ಕಾಂಗ್ರೆಸ್ನಲ್ಲಿನ ಬಣಜಗಳ ಬಿಚ್ಚಿಟ್ಟ ಬಿಜೆಪಿಯ ಟ್ವೀಟ್!
ಬೆಂಗಳೂರು, ಜುಲೈ 23; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನಲ್ಲಿ ಬಣಜಗಳ ಇದೆಯೇ?. ಕಾಂಗ್ರೆಸ್ನವರ ಪ್ರಕಾರ ಇಲ್ಲ, ಆದರೆ ಪ್ರತಿಪಕ್ಷ ಬಿಜೆಪಿಯ ಪ್ರಕಾರ ಇದೆ. ಪಕ್ಷದಲ್ಲಿ ಹಲವಾರು ಬಣಗಳಿವೆ, ಜಿಲ್ಲಾವಾರು ಬಣಗಳು ಸಹ ರಚನೆಯಾಗಿವೆ.
ಭಾನುವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಕಾಂಗ್ರೆಸ್ನ ಬಣ ರಾಜಕೀಯದ ಬಗ್ಗೆ ಮಾಹಿತಿ ನೀಡಿದೆ. ಬೆಳಗಾವಿ, ವಿಜಯಪುರ, ಬೆಂಗಳೂರು, ಶಿವಮೊಗ್ಗದಲ್ಲಿ ಯಾವ ರೀತಿಯ ಬಣಜಗಳವಿದೆ ಎಂದು ಮಾಹಿತಿ ನೀಡಿದೆ.

ಟ್ವೀಟ್ನಲ್ಲಿ ಬಿಜೆಪಿ, 'ಇತ್ತ ಬಿ. ಕೆ. ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯರ ಗಲಾಟೆ ಬೇರೆಯೇ ಮಟ್ಟದಲ್ಲಿದೆ! ಎಲ್ಲವೂ ಬಯಲಾಗುತ್ತಲೇ ಇದೆ!' ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಆರೋಪ ಮಾಡಿದೆ.
ಬಿಜೆಪಿಯ ಟ್ವೀಟ್; ಕರ್ನಾಟಕ ಬಿಜೆಪಿ, 'ಕಾಂಗ್ರೆಸ್ನಲ್ಲಿ ಬಣಜಗಳ ತಾರಕಕ್ಕೇರಿದ್ದು, ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ಮಂತ್ರಿಗಳು ಪರಸ್ಪರ ಕಚ್ಚಾಡುತ್ತಿದ್ದು, ಆಡಳಿತ ಸಂಪೂರ್ಣ ಹಳಿ ತಪ್ಪಿದೆ' ಎಂದು ದೂರಿದೆ.
* ಬೆಳಗಾವಿಯಲ್ಲಿ ಸಿಎಂ ಬಣದ ಸತೀಶ್ ಜಾರಕಿಹೊಳಿ, ಡಿಸಿಎಂ ಬಣದ ಲಕ್ಷ್ಮಿ ಹೆಬ್ಬಾಳ್ಕರ್ರಿಗೂ ಫೈಟ್.
* ವಿಜಯಪುರದಲ್ಲಿ ಸಿಎಂ ಬಣದ ಎಂ. ಬಿ. ಪಾಟೀಲ್ರಿಗೂ, ಡಿಸಿಎಂ ಬಣದ ಶಿವಾನಂದ ಪಾಟೀಲ್ರಿಗೂ ಮುಸುಕಿನ ಗುದ್ದಾಟ.
* ಬೆಂಗಳೂರಿನಲ್ಲಿ ಸಿಎಂ ಬಣದ ಜಮೀರ್ಗೂ, ಡಿಸಿಎಂ ಬಣದ ಹ್ಯಾರಿಸ್ ನಡುವೆ ದಂಗಲ್.
* ಶಿವಮೊಗ್ಗದಲ್ಲಿ ಮೂಲ ಕಾಂಗ್ರೆಸ್ಸಿಗ ಸಂಗಮೇಶ್ ಹಾಗೂ ವಲಸಿಗ ಕಾಂಗ್ರೆಸ್ಸಿಗ ಮಧು ಬಂಗಾರಪ್ಪ ನಡುವೆ ಕಿತ್ತಾಟ.
