ಶಾಸಕ ಶ್ರೀಮಂತ ಪಾಟೀಲ್ ನಾಪತ್ತೆ ಬಗ್ಗೆ ಕಾವೇರಿದ ಚರ್ಚೆ, ಡಿಕೆಶಿ ಗರಂ
ಬೆಂಗಳೂರು, ಜುಲೈ 18 : "ನಮ್ಮ ಶಾಸಕ ಶ್ರೀಮಂತ ಪಾಟೀಲ್ರನ್ನು ಬಿಜೆಪಿ ಅಪಹರಣ ಮಾಡಿದೆ. ಅವರು ಹೇಗೆ ಮುಂಬೈಗೆ ಹೋದರು? ಎಂಬ ಬಗ್ಗೆ ತನಿಖೆ ಮಾಡಿಸಬೇಕು" ಎಂದು ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಸದನದಲ್ಲಿ ಒತ್ತಾಯಿಸಿದರು.
ಗುರುವಾರ ಭೋಜನ ವಿರಾಮದ ಬಳಿಕ ಕಲಾಪ ಮತ್ತೆ ಆರಂಭವಾದಾಗ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ನಾಪತ್ತೆಯಾಗಿರುವ ಕುರಿತು ವಿಚಾರವನ್ನು ಪ್ರಸ್ತಾಪಿಸಿದರು.
ವಿಶ್ವಾಸಮತ ಯಾಚನೆ LIVE: ಸ್ಪೀಕರ್ ವಿರುದ್ಧ ಬಿಜೆಪಿ ಸದಸ್ಯರು ಗರಂ
"ಬುಧವಾರ ನಮ್ಮ ಜೊತೆ ಇದ್ದ ಶಾಸಕರನ್ನು ರಾತ್ರೋರಾತ್ರಿ ಬಿಜೆಪಿ ಅಪಹರಣ ಮಾಡಿ ಮುಂಬೈಗೆ ಕರೆದುಕೊಂಡು ಹೋಗಿದೆ. ಬಲವಂತವಾಗಿ ಆಸ್ಪತ್ರೆಗೆ ದಾಖಲು ಮಾಡಿ, ಫೋಟೋ ತೆಗೆದು ಬಿಡುಗಡೆ ಮಾಡಲಾಗಿದೆ," ಎಂದು ಆರೋಪಿಸಿದರು.
ಸುಪ್ರೀಂ ಆದೇಶ ವಿಪ್ ಜಾರಿಗೊಳಿಸುವ ಅಧಿಕಾರ ಕಸಿದಂತಿದೆ: ಸಿದ್ದು ಕಳವಳ
"ಬಿಜೆಪಿ ನಮ್ಮ ಶಾಸಕರನ್ನು ಅಪಹರಣ ಮಾಡಿದ್ದಕ್ಕೆ ದಾಖಲೆ ಕೊಡುವೆ" ಎಂದು ಶ್ರೀಮಂತ ಪಾಟೀಲ್ ಆಸ್ಪತ್ರೆಯಲ್ಲಿ ಮಲಗಿರುವ ಫೋಟೋ ಮತ್ತು ಮುಂಬೈಗೆ ವಿಶೇಷ ವಿಮಾನದಲ್ಲಿ ಹೋದ ಟಿಕೆಟ್ಗಳನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡುವಂತೆ ಡಿ. ಕೆ. ಶಿವಕುಮಾರ್ ಹೇಳಿದರು.
ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!
"ನಮ್ಮ ಶಾಸಕರನ್ನು ಹೇಗೆ ಅಪಹರಣ ಮಾಡಲಾಯಿತು? ಎಂಬ ಬಗ್ಗೆ ತನಿಖೆಯಾಗಬೇಕು" ಎಂದು ಡಿ. ಕೆ. ಶಿವಕುಮಾರ್ ಒತ್ತಯಿಸಿದರು. ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರು ಇದಕ್ಕೆ ಧ್ವನಿಗೂಡಿಸಿದರು.
