Get Updates
Get notified of breaking news, exclusive insights, and must-see stories!

ಕರ್ನಾಟಕ: ದ್ವೇಷ ಭಾಷಣ, ಗೋ ರಕ್ಷಣೆ ಸೇರಿದಂತೆ 385 ಕ್ರಿಮಿನಲ್ ಪ್ರಕರಣ ಕೈಬಿಟ್ಟ ಬಿಜೆಪಿ ಸರ್ಕಾರ; ವರದಿ

ಸದ್ಯ 2023ರ ಸಾರ್ವತ್ರಿಕ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಅಭ್ಯರ್ಥಿಗಳಿ ನಾಮಪತ್ರ ಸಲ್ಲಿಸಿ ಮತದಾರರ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಆಡಳಿತವನ್ನು ಮುಖ್ಯ ಕಾರ್ಯದರ್ಶಿ ನಿರ್ವಹಿಸುತ್ತಿದ್ದರೆ, ಗೃಹ ಇಲಾಖೆಯನ್ನು ಚುನಾವಣಾ ಆಯೋಗವೇ ನಿಭಾಯಿಸುತ್ತಿದೆ.

ಇನ್ನು ಕರ್ನಾಟಕ ಬಿಜೆಪಿ ಸರ್ಕಾರವು ಜುಲೈ 2019ರಿಂದ ಏಪ್ರಿಲ್ 2023ರ ಅವಧಿಯಲ್ಲಿ 182 ದ್ವೇಷ ಭಾಷಣ, ಗೋ ರಕ್ಷಣೆ ಮತ್ತು ಕೋಮು ಹಿಂಸಾಚಾರ ಸೇರಿದಂತೆ 385 ಕ್ರಿಮಿನಲ್ ಪ್ರಕರಣಗಳನ್ನು ಕೈಬಿಟ್ಟಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಏಪ್ರಿಲ್ 23ರಂದು ವರದಿ ಮಾಡಿದೆ.

BJP Government Dropped 385 Criminal Cases Including Hate Speech, Cow Protection in Karnataka Says Report

ರಾಜ್ಯ ಗೃಹ ಇಲಾಖೆಯಿಂದ ಆರ್‌ಟಿಐ ಮೂಲಕ ಪಡೆದುಕೊಂಡ ಮಾಹಿತಿಯಲ್ಲಿ, ಸರ್ಕಾರದ ಈ ಕ್ರಮದಿಂದ 1,000ಕ್ಕೂ ಹೆಚ್ಚು ಜನರು ಪ್ರಕರಣದಿಂದ ಹೊರಗುಳಿದು ಪ್ರಯೋಜನ ಪಡೆದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಪ್ರಯೋಜನ ಪಡೆದ 1,000ಕ್ಕೂ ಹೆಚ್ಚು ಜನರು

ಫೆಬ್ರವರಿ 2020ರಿಂದ ಫೆಬ್ರವರಿ 2023ರ ನಡುವೆ 385 ಕ್ರಿಮಿನಲ್ ಪ್ರಕರಣಗಳ ಆರೋಪಿಗಳಿಗೆ ಕಿರುಕುಳ ನಿಲ್ಲಿಸಲು ರಾಜ್ಯ ಸರ್ಕಾರವು ಒಟ್ಟು ಏಳು ಆದೇಶಗಳನ್ನು ಹೊರಡಿಸಿದ್ದು, ಇವುಗಳಲ್ಲಿ 182 ಕೋಮು ಹಿಂಸಾಚಾರಕ್ಕೆ ಸಂಬಂಧಿಸಿವೆ. ಈ ಪ್ರಕರಣಗಳನ್ನು ಕೈಬಿಟ್ಟಿದ್ದರಿಂದ 1,000ಕ್ಕೂ ಹೆಚ್ಚು ಆರೋಪಿಗಳು ಶಿಕ್ಷೆ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ 11, 2020ರ ಮೊದಲ ಆದೇಶದಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ನಂತರದ ಇತರ ಆರು ಆದೇಶಗಳು ಕನಿಷ್ಠ ಅರ್ಧದಷ್ಟು ಕೋಮು ಘಟನೆಗಳಿಗೆ ಸಂಬಂಧಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.

BJP Government Dropped 385 Criminal Cases Including Hate Speech, Cow Protection in Karnataka Says Report

ಪ್ರಯೋಜನ ಪಡೆದವರಲ್ಲಿ ಚುನಾಯಿತ ಪ್ರತಿನಿಧಿಗಳು

ರಾಜ್ಯ ಸರ್ಕಾರದ ಈ ಆದೇಶದಿಂದ ಪ್ರಯೋಜನ ಪಡೆದವರಲ್ಲಿ ಬಿಜೆಪಿ ಸಂಸದ ಮತ್ತು ಶಾಸಕರೂ ಸೇರಿದ್ದಾರೆ. ಫೆಬ್ರವರಿ 2020 ಮತ್ತು ಆಗಸ್ಟ್ 2020ರ ನಡುವೆ ಹೊರಡಿಸಲಾದ ಕೆಲವು ಆದೇಶಗಳಲ್ಲಿ ಚುನಾಯಿತ ಪ್ರತಿನಿಧಿಗಳಾದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ.

