ಖಮರುಲ್ ಇಸ್ಲಾಂ ಕೈ ಬಿಡುವಂತೆ ಬಿಜೆಪಿ ಒತ್ತಾಯ
ಬೆಂಗಳೂರು, ಅ.29: ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ. ರಾಜ್ಯಪಾಲ ವಜುಭಾಯ್ ರುಡಾಭಾಯ್ ವಾಲಾ ಅವರನ್ನು ಬುಧವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಜೋಶಿ ಮಾತನಾಡಿದರು.
ಖಮರುಲ್ ಇಸ್ಲಾಂ ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗುಲ್ಬರ್ಗದ ಬಡೇಪುರ ಪ್ರದೇಶದ ಸರ್ವೆ ನಂಬರ್ 12ರಲ್ಲಿ ಖಾಜಾ ಬಂದೇನವಾಜ್ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನನ್ನು ಸಚಿವರು ಕಬಳಿಸಿದ್ದಾರೆ ಎಂಬ ಆರೋಪವಿದ್ದು ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಜೋಶಿ ಒತ್ತಾಯಿಸಿದರು.[ವಿದ್ಯುತ್ ಕಡಿತದ ಹಿಂದೆ ಡಿಕೆಶಿ ಕೈವಾಡವಿದೆ : ಜೋಶಿ]

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಮಾಯಕರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿದೆ ಎಂಬ ದೂರನ್ನು ರಾಜ್ಯಪಾಲರ ಬಳಿ ಇಡಲಾಗಿದೆ. ಸರ್ಕಾರ ಜನರ ಹಿತ ಕಾಯುವ ಯಾವ ಕಾರ್ಯಕ್ರಮ ಹಾಕಿಕೊಳ್ಳುತ್ತಿಲ್ಲ ಎಂದು ಜೋಶಿ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಲೋಪ ದೋಷಗಳನ್ನು ರಾಜ್ಯಪಾಲರ ಮುಂದಿಟ್ಟ ಬಿಜೆಪಿ ಶಾಲಾ ಮಕ್ಕಳ ಮೇಲೆ ಹೆಚ್ಚಿದ ಅತ್ಯಾಚಾರ, ರೌಡಿಗಳ ಅಟ್ಟಹಾಸ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೋಶಿ ಆರೋಪಿಸಿದರು.
ಅಲ್ಲದೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಆಡಳಿತ ದಿಕ್ಕು ತಪ್ಪಿದೆ. ಜನರಿಗೆ ಭದ್ರತೆ ಕೊರತೆ ಕಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸಚಿವರು ತಮ್ಮ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ವಿನಃ ಜನರ ಹಿತ ಸಂಪೂರ್ಣ ಮರೆತಿದ್ದಾರೆ. ಸಚಿವ ಸ್ಥಾನ, ನಿಗಮ ಮಂಡಳಿ ನೇಮಕ ಇಂಥ ವಿಚಾರಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಜೋಶಿ ದೂರಿದರು. [ಭೂ ಹಗರಣ: ಸಚಿವರ ವಿರುದ್ಧ ತನಿಖೆ]
ನಿಯೋಗದಲ್ಲಿ ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ತೆರಳಿದ್ದರು.
ಇಸ್ಲಾಂ ಕೈ ಬಿಡುವ ಪ್ರಶ್ನೆಯೇ ಇಲ್ಲ
ಸಚಿವ ಸಂಪುಟದಿಂದ ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಾವು ಬಿಜೆಪಿ ಹೇಳಿದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ. ಇವರನ್ನು ಸೇರಿಸಿಕೊಳ್ಳಿ, ಇವರನ್ನು ಸಂಪುಟದಿಂದ ಬಿಡಿ ಎಂದು ಹೇಳಲು ಬಿಜೆಪಿಗೆ ಯಾವುದೇ ಅಧಿಕಾರವಿಲ್ಲ ಎಂದು ಜಾರ್ಜ್ ತಿಳಿಸಿದ್ದಾರೆ.












Click it and Unblock the Notifications