"ಟೀ ಮಾರೋರು, ದೇಶ ಮಾರೋರು" ಯಾರು ಬೇಕು?
ಬೆಂಗಳೂರು, ಜ.21 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀ ಮಾರುವವರು ಎಂದು ಟೀಕಿಸಿದ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್, ಕರ್ನಾಟಕ ಬಿಜೆಪಿಗೆ ಹೊಸ ಚುನಾವಣಾ ಪ್ರಚಾರ ತಂತ್ರವನ್ನು ನೀಡಿದ್ದಾರೆ. ಹೌದು, ರಾಜ್ಯದಲ್ಲಿ ಟೀ ಮಾರುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ನಡೆಸುವ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ.
ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಮಾತಿನ ಮಲ್ಲಯುದ್ಧ ನಡೆಸುವ ಬದಲು ಅವರ ಹೇಳಿಕೆಯನ್ನೇ ಪ್ರಚಾರ ತಂತ್ರವಾಗಿ ಬಳಸಿಕೊಳ್ಳಲು ಕರ್ನಾಟಕ ಬಿಜೆಪಿ ತೀರ್ಮಾನಿಸಿದೆ. "ಟೀ ಮಾರುವವರು ವರ್ಸಸ್ ದೇಶ ಮಾರುವವರು" ಎಂಬ ಘೋಷಣೆಯೊಂದಿಗೆ ಪ್ರಚಾರ ಆರಂಭಿಸಲು ಬಿಜೆಪಿ ತಯಾರಿ ನಡೆಸಿದೆ. [ಮೋದಿ ಟೀ ಮಾರೋಕೆ ಲಾಯಕ್ಕು]

ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿ ಸಭೆಯಲ್ಲಿ ಈ ಕುರಿತು ಯೋಜನೆ ರೂಪಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಶಾಸಕ ಸಿ.ಟಿ.ರವಿ ಈ ಪ್ರಚಾರವನ್ನು ರಾಜ್ಯದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಕಚೇರಿ ಮುಂದೆ ಟೀ ಮಾರುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ. [ಚಹಾದಂಗಡಿ ರಾಜಕೀಯ]
ಬಿಜೆಪಿ ಹೋರಾಟದ ಕುರಿತು ಹೇಳಿಕೆ ನೀಡಿರುವ ಪಕ್ಷದ ವಕ್ತಾರ, ಮಾಜಿ ಸಚಿವ ಸುರೇಶ್ ಕುಮಾರ್, ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಸಚಿವರು ಟೀಕೆ ನಡೆಸಿದ ನಂತರ, ಮೋದಿ ಅಭಿಮಾನಿಗಳು ಮೈಸೂರು, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿ ಟೀ ಮಾರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ ಎಂದರು.
ಟೀ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ ಹುದ್ದೆಗೆ ಏರಬಹುದು ಎಂದು ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಿಳಿಸಲು ಈ ಪ್ರಚಾರ ತಂತ್ರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಶ್ರೀಮಂತ ವ್ಯಕ್ತ ಜವಹಾರ್ ಲಾಲ್ ನೆಹರು ಪ್ರಧಾನಿ ಆಗಬಹುದು ಎಂದರೆ, ನರೇಂದ್ರ ಮೋದಿಯಂತಹ ಸಾಮಾನ್ಯ ಮನುಷ್ಯ ಏಕೆ ಆಗಬಾರದು ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಟೀ ಮಾರುವವರ ಸಮಾವೇಶ : ಬೆಂಗಳೂರು ಬಿಜೆಪಿ ಘಟಕ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಟೀ ಮಾರುವವರಿಗೆ ಮನವಿ ಮಾಡಲು ಅವರ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಿದೆ. ಎನ್ ಡಿಎ ಮೈತ್ರಿಕೂಟದ ಸಾಧನೆ ಮತ್ತು ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಿಳಿಸುವ ಪುಸ್ತಕವನ್ನು ಸಮಾವೇಶದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.












Click it and Unblock the Notifications