ಶಾದಿಭಾಗ್ಯ ಯೋಜನೆಯನ್ನು ರದ್ದುಗೊಳಿಸಿದ ಬಿಜೆಪಿ ಸರ್ಕಾರ
ಬೆಂಗಳೂರು, ಮಾರ್ಚ್ 08: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ 'ಶಾದಿ ಭಾಗ್ಯ' ಯೋಜನೆಯನ್ನು ಸರ್ಕಾರ ರದ್ದುಗೊಳಿಸಿದೆ. ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಪ ಸಂಖ್ಯಾತರ ನಿರ್ದೇಶನಾಲಯ ಶನಿವಾರ ಈ ಕುರಿತು ಸುತ್ತೋಲೆ ಹೊರಡಿಸಿದೆ. ಈ ವರ್ಷದ ಬಜೆಟ್ನಲ್ಲಿ ಯೋಜನೆಗೆ ಅನುದಾನವನ್ನು ನಿಗದಿ ಮಾಡಿಲ್ಲ. ಆದ್ದರಿಂದ, ಯೋಜನೆಗೆ ಹೊಸ ಅರ್ಜಿ ಸ್ವೀಕಾರ ಮಾಡುವುದನ್ನು ತಕ್ಷಣ ನಿಲ್ಲಿಸಲು ಸೂಚನೆ ನೀಡಲಾಗಿದೆ.
ಶಾದಿಭಾಗ್ಯ ಕೊಟ್ಟ ಸಿದ್ದು ಮನೆಗೆ ಹೋಗೋದು ಪಕ್ಕಾ!
ಶಾದಿಭಾಗ್ಯ ಅಥವ ಬಿದಾಯಿ ಯೋಜನೆಗೆ ಹೊಸ ಅರ್ಜಿಗಳನ್ನು ಸ್ವೀಕಾರ ಮಾಡಬೇಡಿ. ಮಂಜೂರಾತಿಗೆ ಬಾಕಿ ಇರುವ ಅರ್ಜಿಗಳ ವಿವರಗಳನ್ನು ಮಾರ್ಚ್ 9ರೊಳಗೆ ಸಲ್ಲಿಕೆ ಮಾಡಿ ಅಲ್ಪಸಂಖ್ಯಾತ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.
ಭಾರಿ ನಿರೀಕ್ಷೆಯಲ್ಲಿದ್ದ 'ಸಮಾಜ ಕಲ್ಯಾಣ'ಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದಿಷ್ಟೇ!
ಈ ಯೋಜನೆಯನ್ನು ಜಾರಿಗೆ ತಂದಾಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ. ಎಸ್. ಯಡಿಯೂರಪ್ಪ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿ, ಧರ್ಮದ ಹೆಣ್ಣು ಮಕ್ಕಳಿಗೂ ಈ ಯೋಜನೆ ವಿಸ್ತರಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಧರಣಿ ನಡೆಸಿದ್ದರು.
ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ
ಬಜೆಟ್ ಬಳಿಕ ಯೋಜನೆ ರದ್ದು
ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಜೆಟ್ನಲ್ಲಿ ಆರ್ಥಿಕ ಇಲಾಖೆಯು ಶಾದಿಭಾಗ್ಯ ಯೋಜನೆಗೆ ಅನುದಾನ ನಿಗದಿಪಡಿಸದ ಹಿನ್ನಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಯೋಜನೆಯ ಅರ್ಜಿ ಸ್ವೀಕಾರವನ್ನು ನಿಲ್ಲಿಸಬೇಕು ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.
ಎಷ್ಟು ಅನುದಾನ ನೀಡಲಾಗಿತ್ತು
ಶಾದಿಭಾಗ್ಯ ಯೋಜನೆಗೆ ವಾರ್ಷಿಕ 50 ಕೋಟಿ ರೂ. ನಷ್ಟು ಹಣವನ್ನು ಬಜೆಟ್ನಲ್ಲಿ ಒದಗಿಸಲಾಗುತ್ತಿತ್ತು. ಬಳಿಕ ಬೇಡಿಕೆ ಹೆಚ್ಚಾದ ಕಾರಣ ಅರ್ಜಿಗಳನ್ನು ಸ್ವೀಕಾರ ಮಾಡಿದ ನಂತರ ವಿವಾಹದ ಬಳಿಕ ಹಣ ನೀಡಲಾಗುತ್ತಿತ್ತು. 2019-20ರ ಬಜೆಟ್ನಲ್ಲಿ 180 ಕೋಟಿ ಹಣ ಕೇಳಿದ್ದರೂ ನೀಡಿರಲಿಲ್ಲ. 2017-18ರಲ್ಲಿ ಅರ್ಜಿಗಳ ಇತ್ಯರ್ಥಕ್ಕೆ 60 ಕೋಟಿ ಹಣ ಮಾತ್ರ ನೀಡಲಾಗಿತ್ತು. ಈ ಬಾರಿಯ ಬಜೆಟ್ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ 200 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ.
ಯು. ಟಿ. ಖಾದರ್ ಪ್ರತಿಕ್ರಿಯೆ
ಶಾದಿಭಾಗ್ಯ ಯೋಜನೆ ರದ್ದು ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಯು. ಟಿ. ಖಾದರ್, "ರಾಜ್ಯ ಸರ್ಕಾರದ ಬಳಿ ಹಣ ಇಲ್ಲದ ಕಾರಣ ಜನಪ್ರಿಯ ಯೋಜನೆಗಳನ್ನು ರದ್ದುಪಡಿಸುವ ಮುನ್ಸೂಚನೆ ಸಿಕ್ಕಿದೆ. ಶಾದಿಭಾಗ್ಯ ಯೋಜನೆ ಸ್ಥಗಿತಗೊಳಿಸಲಾಗಿದೆ. ಮುಂದೆ ಹಲವು ಯೋಜನೆ ರದ್ದಾದರೂ ಅಚ್ಚರಿ ಇಲ್ಲ" ಎಂದು ಹೇಳಿದರು.
ಏನಿದು ಶಾದಿಭಾಗ್ಯ ಯೋಜನೆ
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧರು, ಸಿಖ್, ಪಾರ್ಸಿ) ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳು, ವಿಧವೆಯರು, ವಿಚ್ಛೇದಿತ ಮಹಿಳೆಯರ ವಿವಾಹಕ್ಕೆ ಸರ್ಕಾರ 50 ಸಾವಿರ ರೂ. ಸಹಾಯಧನ ನೀಡುತ್ತಿತ್ತು. ಬಿಪಿಎಲ್ ಕುಟುಂಬಕ್ಕೆ ಸೇರಿದವರು ಹಾಗೂ ವಾರ್ಷಿಕ 1.5 ಲಕ್ಷ ಆದಾಯವುಳ್ಳ ಕುಟುಂಬದ ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಹರಾಗಿದ್ದರು.