ನ್ಯಾಯಾಲಯದ ಮಾತೇ ಕೇಳಲ್ಲ ಅನ್ನೋ ಮೌಲಾನಾ ಮೇಲೆ ಎಫ್ಐಆರ್ ಯಾವಾಗ?
ಒಕ್ಕಲಿಗ ಸ್ವಾಮೀಜಿ ಮೇಲೆ ಎಫ್ಐಆರ್ ದಾಖಲಿಸಿರುವ ವಿಚಾರವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ಕೂಡ ಹಲವು ಘಟನೆಗಳನ್ನು ಉಲ್ಲೇಖಿಸಿ, ಈ ವಿಚಾರಗಳಲ್ಲಿ ಎಫ್ಐಆರ್ ಏಕೆ ದಾಖಲಿಸುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಈ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಟಾಕ್ ವಾರ್ ಜೋರಾಗಿದೆ.
"ನ್ಯಾಯಾಲಯದ ಮಾತನ್ನೂ ಕೇಳುವುದಿಲ್ಲ. ಸಂಸತ್ತು ನಿಮ್ಮದಾದರೆ, ಬೀದಿಗಳು ನಮ್ಮದು" ಎಂದು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಮಾತುಗಳನ್ನು ಆಡಿರೋ ಮೌಲಾನಾ ಅಬು ತಾಲಿಬ್ ರೆಹಮಾನಿ ಅವರ ಮೇಲೆ ಎಫ್ಐಆರ್ ಯಾವಾಗ ಹಾಕುತ್ತೀರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರಶ್ನೆ ಕೇಳಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬ ಹಿಂದೂ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಬಹಿರಂಗ ಕ್ಷಮೆ ಕೇಳಿದ ಮೇಲೂ ಅವರ ಮೇಲೆ ಎಫ್ಐಆರ್ ಹಾಕಿ ವಿಚಾರಣೆಗೆ ಕರೆಯುವ ಕಾಂಗ್ರೆಸ್ ಸರ್ಕಾರಕ್ಕೆ, ಸಂವಿಧಾನ, ನ್ಯಾಯಾಲಯದ ಘನತೆ ಎಲ್ಲವನ್ನೂ ಗಾಳಿಗೆ ತೂರಿ ಪ್ರಚೋದನಕಾರಿ ಭಾಷಣ ಮಾಡುವ ಮುಸ್ಲಿಂ ಮತಾಂಧರು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಅಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣವೇ ಅದಕ್ಕೆ ಮುಳುವಾಗಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಡ್ರೆಸ್ ಇಲ್ಲದಂತಾಗಿರುವ ಹಿಂದೂ ವಿರೋಧ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ನಿರ್ನಾಮ ಆಗುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಇದೇ ವಿಚಾರವಾಗಿ ಆರ್.ಅಶೋಕ್ ಹಾಗೂ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನಡುವೆಯೂ ಟ್ವೀಟ್ ವಾರ್ ಜೋರಾಗಿದೆ. ಪ್ರಿಯಾಂಕ್ ಖರ್ಗೆ ಅವರು ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಬಿಟ್ಟು ಅಸಂಬದ್ಧವಾಗಿ ತಲೆಬುಡ ಇಲ್ಲದೆ ಏನೇನೋ ತಡಬಡಾಯಿಸಿದ್ದೀರಿ. ನಾನು ಕೇಳಿದ ಯಾವ ಪ್ರಶ್ನೆಗಳಿಗೂ ತಮ್ಮ ಬಳಿ ಉತ್ತರ ಇಲ್ಲ ಎನ್ನುವುದಕ್ಕೆ ನಿಮ್ಮ ಅಸಂಬದ್ಧ ಪ್ರತಿಕ್ರಿಯೆಯೇ ಸಾಕ್ಷಿ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಹೋಗಲಿ ಬಿಡಿ, ವಿಧಾನಸೌಧದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ದೇಶದ್ರೋಹಿಗಳನ್ನ ಸಮರ್ಥನೆ ಮಾಡುವ ಬಾಯಿಂದ 'ಜೈ ಶ್ರೀರಾಮ್' ನಾಮ ಜಪ ಬಂತಲ್ಲ, ಅದೇ ದೊಡ್ಡ ಸಮಾಧಾನ. ಅಂದಹಾಗೆ, ತಮ್ಮ ತಂದೆಯವರು ಹಾಗು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಳಿರುವ ಸಚಿವರ ಸಾಧನೆಯ ರಿಪೋರ್ಟ್ ಕಾರ್ಡ್ ಕೊಟ್ಟಿದ್ದೀರೋ ಅಥವಾ ಎಐಸಿಸಿ ಅಧ್ಯಕ್ಷರ ಸುಪುತ್ರರು ಎನ್ನುವ ಕಾರಣಕ್ಕೆ ತಮಗೆ ವಿಶೇಷ ವಿನಾಯಿತಿ ಏನಾದರೂ ಇದೆಯೋ? ಎಂದು ಲೇವಡಿ ಮಾಡಿದ್ದಾರೆ.
ಒಂದು ವೇಳೆ ವರದಿ ಏನಾದರೂ ಸಲ್ಲಿಸುವ ಆಲೋಚನೆ ಇದ್ರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಗುತ್ತಿಗೆದಾರ ಪಿ.ಎಸ್.ಗೌಡರ್ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿ ಬಿಲ್ ಪಾವತಿಸಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡ್ರಲ್ಲ? ಅದರ ತನಿಖಾ ವರದಿ ಏನಾದರೂ ಬಂದಿದ್ದರೆ ಅದನ್ನೂ ಸೇರಿಸಿ ಎಂದು ಕೌಂಟರ್ ನೀಡಿದ್ದಾರೆ.












Click it and Unblock the Notifications