದನ್ನು ತಿರಸ್ಕರಿಸುತ್ತಿರುವುದು ಇವರಿಗೆ ಮಾಡುತ್ತಿರುವ ಅನ್ಯಾಯ.' ಅಂತಾ ಯತ್ನಾಳ್ ಹೇಳಿದ್ದಾರೆ.

ಮುಂದುವರಿದು 'ತೃತೀಯ ಲಿಂಗಿಗಳಿಗೆ ಸರ್ಕಾರ ಎಲ್ಲ ರೀತಿಯಾದ ಬೆಂಬಲ ನೀಡುವ ಅವಶ್ಯಕತೆಯಿದೆ, ಇಂತ ಸನ್ನಿವೇಶದಲ್ಲಿ ಅವರಿಗೆ ಬದುಕಲು ಬೇಕಾದ ಪಡಿತರ ಚೀಟಿಯನ್ನು ಕೊಡಲು ಪೂರಕ ವ್ಯವಸ್ಥೆಯಿಲ್ಲದೆ ಅವರು ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವುದು ಖೇದನೀಯ' ಎಂದಿದ್ದಾರೆ ಬಿಜೆಪಿ ಶಾಸಕ ಯತ್ನಾಳ್.
ಒಟ್ನಲ್ಲಿ ಇಷ್ಟುದಿನ ಸಿದ್ದರಾಮಯ್ಯ ಅವರ ವಿರುದ್ಧ ಸಮರ ಸಾರಿದ್ದ ಬಿಜೆಪಿ ಶಾಸಕ ಈಗ ಸಿದ್ದರಾಮಯ್ಯ ಸರ್ಕಾರದ ವೈಫಲ್ಯದ ವಿರುದ್ಧ ಆರೋಪ ಮಾಡಿದ್ದಾರೆ. ಅದ್ರಲ್ಲೂ ಆಡಳಿತ ಯಂತ್ರದಲ್ಲಿ ತಪ್ಪು ಇದೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ, ಕಾಂಗ್ರೆಸ್ ನಾಯಕರು ಯಾವ ರೀತಿ ಉತ್ತರ ನೀಡ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications