ಕೆ.ಜೆ.ಜಾರ್ಜ್ ವಿರುದ್ಧ ಹೋರಾಟ, ಬಿಜೆಪಿಯಲ್ಲೇ ಎರಡು ವಾದ!
Recommended Video

ಬೆಳಗಾವಿ, ನವೆಂಬರ್ 15 : ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಹೋರಾಟ ನಡೆಸುವ ಕುರಿತು ಬಿಜೆಪಿ ಪಕ್ಷದಲ್ಲೇ ಎರಡು ವಾದ ಕೇಳಿ ಬರುತ್ತಿವೆ. ಆದ್ದರಿಂದ, ಸದನದಲ್ಲಿ ಮತ್ತು ಹೊರಗೆ ಹೋರಾಟ ನಡೆಸುವ ಕುರಿತು ಬಿಜೆಪಿ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರವಾಗಿದೆ. ಸಿಬಿಐ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ. ಆದ್ದರಿಂದ, ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಒಂದು ದಿನದ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಆದರೆ, ಅದನ್ನು ಮುಂದೂಡಲಾಗಿತ್ತು.
ಸದ್ಯ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಆದರೆ, ಆ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ.
ರಾಜ್ಯ ಬಿಜೆಪಿ ನಾಯಕರಲ್ಲಿಯೇ ಜಾರ್ಜ್ ವಿರುದ್ಧ ಹೋರಾಟ ನಡೆಸುವ ಕುರಿತು ಎರಡು ವಾದಗಳು ಕೇಳಿಬಂದಿವೆ. ಆದ್ದರಿಂದ, ನಾಯಕರು ಇನ್ನೂ ಹೋರಾಟದಿಂದ ಆಗುವ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ...

ಸದನದ ಸಮಯ ಹಾಳು ಮಾಡಿದ ಆರೋಪ
ಬಿಜೆಪಿ ಸದನದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಧರಣಿ ಆರಂಭಿಸಿದರೆ ಕಲಾಪಕ್ಕೆ ಅಡ್ಡಿಯಾಗುತ್ತದೆ. ಬೆಳಗಾವಿಯಲ್ಲಿ ನಡೆಯುವ 10 ದಿನದ ಅಧಿವೇಶದ ಸಮಯವನ್ನು ವ್ಯರ್ಥ ಮಾಡಿದ ಆರೋಪ ಪ್ರತಿಪಕ್ಷ ಬಿಜೆಪಿ ಮೇಲೆ ಬರುತ್ತದೆ. ಆದ್ದರಿಂದ, ಕೆಲವು ಶಾಸಕರು ಸದನದಲ್ಲಿ ಹೋರಾಟ ಬೇಡ ಎನ್ನುವ ವಾದ ಮುಂದಿಟ್ಟಿದ್ದಾರೆ.

ಬಿಜೆಪಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸಿಎಂ
ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಕರ್ನಾಟಕ ಬಿಜೆಪಿ ನೀಡಿದ್ದ ಎಲ್ಲಾ ಗಡುವುಗಳು ಮುಕ್ತಾಯಗೊಂಡಿವೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವುದಿಲ್ಲ ಎಂದು ಹಲವು ಬಾರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ಹೆಚ್ಚು ಬಲ ತುಂಬಲಿದೆ
ಒಂದು ವೇಳೆ ಬಿಜೆಪಿ ಒತ್ತಾಯದಂತೆ ಸಚಿವರು ರಾಜೀನಾಮೆ ನೀಡಿದರೆ ಪಕ್ಷದ ಬಲ ಹೆಚ್ಚಲಿದೆ. ನಮ್ಮ ಫಲಶೃತಿ ಎಂದು ಬಿಜೆಪಿ ನಾಯಕರು 2018ರ ಚುನಾವಣೆಗೆ ಅದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಪ್ರಚಾರ ನಡೆಸುತ್ತಾರೆ.

ರಾಜೀನಾಮೆ ಸಾಧ್ಯವೇ ಇಲ್ಲ
ಸೋಮವಾರ ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ಬಿಜೆಪಿ ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದಿತ್ತು. ಆಗ ಉತ್ತರ ನೀಡಿದ ಸಿದ್ದರಾಮಯ್ಯ ಅವರು, 'ರಾಜೀನಾಮೆ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ. ಈಗಾಗಲೇ ಸಿಐಡಿ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದರಿಂದ ಅವರನ್ನು ನಾನೇ ಖುದ್ದಾಗಿ ಸಂಪುಟಕ್ಕೆ ಹಿಂಪಡೆದಿದ್ದೇನೆ' ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು ಜಾರ್ಜ್ ಪರವಾಗಿ ನಿಂತಿದ್ದಾರೆ.

ಸದನದಲ್ಲಿ ಹೋರಾಟ ಮಾಡಬೇಕೆ?, ಬೇಡವೇ?
ಸದನದಲ್ಲಿ ಹೋರಾಟ ನಡೆಸುವ ಕುರಿತು ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಆದರೆ, ಜಾರ್ಜ್ ವಿರುದ್ಧ ಹೋರಾಟ ಮಾಡುವ ಕುರಿತು ಆರ್.ಅಶೋಕ್ ಮತ್ತು ಜಗದೀಶ್ ಶೆಟ್ಟರ್ ವಿಭಿನ್ನ ವಾದ ಮಂಡನೆ ಮಾಡಿದರು.

ನಮಗೆ ಲಾಭವಾಗಲಿದೆ
ಸದನದಲ್ಲಿ ಹೋರಾಟ ಮಾಡಿದರೆ ನಮಗೆ ಲಾಭವಾಗಲಿದೆ. ಚುನಾವಣೆಗೂ ಅನುಕೂಲವಾಗಲಿದೆ ಎಂಬುದು ಶೆಟ್ಟರ್ ವಾದ. ಸದನದಲ್ಲಿ ಹೋರಾಟ ಮಾಡಿ ಸಮಯ ಹಾಳು ಮಾಡಿದರೆ ಕಲಾಪದ ಸಮಯ ವ್ಯರ್ಥ ಮಾಡಿದ ಆರೋಪ ಬರುತ್ತದೆ ಎಂದು ಆರ್. ಅಶೋಕ್ ವಾದ ಮುಂದಿಟ್ಟಿದ್ದಾರೆ.












Click it and Unblock the Notifications