Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
ಬೆಂಗಳೂರು, ಮಾರ್ಚ್ 29: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ಕರ್ನಾಟಕದಲ್ಲಿ ಶೇ.60ಕ್ಕೂ ಹೆಚ್ಚು ಹಾಲಿ ಸಂಸದರನ್ನು ಬದಲಾಯಿಸಿರುವ ಬಿಜೆಪಿ ಹೈಕಮಾಂಡ್ ಹಾಗೂ ನಾಯಕರು ಲೋಕಸಭೆ ಚುನಾವಣೆಗೂ ಮುನ್ನ ಹಲವು ಸವಾಲುಗಳನ್ನು ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಬಿಜೆಪಿ-ಜೆಡಿಎಸ್ ಮೈತ್ರಿಯ ಸಮನ್ವಯ ಸಭೆ ನಡೆಯಲಿದೆ.
ಟಿಕೆಟ್ ಕೈ ತಪ್ಪಿರುವ ಕಾರಣ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಬಿಜೆಪಿಯ ಹಿರಿಯ ನಾಯಕರು ಅಂತವರನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಮೈಸೂರು-ಕೊಡಗು, ಬೆಂಗಳೂರು ಉತ್ತರ, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಭಿನ್ನಮತ ಬಹುತೇಕ ಶಮನವಾಗಿದ್ದರೆ, ಉತ್ತರ ಕನ್ನಡ, ಚಿತ್ರದುರ್ಗ ಮತ್ತು ರಾಯಚೂರಿನಲ್ಲಿ ಪಕ್ಷಕ್ಕೆ ಸವಾಲು ಎದುರಾಗಿದೆ. ಟಿಕೆಟ್ ವಂಚಿತರನ್ನು ಮನವೊಲಿಸುವುದು ಕಷ್ಟವಾಗಿದೆ.

25 ಬಿಜೆಪಿ ಅಭ್ಯರ್ಥಿಗಳಲ್ಲಿ ಒಂಬತ್ತು ಮಂದಿ ಲಿಂಗಾಯತರು, ನಾಲ್ವರು ಎಸ್ಸಿಗಳು, ಮೂವರು ಬ್ರಾಹ್ಮಣರು, ಮೂವರು ಒಕ್ಕಲಿಗರು, ಇಬ್ಬರು ಎಸ್ಟಿ, ಒಬ್ಬರು ಬಂಟ್ಸ್ ಮತ್ತು ಮೂವರು ಇತರೆ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಲಾಗಿದೆ. ಒಂಬತ್ತು ಲಿಂಗಾಯತರು ಪಟ್ಟಿಯಲ್ಲಿದ್ದು, ಬಹುಸಂಖ್ಯೆಯ ಒಕ್ಕಲಿಗರಿಗೆ ಕೇವಲ ಮೂರು ಸ್ಥಾನ ನೀಡಲಾಗಿದೆ ಎಂದು ಒಕ್ಕಲಿಗ ಸಂಘದ ಸದಸ್ಯರು ಕೂಡ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೇ ಹಳೇ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಹಾಗೂ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಒಕ್ಕಲಿಗ ಪ್ರಾತಿನಿಧ್ಯದ ಬಗ್ಗೆ ಕೆಲ ಮುಖಂಡರು ಪಕ್ಷದ ನಡೆಯನ್ನು ವಿರೋಧಿಸಿದ್ದಾರೆ.

ಜೆಡಿಎಸ್ ಕೂಡ ಇಬ್ಬರು ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ, ಹೀಗಾಗಿ ಒಕ್ಕಲಿಗರಿಗೆ ಮೈತ್ರಿ ಕೂಟದಿಂದ ಒಟ್ಟು ಐದು ಸ್ಥಾನ ನೀಡಿದಂತಾಗುತ್ತದೆ. ಇದು ಕಡಿಮೆ ಪ್ರಾತಿನಿಧ್ಯವಲ್ಲ ಎನ್ನುವುದು ಬಿಜೆಪಿಯ ಹಿರಿಯ ನಾಯಕರ ವಾದವಾಗಿದೆ.
ಇನ್ನು ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಚಿತ್ರದುರ್ಗದಿಂದ ಗೋವಿಂದ ಕಾರಜೋಳ ಮತ್ತು ತುಮಕೂರಿನಿಂದ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗಿದ್ದು, ಮೂವರು ಹಿರಿಯ ನಾಯಕರನ್ನು ಅವರವರ ಕ್ಷೇತ್ರಗಳಲ್ಲಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧೆಗಿಳಿಸಲಾಗಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಪಕ್ಷವು ಹೊರಗಿನವರನ್ನು ಕಣಕ್ಕಿಳಿಸುತ್ತಿರುವುದಕ್ಕೆ ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೂ ಕೂಡ ಸ್ಪಷ್ಟನೆ ನೀಡಿರುವ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಗೋವಿಂದ ಕಾರಜೋಳ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಎಲ್ಲಾ ಕ್ಷೇತ್ರವನ್ನು ಬಲ್ಲವರಾಗಿದ್ದಾರೆ. ಈ ಮೂವರು ಕರ್ನಾಟಕದ ಎಲ್ಲಾ ಭಾಗದ ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿದಿದ್ದಾರೆ. ಹೀಗಾಗಿ ಇದು ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ.
25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿವರ
ಬಸವರಾಜ ಬೊಮ್ಮಾಯಿ- ಹಾವೇರಿ
ವಿ.ಸೋಮಣ್ಣ -ತುಮಕೂರು
ಬಿ.ಶ್ರೀರಾಮುಲು -ಬಳ್ಳಾರಿ
ಕೋಟ ಶ್ರೀನಿವಾಸ್ ಪೂಜಾರಿ-ಉಡುಪಿ-ಚಿಕ್ಕಮಗಳೂರು
ಪಿಸಿ ಮೋಹನ್-ಬೆಂಗಳೂರು ಸೆಂಟ್ರಲ್
ತೇಜಸ್ವಿ ಸೂರ್ಯ-ಬೆಂಗಳೂರು ದಕ್ಷಿಣ
ಶೋಭಾ ಕರಂದ್ಲಾಜೆ- ಬೆಂಗಳೂರು ಉತ್ತರ
ಪಿ.ಸಿ ಗದ್ದಿಗೌಡರ್- ಬಾಗಲಕೋಟೆ
ಅಣ್ಣಾಸಾಹೇಬ ಜೊಲ್ಲೆ-ಚಿಕ್ಕೋಡಿ
ಬಿ.ವೈ.ರಾಘವೇಂದ್ರ-ಶಿವಮೊಗ್ಗ
ಡಾ.ಉಮೇಶ್ ಜಾದವ್-ಕಲಬುರಗಿ
ರಮೇಶ ಜಿಗಜಿಣಗಿ-ವಿಜಯಪುರ
ಡಾ. ಬಸವರಾಜ ಕ್ಯಾವಟೂರ್-ಕೊಪ್ಪಳ
ಡಾ.ಸಿ.ಎನ್.ಮಂಜುನಾಥ್-ಬೆಂಗಳೂರು ಗ್ರಾಮಾಂತರ
ಎಸ್.ಬಾಲಾಜಿ-ಚಾಮರಾಜನಗರ
ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
ಭಗವಂತ ಖೂಬಾ-ಬೀದರ್
ಪ್ರಹ್ಲಾದ್ ಜೋಶಿ-ಹುಬ್ಬಳ್ಳಿ
ಕ್ಯಾಪ್ಟನ್ ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್-ಮೈಸೂರು-ಕೊಡಗು
ವಿಶ್ವೇಶ್ವರ ಹೆಗಡೆ ಕಾಗೇರಿ- ಉತ್ತರ ಕನ್ನಡ
ಡಾ. ಗೋವಿಂದ್ ಕಾರಜೋಳ-ಚಿತ್ರದುರ್ಗ
ರಾಜಾ ಅಮರೇಶ್ವರ ನಾಯ್ಕ್-ರಾಯಚೂರು
ಜಗದೀಶ್ ಶೆಟ್ಟರ್- ಬೆಳಗಾವಿ












Click it and Unblock the Notifications