ಕೋಮುಗಲಭೆಗೆ ಸಂಬಂಧಿಸಿದ 182 ಪ್ರಕರಣಗಳಲ್ಲಿ 45 ಪ್ರಕರಣಗಳು, ಡಿಸೆಂಬರ್ 2017ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿವೆ. ಈ ಪ್ರಕರಣದಲ್ಲಿ 300 ಜನರು ಆರೋಪಿಗಳಾಗಿದ್ದರು.

182 ಪ್ರಕರಣಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಗೋರಕ್ಷಣೆಯ ನಾಲ್ಕು ಘಟನೆಗಳು, ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕೊಡಗು ಮತ್ತು ಮೈಸೂರಿನಲ್ಲಿ ನಡೆದ ಹಿಂಸಾಚಾರದ ಘಟನೆಗಳು, ರಾಮ ನವಮಿ, ಹನುಮ ಜಯಂತಿ ಮತ್ತು ಗಣೇಶ ಹಬ್ಬಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿವೆ.

BJP Government Dropped 385 Criminal Cases Including Hate Speech, Cow Protection in Karnataka Says Report

ಅಂತರ್‌ಧರ್ಮೀಯ ವಿವಾಹಗಳ ವಿರುದ್ಧದ ಪ್ರತಿಭಟನೆಗಳ ಮೇಲಿನ ಕಾನೂನು ಕ್ರಮವನ್ನು ಹಿಂಪಡೆಯಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಚಿವ ಸಂಪುಟ ಉಪ ಸಮಿತಿ ನಿರ್ಧಾರ

ಪ್ರಾಸಿಕ್ಯೂಷನ್ ಮತ್ತು ಕಾನೂನು ಇಲಾಖೆ, ಹಿಂತೆಗೆದುಕೊಳ್ಳಲು ಯೋಗ್ಯವಾದ ಪ್ರಕರಣಗಳಲ್ಲ ಎಂದು ಹೇಳಿದ್ದರೂ, 2022ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರದ ಆದೇಶದಲ್ಲಿ 34 ಪ್ರಕರಣಗಳನ್ನು ಹಿಂಪಡೆಯಲು, ನ್ಯಾಯಾಲಯಗಳಲ್ಲಿ ಅಗತ್ಯ ಅರ್ಜಿಗಳನ್ನು ಸಲ್ಲಿಸಲು ಪ್ರಾಸಿಕ್ಯೂಷನ್ ಇಲಾಖೆಗೆ ಸೂಚನೆ ನೀಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 1, 2022ರಂದು ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ವಿರುದ್ಧದ 4 ಪ್ರಕರಣಗಳನ್ನು ಕೈಬಿಡಲು ಆದೇಶ ನೀಡಲಾಗಿದೆ. 2023ರ ಮಾರ್ಚ್ 20ರಂದು ಕಲಬುರಗಿಯಲ್ಲಿ ನಡೆದ ಏಪ್ರಿಲ್ 2016ರ ಘಟನೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖಂಡ ಸಿದ್ದಲಿಂಗ ಸ್ವಾಮಿ ಮತ್ತು ಇತರ 11 ಜನರ ವಿರುದ್ಧದ ದ್ವೇಷ ಭಾಷಣದ ಪ್ರಕರಣವನ್ನೂ ರಾಜ್ಯ ಸರ್ಕಾರ ಕೈಬಿಟ್ಟಿದೆ.

ಈ ವರ್ಷದ ಫೆಬ್ರವರಿಯಲ್ಲಿ ಹಿಂಪಡೆದ 21 ಪ್ರಕರಣಗಳಲ್ಲಿ 11 ಪ್ರಕರಣಗಳು ಕೋಮುಗಲಭೆಗೆ ಸಂಬಂಧಿಸಿದವುಗಳಾಗಿವೆ ಎಂದು ವರದಿಯಾಗಿದೆ. "ನಾವು ಕಾನೂನು ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಕುಳಿತು ಹಿಂತೆಗೆದುಕೊಳ್ಳಬೇಕಾದ ಪ್ರಕರಣಗಳನ್ನು ಸಚಿವ ಸಂಪುಟದ ಉಪ ಸಮಿತಿಯಲ್ಲಿ ನಿರ್ಧರಿಸಲಾಗುತ್ತದೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ವರದಿ ಪ್ರಕಾರ, ರಾಜ್ಯ ಗೃಹ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯಲ್ಲಿ, ಜನವರಿ 2020 ಮತ್ತು 2023ರ ನಡುವೆ ಕನಿಷ್ಠ 105 ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 55 ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ದಾಖಲಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+