ಉಮಾಶ್ರೀ ಅಶ್ಲೀಲ-ದ್ವಂದ್ವಾರ್ಥ ಡೈಲಾಗ್ ಕಲಾವಿದೆ

ತಮ್ಮನ್ನು ಅತ್ಯಾಚಾರಿ ಎಂಬರ್ಥದಲ್ಲಿ ಹೀಗಳೆದಿರುವ ಕಾಂಗ್ರೆಸ್ ಸಚಿವೆ ಉಮಾಶ್ರೀ ಅವರನ್ನು ಸಂಪುಟದಿಂದ ಕೈಬಿಡಬೇಕೆಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ನಿನ್ನೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೇಣುಕಾಚಾರ್ಯ ಅವರು 'ಕಳೆದ ವಾರ ನಡೆದ ತುಮಕೂರು ಕಾಂಗ್ರೆಸ್ ಸಮಾವೇಶದಲ್ಲಿ ಸಚಿವೆ ಉಮಾಶ್ರೀ ನನ್ನ ಬಗ್ಗೆ ಹಾಗೂ ನಮ್ಮ ಬಿಜೆಪಿ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಯಾವುದೇ ವ್ಯಕ್ತಿಯ ಖಾಸಗಿ ವಿಷಯಗಳನ್ನು ಪ್ರಸ್ತಾಪಿಸುವ ನೈತಿಕತೆ ಉಮಾಶ್ರೀ ಅವರಿಗಿಲ್ಲ' ಎಂದು ಕಿಡಿಕಿಡಿಯಾದರು.
ಅಶ್ಲೀಲ-ದ್ವಂದ್ವಾರ್ಥ ಡೈಲಾಗ್ ಕಲಾವಿದೆ:
'ಉಮಾಶ್ರೀ ಅಶ್ಲೀಲ-ದ್ವಂದ್ವಾರ್ಥ ಡೈಲಾಗ್ ಕಲಾವಿದೆ. ಸಿನಿಮಾ ಮತ್ತು ನಾಟಕಗಳಲ್ಲಿ ಅಶ್ಲೀಲ ಸಂಭಾಷಣೆಗಳ ಮಹಾಪೂರವನ್ನೇ ಹರಿಸಿ, ರಾಜಕೀಯಕ್ಕೆ ಬಂದವರು ಉಮಾಶ್ರೀ. ಉಮಾಶ್ರೀ ಅದನ್ನು ಮರೆತಿದ್ದಾರೆ ಅಂತಕಾಣುತ್ತಿದೆ. ಇಂತಹ ಉಮಾಶ್ರೀ ಅವರು ನನ್ನ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಉಮಾಶ್ರೀಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಿರುವುದೇ ಹಾಸ್ಯಾಸ್ಪದ ಮತ್ತು ಅವಮಾನಕರ' ಎಂದು ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
'ನನ್ನ ಮತ್ತು ನರ್ಸ್ ಜಯಲಕ್ಷ್ಮಿ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಈಗಾಗಲೇ ನನ್ನನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ದೃಷ್ಟಿಯಿಂದ ಸಚಿವೆ ಉಮಾಶ್ರೀ ಅವರು ಹೀಗೆ ಅವಮಾನಕರವಾಗಿ ಮಾತನಾಡುವುದು ತರವಲ್ಲ. ಮತ್ತೊಮ್ಮೆ ಈ ರೀತಿ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವೆ' ಎಂದು ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications