ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಬೇಕಿದೆ : ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 17 : 'ಉಗ್ರಗಾಮಿಗಳನ್ನು ಉತ್ಪಾದನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಮಯವಿದು. ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಬೇಕಿದೆ. ನಮ್ಮ ಪ್ರಧಾನಿ ಮೋದಿ ಅವರು ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ' ಎಂದು ಕರ್ನಾಟಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿ ನಗರ ಹಾಗೂ ನಗರ ಜಿಲ್ಲೆ ವತಿಯಿಂದ ಬೆಂಗಳೂರು ನಗರದ ಮೌರ್ಯ ವೃತ್ತದಲ್ಲಿ ದೇಶಕ್ಕಾಗಿ ಮಡಿದ ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತು. ರಣಹೇಡಿ ಉಗ್ರರ ಕೃತ್ಯವನ್ನು ಖಂಡಿಸಿ ಭಯೋತ್ಪಾದನೆಯ ವಿರುದ್ಧ ಪ್ರತಿಭಟನಾ ಧರಣಿ ಮಾಡಲಾಯಿತು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಶಾಸಕರಾದ ಅರವಿಂದ ಲಿಂಬಾವಳಿ, ನಗರ ಅಧ್ಯಕ್ಷ ಸದಾಶಿವ ಸೇರಿದಂತೆ, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
'ಈಶಾನ್ಯ ಭಾರತದಲ್ಲಿ ನಾಗಾ ಉಗ್ರರನ್ನು ಸೆದೆ ಬಡಿದಂತೆ, ಉರಿ ಪ್ರದೇಶದಲ್ಲಿ ದಾಳಿಕೋರರ ಹುಟ್ಟಡಗಿಸಿದಂತೆ, ಪುಲ್ವಾಮ ದಾಳಿಗೂ ಪ್ರತ್ಯುತ್ತರ ನೀಡಬೇಕಿದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ನಾವೆಲ್ಲ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದೆ' ಎಂದು ಯಡಿಯೂರಪ್ಪ ಕರೆ ನೀಡಿದರು.

ಉತ್ತರ ನೀಡುವ ಕಾಲ ಬಂದಿದೆ
'ನಮ್ಮ ಸೈನಿಕರ ದೇಹದಿಂದ ಬಿದ್ದ ತೊಟ್ಟು ರಕ್ತಕ್ಕೂ ಪಾಪಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಕಾಲವೀಗ ಬಂದಿದೆ. ಈ ಕೆಲಸವನ್ನು ಮಾಡಲು ನಮ್ಮ ಪ್ರಧಾನಿ ಮೋದಿ ಅವರು ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್ ದುರ್ಬಳ ಆಡಳಿತ
'ಕಾಶ್ಮೀರದಲ್ಲಿ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ಇರಬಾರದೆಂದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಹೇಳಿದ್ದರು. ಆದರೆ, ಕಾಂಗ್ರೆಸ್ನ ದುರ್ಬಲ ಆಡಳಿತದಿಂದ ಕಾಶ್ಮೀರದಲ್ಲಿನ ಸಮಸ್ಯೆ ಬೆಳೆಯಿತು. ಭಾರತದೊಂದಿಗೆ ನಡೆದ ಎಲ್ಲಾ ಯುದ್ಧಗಳಲ್ಲಿ ಪಾಕಿಸ್ತಾನ ಸೋತರು ಬುದ್ಧಿ ಕಲಿತಿಲ್ಲ. ಈಗಿರುವ ನಮ್ಮ ಬಲಿಷ್ಠ ಕೇಂದ್ರ ಸರ್ಕಾರ ಪಾಠ ಕಲಿಸಲಿದೆ' ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಉತ್ತಮ ನಡೆ
ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, 'ಸುಮಾರು 45 ಚ.ಕಿ.ಮೀ.ಪ್ರದೇಶ ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಇದಕ್ಕೆಲ್ಲ 50 ವರ್ಷ ಆಳಿದ ಕಾಂಗ್ರೆಸ್ ಕಾರಣ. ನಮ್ಮ ದೇಶದ ಉಪ್ಪು ತಿಂದು, ನೀರು ಕುಡಿಯುತ್ತಿರುವ ಹುರಿಯತ್ ನಾಯಕರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ನೀಡಿದ ಭದ್ರತೆಯನ್ನು ಹಿಂಪಡೆದಿರುವುದು ಉತ್ತಮ ನಿರ್ಧಾರ' ಎಂದರು.

ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿದೆ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, 'ಪಾಕಿಸ್ತಾನ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ದೇಶವಾಗಿದೆ. ಅಂತ ದೇಶಕ್ಕೆ ಚೀನಾವೂ ಬೆಂಬಲ ನೀಡುತ್ತಿದೆ. ಪಾಕಿಸ್ತಾನದ ವಸ್ತುಗಳು ಭಾರತದ ಒಳಗೆ ತರಲು ಶೇ 200 ರಷ್ಟು ತೆರಿಗೆ ವಿಧಿಸಿರುವುದು ಉತ್ತಮ ನಡೆ' ಎಂದರು.

ನಮ್ಮ ಸಹನೆ ಮೀರಿದೆ
ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಮಾತನಾಡಿ,'ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಪಾಕಿಸ್ತಾನ ಪದೇ-ಪದೇ ದಾಳಿ ಮಾಡುತ್ತಿದೆ. ನಮ್ಮ ಸಹನೆ ಮೀರಿದೆ, ಅವರು ಇಟ್ಟಿಗೆಯಿಂದ ನೀಡುವ ಪೆಟ್ಟಿಗೆ ನಾವು ಕಲ್ಲುಗಳ ಮೂಲಕ ಉತ್ತರ ಕೊಡಬೇಕಿದೆ' ಎಂದರು.











Click it and Unblock the Notifications