ಸದನದಲ್ಲಿ ಸಿದ್ದು ಬಣದ ಮೇಲುಗೈ, ಏಕಾಂಗಿಯಾದ ಡಿಕೆ: ಬಿಜೆಪಿ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಬಣ ರಾಜಕೀಯದ ಬೇಗುದಿಯಲ್ಲಿ ಬೇಯುತ್ತಿದೆ, ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಒಬ್ಬಂಟಿಯಾಗಿದ್ದಾರೆ ಅನ್ನೋ ಆರೋಪವನ್ನ ರಾಜ್ಯ ಬಿಜೆಪಿ ಮಾಡಿದೆ. ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಘಟಕ ಈ ರೀತಿ ವಾಗ್ದಾಳಿ ನಡೆಸಿದೆ. ಸದನದಲ್ಲಿ ಸಿದ್ದು ಬಣ ಮೇಲುಗೈ ಸಾಧಿಸಿದ ಹಿನ್ನೆಲೆ ಡಿಕೆ ಶಿವಕುಮಾರ್ ಏಕಾಂಗಿಯಾಗಿದ್ದಾರೆ ಎಂದಿದೆ.
ಹೌದು, ಈ ಮೊದಲಿನಿಂದಲೂ ರಾಜ್ಯ ಕಾಂಗ್ರೆಸ್ನಲ್ಲಿ 2 ಬಣ ಇದೆ ಎಂಬ ಆರೋಪಗಳು ಕೇಳಿಬಂದಿವೆ. ಅದರಲ್ಲೂ ಆರೋಪ ಸಾಬೀತು ಮಾಡುವಂತೆ ಸಿದ್ದರಾಮಯ್ಯ ಆಪ್ತರು & ಡಿಕೆ ಶಿವಕುಮಾರ್ ಆಪ್ತರ ನಡುವೆ ಆಗಾಗ ಜಿದ್ದಾಜಿದ್ದಿ ನಡೆಯುತ್ತಲೇ ಇರುತ್ತದೆ. ಈಗಲೂ ಅಷ್ಟೇ ಅದೇ ರೀತಿ ಒಳಜಗಳ ಶುರುವಾಗಿದೆ ಎಂಬುದು ಬಿಜೆಪಿ ಆರೋಪ. ಆದರೆ ಬಿಜೆಪಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಕೂಡ ರಿಯಾಕ್ಷನ್ ಕೊಟ್ಟಿದ್ದು, ಬಿಜೆಪಿ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ವಿಚಾರವನ್ನೇ ಹೈಲೈಟ್ ಮಾಡಿ ತಿರುಗೇಟು ನೀಡಿದೆ.

ವಿರೋಧ ಪಕ್ಷದ ನಾಯಕ ಆಯ್ಕೆಯಾಗಿಲ್ಲ ಯಾಕೆ?
'ಚುನಾವಣೆ ಮುಗಿದು ಸರ್ಕಾರ ರಚನೆಯಾಗಿ 2 ತಿಂಗಳಾದ್ರೂ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡಲಾಗದಿರುವುದಕ್ಕೆ ಕಾರಣಗಳೇನು ಕರ್ನಾಟಕ ಬಿಜೆಪಿ?' ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಕೆಲವೊಂದು ಪ್ರಶ್ನೆಗಳನ್ನೂ ಮುಂದಿಟ್ಟಿದೆ. 'ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿನ ತಿರಸ್ಕಾರವೇ? 66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ? ಆಂತರಿಕ ಕಚ್ಚಾಟದಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಲಾಗದ ತೊಳಲಾಟವೇ? ಆ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ, ಇನ್ನೂ ನಿಗದಿಪಡಿಸಿದ ಮೊತ್ತಕ್ಕೆ ಬಿಡ್ಡಿಂಗ್ ಆಗಿಲ್ಲವೇ? ನಮ್ಮ ಸರ್ಕಾರವನ್ನು ವಿರೋಧಿಸಲು ಸಕಾರಣಗಳು ಸಿಗುವುದಿಲ್ಲ ಎಂಬ ನಿರಾಸೆಯೇ?' ಎಂದು ಬಿಜೆಪಿ ನಾಯಕರ ಕಾಲೆಳೆದಿದೆ ಕಾಂಗ್ರೆಸ್.
ಸೋಲಿನ ಅಘಾತದಿಂದ ಇನ್ನೂ ಸುಧಾರಿಸಿಕೊಂಡಿಲ್ಲವೇ?
ಹಾಗೇ ವಿಪಕ್ಷ ನಾಯಕನ ಆಯ್ಕೆ ತಡವಾಗುತ್ತಿರುವ ಬಗ್ಗೆ ತನ್ನ ಪ್ರಶ್ನೆಗಳ ಸರಮಾಲೆಯನ್ನ ಮುಂದುವರಿಸಿರುವ ಕಾಂಗ್ರೆಸ್, 'ಸೋಲಿನ ಅಘಾತದಿಂದ ಇನ್ನೂ ಸುಧಾರಿಸಿಕೊಂಡಿಲ್ಲವೇ? ಶಾಸನ ಸಭೆಯ ಪಟ್ಟುಗಳು, ನೀತಿ ನಿಯಮಗಳು ತಿಳಿದಿರುವಂತ ನಾಯಕರ ಕೊರತೆಯೇ? ಸಂತೋಷ್ vs ಯಡಿಯೂರಪ್ಪನವರ ಆಂತರಿಕ ಯುದ್ಧದ ಪರಿಣಾಮವೇ? ಕಾರಣವೇನು ಎನ್ನುವುದನ್ನದರೂ ರಾಜ್ಯದ ಜನತೆಗೆ ತಿಳಿಸಲಿ!' ಎಂದು ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಸವಾಲು ಎಸೆದಿದೆ.
ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 2 ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದಿರುವುದಕ್ಕೆ ಕಾರಣಗಳೇನು @BJP4Karnataka?
— Karnataka Congress (@INCKarnataka) July 15, 2023
🔹ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿನ ತಿರಸ್ಕಾರವೇ?
🔹66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ?
🔹ಆಂತರಿಕ ಕಚ್ಚಾಟದಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಲಾಗದ ತೊಳಲಾಟವೇ?
🔹ಆ ಹುದ್ದೆಯನ್ನೂ…
'ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ'
ಅತ್ತ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಬಿಜೆಪಿ ಕೂಡ ತಿರುಗೇಟು ನೀಡುತ್ತಿದೆ. ಈ ಮಧ್ಯೆ ಸುರ್ಜೇವಾಲಾ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದ್ದು, 'ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ ಸಿದ್ದರಾಮಯ್ಯ, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ. ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ. 2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ.' ಎಂದು ಗಂಭೀರ ಆರೋಪ ಮಾಡಿದೆ. ಈ ಮೂಲಕ ಇಬ್ಬರ ನಡುವೆ ಟ್ವೀಟ್ ಫೈಟ್ ಬಲು ಜೋರಾಗಿದೆ.
ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ @siddaramaiah, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ.
— BJP Karnataka (@BJP4Karnataka) July 15, 2023
ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ.
2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ. pic.twitter.com/Wvf09am1e6
ತರಕಾರಿ, ಹಾಲು, ದಿನಸಿ ಪದಾರ್ಥಗಳ ಬೆಲೆ...
ಬೆಲೆ ಏರಿಕೆಯ ವಿಚಾರ ಪ್ರಸ್ತಾಪ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, 'ರಾಜ್ಯದ #ATMSarkaraದ ಆಡಳಿತದಲ್ಲಿ ಜನತೆ ಹೊಟ್ಟೆ ತುಂಬಾ ಒಂದೊಪ್ಪತ್ತಿನ ಊಟ ಮಾಡಲು ಎರೆಡೆರಡು ಬಾರಿ ಯೋಚಿಸುವಂತಾಗಿದೆ. ತರಕಾರಿ, ಹಾಲು, ದಿನಸಿ ಪದಾರ್ಥಗಳ ಬೆಲೆ @INCKarnataka ಸರ್ಕಾರದಡಿಯಲ್ಲಿ ಏರಿದೆ, ಇನ್ನೂ ಏರಲಿದೆ! ಇಷ್ಟು ಸಾಲದ್ದಕ್ಕೆ ಸರಕಾರದ ನಿರ್ಲಕ್ಷ್ಯದಿಂದಾಗಿ ಈಗ ಆ ಪಟ್ಟಿಗೆ ಮೀನುಗಳ ದರವೂ ಸೇರಿದ್ದು, ಮಾಂಸಹಾರಿಗಳ ಜೇಬು ಬರಿದಾಗುತ್ತಿದೆ.' ಎಂದು ಆರೋಪಿಸಿದೆ. ಒಟ್ನಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ಮಹಾ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ, ಮುಂದೆ ನಿಲ್ಲಬಹುದೇನೋ ಗೊತ್ತಿಲ್ಲ!












Click it and Unblock the Notifications