ಚಾಮರಾಜನಗರ : ಕಾಂಗ್ರೆಸ್ ಸೇರ್ತಾರಾ ಎ.ಆರ್.ಕೃಷ್ಣಮೂರ್ತಿ?
ಚಾಮರಾಜನಗರ, ಜನವರಿ 21 : ಚಾಮರಾಜನಗರ ಜಿಲ್ಲೆಗೆ ಬಿಜೆಪಿಯ ಪರಿವರ್ತನಾ ಯಾತ್ರೆ ಪ್ರವೇಶ ಮಾಡಿದೆ. ಆದರೆ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪಕ್ಷದ ಚಟುವಟಿಕೆಯಿಂದ ಹೊರಬಂದು ಕಾಂಗ್ರೆಸ್ನತ್ತ ಮುಖ ಮಾಡಿರುವುದು ಬಿಜೆಪಿ ನಾಯಕರಿಗೆ ಮುಖಭಂಗ ಎಂದರೆ ತಪ್ಪಾಗಲಾರದು.
ದಲಿತ ಸಮುದಾಯದ ಮುಖಂಡ ಎ.ಆರ್.ಕೃಷ್ಣಮೂರ್ತಿ ಅವರು ಸಜ್ಜನ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ ರಾಜಕೀಯದ ಇತಿಹಾಸ ಹೊಂದಿರುವ ಇವರು ರಾಜ್ಯಪಾಲರಾಗಿದ್ದ ಬಿ.ರಾಚಯ್ಯ ಅವರ ಪುತ್ರ. ಈ ಹಿಂದೆ ಸಂಸದ ಆರ್. ಧ್ರುವನಾರಾಯಣ ಅವರ ಎದುರು ಸ್ಪರ್ಧಿಸಿ ಕೇವಲ 1 ಮತದಿಂದ ಪರಾಭವಗೊಂಡಿದ್ದರು.
ಮಲೆ ಮಹದೇಶ್ವರನಿಗೆ ಉಘೇ ಎಂದ ಯಡಿಯೂರಪ್ಪ
ಕಳೆದ ಕೆಲವು ವರ್ಷಗಳಿಂದ ಬಿಜೆಪಿಯಲ್ಲಿ ತಟಸ್ಥರಾಗಿದ್ದ ಅವರು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಹಳಷ್ಟು ಸಮಯಗಳಿಂದ ಯಾರ ಕಣ್ಣಿಗೂ ಬೀಳದ ಅವರು, ಸುತ್ತೂರು ಜಾತ್ರೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿದ್ದರು.
ಆಗಲೇ ಅವರು ಬಿಜೆಪಿಯಿಂದ ಹೊರ ಹೋಗುತ್ತಾರೆ ಎಂಬುದು ಜನಕ್ಕೆ ಗೊತ್ತಾಗಿತ್ತು. ಈಗ ಅವರೇ ಮಾಧ್ಯಮದವರೊಂದಿಗೆ ಹೇಳಿಕೊಳ್ಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅವರ ಮಾತುಗಳಿಂದ ಬಿಜೆಪಿ ಪಕ್ಷವನ್ನು ಬಿಡುವುದು ಸ್ಪಷ್ಟವಾಗಿದೆಯಾದರೂ ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ? ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಪುಸ್ತಕ ರೂಪಕ್ಕಿಳಿದ 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ'
ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆದು ಮತ್ತೊಂದು ಪಕ್ಷದ ಸೇರ್ಪಡೆಗೊಳ್ಳುತ್ತಿದ್ದಾರಂತೆ. ಪಕ್ಷ ಬಿಡುವ ತೀರ್ಮಾನಕ್ಕೆ ಬರಲು ಅವರು ಕಾರಣವನ್ನು ನೀಡಿದ್ದಾರೆ.
ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರಂತೆ ಆದರೆ ಕೊಳ್ಳೇಗಾಲದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರಂತೆ. ಜತೆಗೆ ಪಕ್ಷದ ಮುಖಂಡರು ಅವರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ ಇದರಿಂದ ಬೇಸತ್ತು, ಬಿಜೆಪಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.
ಹಾಗೆ ನೋಡಿದರೆ ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿದ ಅವರು ಎರಡು ಭಾರಿ ಶಾಸಕನಾಗಿದ್ದು, ತದ ನಂತರ ಬದಲಾದ ರಾಜಕಾರಣದಲ್ಲಿ ಜನತಾ ಪರಿವಾದ ಬಹುತೇಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ವೇಳೆ ಕಾರ್ಯಕರ್ತರು ಮತ್ತು ಅಭಿಮಾನಿಗಳ ನಿರ್ಧಾರದಂತೆ ಬಿಜೆಪಿ ಪಕ್ಷಕ್ಕೆ ಸೇರಿದ್ದರು.
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸತತ ಸೋಲು ಅನುಭವಿಸಿದ್ದರು. 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 1 ಮತಗಳಿಂದ ಸೋಲು ಕಂಡಿದ್ದ ಅವರು ಅಲ್ಲಿಂದ ಇಲ್ಲಿಯವರೆಗೆ ರಾಜಕಾರಣದಲ್ಲಿ ಯಶಸ್ಸು ಕಂಡಿಲ್ಲ.
ಮುಂದಿನ 2018ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಬಯಸಿದ್ದರಾದರೂ ಅಲ್ಲಿ ಯಾಕೋ ಈ ಬಾರಿ ಅವರಿಗೆ ಟಿಕೆಟ್ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿಯೇ ಕಾಂಗ್ರೆಸ್ನ ಕದ ತಟ್ಟಲು ತಯಾರಿ ನಡೆಸಿದ್ದಾರೆ. ಮುಂದಿನ ನಡೆ ಏನು ಎಂಬುದನ್ನು ಕಾಲವೇ ಹೇಳಬೇಕಾಗಿದೆ.