ಪ್ರತೀ ವಾರ್ಡ್ ನಲ್ಲಿ ಅಟಲ್ ಆಹಾರ ಕೇಂದ್ರ! ಇಂದಿರಾ ಕ್ಯಾಂಟೀನ್ ಅಧಿಕೃತವಾಗಿ ಬಂದ್ ಮಾಡಲು ಹೊರಟಿದೆಯಾ ಬಿಜೆಪಿ?
ಬೆಂಗಳೂರು,ಮೇ1: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಜಾ ಪ್ರಣಾಳಿಕೆ ಹೆಸರಲ್ಲಿ ಹಲವು ಭರವಸೆಗಳನ್ನು ಕಮಲ ಪಡೆ ರಾಜ್ಯದ ಜನತೆಗೆ ನೀಡಿದ್ದು, ಪ್ರಮುಖವಾಗಿ ಬಿಪಿಎಲ್ ಕಾರ್ಡ್ದಾರರನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ಅವರಿಗೆ ಭರ್ಜರಿ ಘೋಷಣೆಗಳನ್ನೇ ಮಾಡಿದೆ.
ಇನ್ನೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಅರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ 'ಅಟಲ್ ಆಹಾರ ಕೇಂದ್ರ' ವನ್ನು ಸ್ಥಾಪಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆಯನ್ನ ನೀಡಿದೆ. ಆದರೆ ಈ ಭರವಸೆಯ ಹಿಂದೆ ಕಾಂಗ್ರೆಸ್ ಸರ್ಕಾರ ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸಲು ಆರಂಭಿಸಲಾದ ಇಂದಿರಾ ಕ್ಯಾಂಟೀನ್ಗಳನ್ನು ಶಾಶ್ವತವಾಗಿ ಮುಚ್ಚಲು ಹುನ್ನಾರ ನಡೆಸುತ್ತಿರುವ ಅನುಮಾನ ಮೂಡಿದೆ.

ಹೌದು, ಈ ಹಿಂದೆ ಸರಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಹಲವು ಕ್ಯಾಂಟೀನ್ಗಳಿಗೆ ಬೀಗ ಹಾಕಲಾಗಿದೆ. ಇನ್ನೂ ಇಂದಿರಾ ಕ್ಯಾಂಟೀನ್ ಕುರಿತು ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದ್ದು, ಉದ್ದೇಶ ಪೂರ್ವಕವಾಗಿಯೇ ಈ ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿತ್ತು.
ಇನ್ನೂ ರಾಜ್ಯ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಮೀಸಲಿಡದೆ, ಇಂದಿರಾ ಕ್ಯಾಂಟೀನ್ ಗಳ ಬಂದ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ನ ಹಲವು ನಾಯಕರು ಆರೋಪಿಸಿದ್ರು, ಅದು ಅಲ್ಲದೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಉದ್ದೇಶಪೂರ್ವಕವಾಗಿಯೇ ಬಜೆಟ್ನಲ್ಲಿ ಹಣ ಮೀಸಲಿಡುತ್ತಿಲ್ಲ ಎಂದು ಆರೋಪಿಸಿತ್ತು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ವಲಸೆ ಕಾರ್ಮಿಕರು, ಗ್ರೂಪ್ ಡಿ ನೌಕರರು ಮತ್ತು ಬಡವರಿಗೆ ಸಾರ್ವಜನಿಕ ಕ್ಯಾಂಟೀನ್ನಲ್ಲಿ ಮೂರು ಹೊತ್ತಿನ ಊಟ ನೀಡಲು ವರ್ಷಕ್ಕೆ 100 ಕೋಟಿ ವಿನಿಯೋಗಿಸಲಾಗುವುದು ಕಾಂಗ್ರೆಸ್ ನಾಯಕರು ಹೇಳುವ ಮೂಲಕ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿತ್ತು.

ಇನ್ನೂ ಹಲವು ದಿನಗಳ ಹಿಂದೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದ್ದು,ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾವಣೆ ಮಾಡಬೇಕು ಎಂಬುವುದು ಬಿಜೆಪಿ ನಾಯಕರ ವಾದವಾಗಿತ್ತು ಅದು ಅಲ್ಲದೇ ಇಂದಿರಾ ಕ್ಯಾಂಟೀನ್ ಹೆಸರನ ವಿಚಾರವಾಗಿ ಹಲವು ಬಿಜೆಪಿ ನಾಯಕರು ಆಕ್ಷೇಪ ಎತ್ತಿದ್ದರು.
ಇತ್ತ ಕಾಂಗ್ರೆಸ್ ನಾಯಕರು ಸಹ ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಒಪ್ಪುದಿಲ್ಲ ಎಂದು ಕಿಡಿಕಾರಿದ್ರು. ಮೂರು ವರ್ಷ ಆಡಳಿತದಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದ ಬಿಜೆಪಿ ಇದೀಗ 2023 ರ ವಿಧಾನಸಭಾ ಚುಣಾವಣೆ ಹಿನ್ನೆಲೆ ಪ್ರಣಾಳಿಕೆಯಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಅರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ 'ಅಟಲ್ ಆಹಾರ ಕೇಂದ್ರ' ವನ್ನು ಸ್ಥಾಪಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆಯನ್ನ ನೀಡಿದ್ದು, ಇದು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ತಂತ್ರವಾ? ಅಥವಾ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ಬಿಜೆಪಿ ಮುಂದಾಗಿದಿಯಾ ಎಂಬ ಕುತೂಹಲ ಸೃಷ್ಟಿಸಿದೆ.












Click it and Unblock the Notifications