ಬಿಜೆಪಿಯಿಂದ ಶಾಸಕರ ಖರೀದಿಗೆ 4,500 ಕೋಟಿ: ಆನಂದ್ ಶರ್ಮಾ ಬಾಂಬ್
ನವದೆಹಲಿ, ಮೇ 21: ಬಹುಮತ ಬರದಿದ್ದರೂ ಸರಕಾರ ರಚಿಸಲು ಹೊರಟಿದ್ದ ಬಿಜೆಪಿ ಶಾಸಕರ ಖರೀದಿಗೆ 4,500 ಕೋಟಿ ರೂಪಾಯಿ ಎತ್ತಿಟ್ಟಿತ್ತು ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹೊಸ ಬಾಂಬ್ ಸಿಡಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕ ಚುನಾವಣೆಗಾಗಿ ಬಿಜೆಪಿ ಬರೋಬ್ಬರಿ 11 ಸಾವಿರ ಕೋಟಿ ರೂಪಾಯಿ ತೆಗೆದಿರಿಸಿತ್ತು. ಇದರಲ್ಲಿ ಚುನಾವಣೆಗೆ 6,500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಉಳಿದ 4,500 ಕೋಟಿ ರೂಪಾಯಿಯನ್ನು ಶಾಸಕರ ಖರೀದಿಗೆ ತೆಗೆದಿರಿಸಿತ್ತು. ಈ ಮೂಲಕ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ನಾಯಕರು ಹೊರಟಿದ್ದರು," ಎಂದು ಅವರು ವಾಗ್ದಾಳಿ ನಡೆಸಿದರು.
ಎಚ್ಡಿಕೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಶಾಸಕರ ಖರೀದಿ ಪ್ರಕರಣ ತನಿಖೆಗೆ: ರಾಮಲಿಂಗಾ ರೆಡ್ಡಿ
"ನನಗೆ ಅಮಿತ್ ಶಾ ಅವರಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಇದೆ ಅಥವಾ ಗೌರವ ಇದೆ ಎಂದು ಅನಿಸುತ್ತಿಲ್ಲ. ಒಂದೊಮ್ಮೆ ಸಂವಿಧಾನದ ಬಗ್ಗೆ ಗೊತ್ತಿದ್ದರೂ ಅವರು ಅದನ್ನು ಗೌರವಿಸುವುದಿಲ್ಲ," ಎಂದು ಶರ್ಮಾ ಕಿಡಿಕಾರಿದ್ದಾರೆ.
ಇದೇ ವೇಳೆ ಅವರು ಕರ್ನಾಟಕದಲ್ಲಿ ನಡೆಸಲು ಯತ್ನಿಸಿದ ಕುದುರೆ ವ್ಯಾಪಾರಕ್ಕೆ ಬಿಜೆಪಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.