ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್?
Recommended Video

ಬೆಂಗಳೂರು, ಜನವರಿ 17: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲೇಬೇಕೆಂಬ ಪ್ರಯತ್ನದಲ್ಲಿದ್ದ ಬಿಜೆಪಿಯ ಮೂರನೇ ಪ್ರಯತ್ನವೂ ವಿಫಲವಾಗುವುದು ಬಹುತೇಕ ಖಚಿತವೆನ್ನಿಸಿದೆ.
ಕಳೆದ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸಲು ಬಿಜೆಪಿ ವಿಫಲವಾಗಿತ್ತು. ಆ ಸಂದರ್ಭದಲ್ಲೂ ಕೆಲವು ಜೆಡಿಎಸ್ ಮತ್ತು ಕಾಂಗ್ರೆಸ್ ನ ಕೆಲ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸಿತ್ತು. ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದರು. ಆದರೆ ನಂತರ ಅಗತ್ಯದಷ್ಟು ಶಾಸಕರ ಬೆಂಬಲ ಸಿಗದೆ, ವಿಶ್ವಾಸಮತ ಯಾಚಿಸದೆ, ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.
ನಂತರ ಕಾಂಗ್ರೆಸ್ ನಲ್ಲಿ ಸಂಪುಟ ರಚನೆಯ ಸಂದರ್ಭದಲ್ಲಿ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಮುಂತಾದ ಶಾಸಕರು ಬಂಡಾಯ ಎದ್ದಾಗಲೂ ಬಿಜೆಪಿ ಸಮ್ಮಿಶ್ರ ಸರ್ಕಾರ ಉರುಳಿಸಲು ತೆರೆಮರೆಯ ಕಸರತ್ತು ನಡೆಸಿತ್ತು. ಅದ್ಯಾವುದೂ ನಂತರ ಫಲ ನೀಡಿರಲಿಲ್ಲ. ಇದೀಗ ಬಿಜೆಪಿಯ ಮೂರನೇ ಪ್ರಯತ್ನವೂ ಬಹುತೇಕ ವಿಫಲವಾಗಿದೆ.

ಶಾಸಕರನ್ನು ಸೆಳೆಯಲು ತೆರೆಮರೆಯ ಯತ್ನ
ಕರ್ನಾಟಕದ ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 80 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ 104, ಜೆಡಿಎಸ್ 37 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಜಯಸಾಧಿಸಿದ್ದರು. ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 113! ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಇದೀಗ ಬಿಜೆಪಿ ಕಾಂಗ್ರೆಸ್ ನ 12-15 ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಮಾಡಿದರೆ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ಬಿಜೆಪಿ ಬಹುಮತ ತೋರಿಸುವುದಕ್ಕೆ ಸಾಧ್ಯ ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ ಮೂರನೇ ಬಾರಿಗೂ ಈ ಲೆಕ್ಕಾಚಾರ ಕೈಕೊಟ್ಟಿದ್ದು ಬಿಜೆಪಿಯ ದುರದೃಷ್ಟವೇ ಸರಿ.

ಅಂದುಕೊಂಡಿದ್ದು ಆಗಲಿಲ್ಲ!
ಕಳೇದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶಾಸಕರಾದ ಭೀಮಾ ನಾಯಕ್, ಪ್ರತಾಪ್ ಗೌಡ ಪಾಟೀಲ್ ಮತ್ತು ಅಮರೇಗೌಡ ಬಯ್ಯಾಪುರ ಮತ್ತು ಜೆ ಎನ್ ಗಣೇಶ್ ಅವರು ವಾಪಸ್ಸಾಗಿದ್ದಾರೆ. ತಾವು ಕಾಂಗ್ರೆಸ್ ನಲ್ಲಿಯೇ ಇರುತ್ತೇವೆ. ವದಂತಿಗಳೆಲ್ಲ ಸುಳ್ಳು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. "ಗೋವಾದಲ್ಲಿ ನಾನು ಸ್ನೇಹಿತರನ್ನು ಭೇಟಿಯಾಗುವುದಕ್ಕೆಂದು ಹೋಗಿದ್ದೆ. ನಾಣು ಬಿಜೆಪಿ ಸೇರಲು ಹೋಗಿದ್ದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಬಿಜೆಪಿ ಸದಸ್ಯರು ಒತ್ತಾಯಿಸಿದರೂ ನಾನು ಬಿಜೆಪಿ ಸೇರುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ"

ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿಲ್ಲ!
ನಾಲ್ವರು ಶಾಸಕರು ವಾಪಸ್ಸಾದರೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಈಗಾಗಲೇ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಸಿರುವ ಇಬ್ಬರು ಪಕ್ಷೇತರ ಶಾಸಕರಾದ ಎಸ್ ನಾಗೇಶ್ ಮತ್ತು ಆರ್ ಶಂಕರ್ ಇನ್ನೂ ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಕ್ಕಿಲ್ಲ. ಜ.18 ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ ಎಲ್ಲಾ ಶಾಸಕರೂ ಹಾಜರಿರುತ್ತಾರೆ, ಕಾದು ನೋಡಿ ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿಜೆಪಿಗಿರುವ ಏಕೈಕ ಭರವಸೆ ರಮೇಶ್ ಜಾರಕಿಹೊಳಿ!
ಕುಮಾರಸ್ವಾಮಿ ಸಂಪುಟದಲ್ಲಿ ಮಂತ್ರಿಸ್ಥಾನ ಕಳೆದುಕೊಂದ ಮೇಲೆ ತೀರಾ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರೊಂದಿಗೆ ಅವರ ಬೆಂಬಲಿಗ ಸದಸ್ಯರೂ ಇರುವುದು ಕಾಂಗ್ರೆಸ್ಸಿಗೆ ತಲೆನೋವಾದರೆ, ಬಿಜೆಪಿಗೆ ಸದ್ಯಕ್ಕಿರುವ ಭರವಸೆ ಎಂದರೆ ಇದೇ ಆಗಿದೆ. ಆದರೆ ಬಿಜೆಪಿ ಅಂದುಕೊಂಡಂತೆ 12-15 ಶಾಸಕರನ್ನು ತನ್ನತ್ತ ಸೆಳೆಯುವುದ ಕಷ್ಟ ಎಂಬುದು ಈಗ ಪಕ್ಷಕ್ಕೆ ಅರ್ಥವಾಗಿದೆ, ಆದ್ದರಿಂದ ಗುರುಗ್ರಾಮದಲ್ಲಿ ಕೂಡಿಟ್ಟಿದ್ದ ತನ್ನ ಶಾಸಕರನ್ನು ಬಿಜೆಪಿ ವಾಪಸ್ ಕರೆಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications