ಚಿತ್ತಾಪುರ ಕ್ಷೇತ್ರದಲ್ಲಿ ರೌಡಿ ಶೀಟರ್ಗೆ ಬಿಜೆಪಿ ಟಿಕೆಟ್: ಪ್ರಿಯಾಂಕ್ ಖರ್ಗೆ ಗೆಲುವಿಗೆ ಕೇಸರಿ ಪಕ್ಷದ ಪರೋಕ್ಷ ಸಹಾಯ?
ಚಿತ್ತಾಪುರ, ಏಪ್ರಿಲ್ 27: ಕಲಬುರಗಿ ಜಿಲ್ಲೆಯ ಚಿತ್ತಾಪುರವು ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಮಾಜಿ ಸಚಿವ ಪ್ರಿಯಾಂಕಾ ಖರ್ಗೆ ಅವರು ಈ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಅವರೀಗ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ರೌಡಿ ಶೀಟರ್ ಮಣಿಕಾಂತ್ ರಾಥೋಡ್ ಅವರಿಗೆ ಬಿಜೆಪಿ ನೀಡಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. 2008 ರಲ್ಲಿ ರಚನೆಯಾದ ಈ ಕ್ಷೇತ್ರದಲ್ಲಿ ( ಎಸ್ಸಿ ಮೀಸಲು ) ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದರು. ಅವರು 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಈ ಹಿನ್ನೆಲೆಯಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಆಗ ಖರ್ಗೆ ಅವರ ಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ನಿಂದ ಕಣಕ್ಕಿಳಿದರು. ಆ ಚುನಾವಣೆಯಲ್ಲಿ ಕೇವಲ 1,606 ಮತಗಳ ಅಂತರದಿಂದ ಪ್ರಿಯಾಂಕ್ ಖರ್ಗೆ ಪರಾಭವಗೊಂಡರು. ಬಿಜೆಪಿಯ ವಾಲ್ಮೀಕಿ ನಾಯಕ್ ಗೆಲುವು ಸಾಧಿಸಿದರು.
ಆ ನಂತರ ನಡೆದ 2013ರಲ್ಲಿ ಪ್ರಿಯಾಂಕ್ ಖರ್ಗೆ ಅವರು ಅಭೂತಪೂರ್ವ ಗೆಲುವು ಸಾಧಿಸಿದರು. 31,178 ಮತಗಳ ಅಂತರದಿಂದ ಬಿಜೆಪಿಯ ವಾಲ್ಮೀಕಿ ನಾಯಕ್ ಅವರನ್ನು ಸೋಲಿಸಿದರು. 2018ರ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು 4,219 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2021 ರಲ್ಲಿ ವಾಲ್ಮೀಕಿ ನಾಯಕ್ ಅವರ ನಿಧನದ ನಂತರ ಬಿಜೆಪಿಗೆ ಪ್ರಬಲ ಅಭ್ಯರ್ಥಿ ಇಲ್ಲದಂತಾಗಿದೆ. ಇದರಿಂದ ಪ್ರಿಯಾಂಕ್ ಖರ್ಗೆಗೆ ಅನುಕೂಲಕರ ವಾತಾವರಣವಿದೆ. ಇಂತಹ ವಾತಾವರಣದಲ್ಲಿಯೂ ಬಿಜೆಪಿಯು ತಪ್ಪು ಹೆಜ್ಜೆ ಇಟ್ಟಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.
ರೌಡಿ ಶೀಟರ್ಗೆ ಟಿಕೆಟ್ ನೀಡಿದ ಬಿಜೆಪಿ
ಪ್ರಿಯಾಂಕ್ ಖರ್ಗೆ ಅವರಿಗೆ ಅನುಕೂಲಕರ ವಾತಾವರಣವಿದ್ದರೂ, ರೌಡಿ ಶೀಟರ್ ಮಣಿಕಾಂತ್ ರಾಥೋಡ್ಗೆ ಬಿಜೆಪಿ ಟಿಕೆಟ್ ನೀಡಿದೆ. ಈತನ ವಿರುದ್ಧ ಸರಿಸುಮಾರು 40 ಪ್ರಕರಣಗಳು ಬಾಕಿ ಇವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿ ಸಾಗಣೆ, ಕೊಲೆ ಯತ್ನ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆಯಂತಹ ಗಂಭೀರ ಪ್ರಕರಣಗಳು ಈತನ ಮೇಲಿವೆ.

ಕಲಬುರಗಿ ನಗರ ಪೊಲೀಸ್ ಆಯುಕ್ತರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈತನನ್ನು ನಗರದಿಂದ ಗಡಿಪಾರು ಮಾಡಿದ್ದರು. ಆದರೆ, ಅವರು ನ್ಯಾಯಾಲಯದಿಂದ ಆದೇಶಕ್ಕೆ ತಡೆ ತಂದಿದ್ದಾನೆ. ಪರಿಸ್ಥಿತಿ ಹೀಗಿದ್ದರೂ, ಬಿಜೆಪಿಯು ರೌಡಿ ಶೀಟರ್ಗೆ ಟಿಕೆಟ್ ನೀಡಿದೆ. ಈ ಕಾರಣದಿಂದ ಪ್ರಿಯಾಂಕ್ ಖರ್ಗೆ ಗೆಲುವು ಇನ್ನಷ್ಟು ಸಲೀಸಾಗಲಿದೆ ಎಂದು ಹೇಳಲಾಗುತ್ತಿದೆ.
ಚಿಂಚನಸೂರು ಸೇರ್ಪಡೆಯಿಂದ ಲಾಭ
ಚಿತ್ರಾಪುರ ಕ್ಷೇತ್ರದಲ್ಲಿ ಕೋಲಿ ಸಮಾಜದವರು ನಿರ್ಣಾಯಕ ಪಾತ್ರವಹಿಸುತ್ತಾರೆ. ಬಿಜೆಪಿ ಎಂಎಲ್ಸಿ ಆಗಿದ್ದ ಬಾಬುರಾವ್ ಚಿಂಚನಸೂರ್ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಅವರು ಕೋಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದೀಗ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ, ಕೋಲಿ ಸಮುದಾಯದ ಮತಗಳನ್ನು ಆಕರ್ಷಿಸುವಲ್ಲಿ ಪ್ರಿಯಾಂಕ್ ಸಿದ್ದತೆ ಮಾಡಿಕೊಂಡಿದ್ದಾರೆ.
ಇತ್ತ ರಾಥೋಡ್ ಅವರ ಲಂಬಾಣಿ ( ಬಂಜಾರ ) ಸಮುದಾಯದ ಮತಗಳನ್ನು ಕೇವಲ 15,000 ದಷ್ಟಿವೆ. ಇವು ನಿರ್ಣಾಯಕ ಮತಗಳಲ್ಲ. ಹೀಗಾಗಿ ಪ್ರಿಯಾಂಕ್ ಖರ್ಗೆ ಗೆಲುವು ಸರಳವಾಗಬಹುದು. ರೌಡಿ ಶೀಟರ್ ಒಬ್ಬನಿಗೆ ಟಿಕೆಟ್ ನೀಡುವ ಮೂಲಕ ಪ್ರಿಯಾಂಕ್ ಗೆಲುವಿಗೆ ಬಿಜೆಪಿ ಪರೋಕ್ಷ ಸಹಾಯ ಮಾಡಿದೆ ಎಂಬ ಮಾತುಗಳನ್ನು ಅಲ್ಲಗಳೆಯುವಂತಿಲ್ಲ.












Click it and Unblock the Notifications