ತನಿಖೆ ಮಾಡಿಸುವ ಕೆಲಸ ನನ್ನದಲ್ಲ
ಡಿ. ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, "ತನಿಖೆ ಮಾಡಿಸುವ ಕೆಲಸ ನನ್ನದಲ್ಲ. ತನಿಖೆ ಮಾಡಿಸಬೇಕು ಎಂದರೆ ಮೊದಲು ನಾಯಕರು ನನಗೆ ದೂರು ಕೊಡಬೇಕಾಗಿತ್ತು" ಎಂದು ಹೇಳಿದರು.
ಶಾಸಕರಿಂದ ಪತ್ರ ಬಂದಿದೆ
"ಇಂದು ಬೆಳಗ್ಗೆ 10.45ರ ಸುಮಾರಿಗೆ ನನಗೆ ಶಾಸಕ ಶ್ರೀಮಂತ ಪಾಟೀಲ್ ಅವರು ಎದೆ ನೋವಿನ ಕಾರಣ ಮುಂಬೈಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸದನಕ್ಕೆ ಗೈರಾಗಲಿದ್ದಾರೆ ಎಂದು ಪತ್ರ ಬಂದಿದೆ. ಆದರೆ, ಪತ್ರದಲ್ಲಿ ದಿನಾಂಕವೇ ಇಲ್ಲ. ಈ ಪತ್ರ ಸ್ವಾಭಾವಿಕವಾಗಿದ್ದು ಎಂದು ಅನ್ನಿಸುತ್ತಿಲ್ಲ. ಇದಕ್ಕೆ ಡಾಕ್ಟರ್ ಹೇಳಿಕೆಯನ್ನು ಲಗತ್ತಿಸಲಾಗಿದೆ. ಈ ಆಸ್ಪತ್ರೆ ಇದೆ ಎಂದು ಹೇಗೆ ನಂಬಬೇಕು?" ಎಂದು ಸ್ಪೀಕರ್ ಪ್ರಶ್ನೆ ಮಾಡಿದರು.
ಗೃಹ ಸಚಿವರಿಗೆ ಸೂಚನೆ
ಸ್ಪೀಕರ್ ರಮೇಶ್ ಕುಮಾರ್, "ಗೃಹ ಸಚಿವರಿಗೆ ಈ ಕೂಡಲೇ ಶ್ರೀಮಂತ ಪಾಟೀಲ್ ಅವರ ಕುಟುಂಬದವರನ್ನು ಸಂಪರ್ಕ ಮಾಡಿ ಎಲ್ಲಿ ಹೋಗಿದ್ದಾರೆ? ಏಕೆ ಹೋಗಿದ್ದಾರೆ?, ಯಾರ ಜೊತೆ ಇದ್ದಾರೆ?, ಚಿಕಿತ್ಸೆಗಾಗಿ ಹೋದರೆ? ಎಂಬ ಮಾಹಿತಿ ಪಡೆದು ವರದಿ ಕೊಡಿ. ನೀವು ಈ ಕೆಲಸ ಮಾಡದಿದ್ದರೆ ಡಿಜಿಗೆ ಸೂಚನೆ ನೀಡುತ್ತೇನೆ" ಎಂದು ಸೂಚನೆ ನೀಡಿದರು.
ಶ್ರೀಮಂತ ಪಾಟೀಲ್ ನಾಪತ್ತೆ
ಬೆಂಗಳೂರಿನ ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬುಧವಾರ ರಾತ್ರಿ ನಾಪತ್ತೆಯಾಗಿದ್ದರು. ಗುರುವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಅವರು ದಾಖಲಾಗಿರುವ ಫೋಟೋ ಬಿಡುಗಡೆಯಾಗಿದೆ. ಅವರನ್ನು ಬಿಜೆಪಿ ಅಪಹರಣ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.