* ಇತ್ತ ಬಿ. ಕೆ. ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯರ ಗಲಾಟೆ ಬೇರೆಯೇ ಮಟ್ಟದಲ್ಲಿದೆ! ಎಲ್ಲವೂ ಬಯಲಾಗುತ್ತಲೇ ಇದೆ! ಎಂದು ಬಿಜೆಪಿ ಟ್ವೀಟ್ನಲ್ಲಿ ವಿವರಣೆಯನ್ನು ನೀಡಿದೆ.
ಸಂಚಲನ ಮೂಡಿಸಿದ ಹೇಳಿಕೆ; ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ನ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಆಡಿರುವ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದೇ ಮಾತನ್ನು ಉಲ್ಲೇಖಿಸುವಂತೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
ಬಿ. ಕೆ. ಹರಿಪ್ರಸಾದ್, "ನನಗೆ ಸಿಎಂ ಮಾಡುವೂದು ಗೊತ್ತು, ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಗೊತ್ತು. ನಮ್ಮನ್ನು ವ್ಯವಸ್ಥಿತವಾಗಿ ತುಳಿಯುತ್ತಾರೆ. ನಾನು ಮಂತ್ರಿ ಆಗುವುದು ಬಿಡುವುದು ಬೇರೆ ಪ್ರಶ್ನೆ. ಆದರೆ ದೇಶದ ಬೇರೆ ರಾಜ್ಯಗಳಲ್ಲಿನ ಐವರು ಮುಖ್ಯಮಂತ್ರಿ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ" ಎಂದು ಹೇಳಿದ್ದಾರೆ.
ಬಿಜೆಪಿ ಕರ್ನಾಟಕ ಈ ಕುರಿತು ಟ್ವೀಟ್ನಲ್ಲಿ ಪ್ರಶ್ನೆ ಮಾಡಿದ್ದು, 'ಸಿದ್ದರಾಮಯ್ಯರವರನ್ನು ಕುರ್ಚಿಯಿಂದ ಇಳಿಸಲು, ತಮ್ಮ ಆತ್ಮೀಯರಾದ ಬಿ. ಕೆ. ಹರಿಪ್ರಸಾದ್ ಭುಜದ ಮೇಲೆ ಬಂದೂಕು ಇಟ್ಟು ಡಿ.ಕೆ. ಶಿವಕುಮಾರ್ ಗುಂಡು ಹಾರಿಸುತ್ತಿದ್ದಾರೆಯೇ?. ಸಿಎಂ ಕುರ್ಚಿಗೆ ವ್ಯಾಲಿಡಿಟಿ ಕಡಿಮೆ ಇರುವ ಕಾರಣ, ಶ್ಯಾಡೋ ಸಿಎಂ ಯತೀಂದ್ರ ರಾಜ್ಯವನ್ನು ಮನಸ್ಸಿಗೆ ಬಂದಂತೆ ವರ್ಗಾವಣೆ ದಂಧೆಯ ಮೂಲಕ ಕೊಳ್ಳೆ ಹೊಡೆಯುತ್ತಿರಬಹುದು!' ಎಂದು ಹೇಳಿದೆ.
'ಸರ್ಕಾರದ ಕೆಲಸ - ದೇವರ ಕೆಲಸ ಎಂಬುದು ಈ ಸರ್ಕಾರದ ಅವಧಿಯಲ್ಲಿ ವರ್ಗಾವಣೆಯೊಂದೇ ಸರ್ಕಾರದ ಕೆಲಸ ಎಂಬಂತೆ ಮಾರ್ಪಾಡಾಗಿದೆ. ಸರ್ಕಾರವೊಂದು ಆಡಳಿತಕ್ಕೆ ಬಂದು ಎರಡು ತಿಂಗಳೊಳಗೆ ಬೃಹತ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು' ಎಂದು ಬಿಜೆಪಿ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದೆ.











Click it and Unblock the Notifications