ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜನರಿಂದ ಬೈಕ್ ಜಾಥಾ
ಕೋಲಾರ, ಮೇ 13 : ಶಾಶ್ವತ ನೀರಾವರಿ ಯೋಜನೆ, ಪ್ರತ್ಯೇಕ ನೀರಾವರಿ ನಿಗಮ ಹಾಗು ಪ್ರಗತಿ ಪರಿಶೀಲನಾ ಸಮಿತಿ ಬೇಡಿಕೆಗಳ ಈಡೇರಿಕೆಗಾಗಿ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕರಲ್ಲಿ ನೀರಿಗಾಗಿ ಅಸಹಕಾರ ಚಳವಳಿಯ ಅರಿವು ಮೂಡಿಸಲು ಮೇ 16ರ ಶನಿವಾರ ಬೈಕ್ ರ್ಯಾಲಿ ಆಯೋಜಿಸಲಾಗಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ಯುವಶಕ್ತಿ ಆಯೋಜಿಸುತ್ತಿರುವ 'ಬೈಕ್ ರ್ಯಾಲಿ' ಗೆ ಎಲ್ಲಾ ನೀರಾವರಿ ಹೋರಾಟಗಾರರು, ಸಂಘಟನೆಗಳು, ರೈತ ಬಾಂಧವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ನಾಗರಿಕರಲ್ಲಿ ವಿನಂತಿಸಿದ್ದಾರೆ.
ಸಂಸದರಿಗೆ ಎಚ್ಚರಿಕೆ : ನೀರು ನೀಡಲು ವಿಫಲರಾದ ಜಿಲ್ಲೆಯ ರಾಜಕಾರಣಿಗಳ ವಿರುದ್ಧ ಪ್ರತಿರೋಧದ ಬಿಸಿ ಏರುತ್ತಿದೆ. ಶಾಶ್ವತ ನೀರಾವರಿ ತರುವುದನ್ನು ಮರೆತರೆ ನಿಮ್ಮನ್ನು ನಿಮ್ಮ ಪಕ್ಷವನ್ನು ಜನರು ಶಾಶ್ವತವಾಗಿ ಮರೆಯುತ್ತಾರೆ ಎಂದು ಕೋಲಾರದ ಸಂಸದ ಮುನಿಯಪ್ಪ ಮತ್ತು ಚಿಕ್ಕಬಳ್ಳಾಪುರದ ಸಂಸದ ವೀರಪ್ಪ ಮೊಯ್ಲಿ ಅವರಿಗೆ ಜಿಲ್ಲೆಯ ಜನರು ಎಚ್ಚರಿಕೆ ನೀಡಿದ್ದಾರೆ. [ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ]

ಗ್ರಾಮ ಪಂಚಾಯತ್ ಚುನಾವಣೆಯನ್ನು ಈ ಕಾರಣಕ್ಕಾಗಿ ಬಹಿಷ್ಕರಿಸಬೇಕೆಂದು ಜಿಲ್ಲೆಯ ಜನರು ಒಕ್ಕೊರಲಿನ ತೀರ್ಮಾನ ತೆಗೆದುಕೊಂಡಿದ್ದಾರೆ. ಬೈಕ್ ರ್ಯಾಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮತ್ತು ಕೋಲಾರದಲ್ಲಿ ಶನಿವಾರ ನಡೆಯಲಿದೆ. ಇದಕ್ಕೆ ಕಾಂಗ್ರೆಸ್ ಸರಕಾರವಾಗಲಿ, ಸಂಸದರಾಗಲಿ ಸ್ಪಂದಿಸುವರೆ? [ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ, ಹಳ್ಳಿಗರ ಪ್ರತಿಜ್ಞೆ]
ದಿನಾಂಕ : ಶನಿವಾರ, 16/05/2015
ಬೈಕ್ ರ್ಯಾಲಿ ಮಾರ್ಗ : ಬೆಳಿಗ್ಗೆ 9 ಗಂಟೆಗೆ ಒಕ್ಕಲಿಗರ ಕಲ್ಯಾಣ ಮಂಟಪ, ಚಿಕ್ಕಬಳ್ಳಾಪುರ, ಬೆಳಿಗ್ಗೆ 11 ಗಂಟೆಗೆ ಶಿಡ್ಲಘಟ್ಟ, 12 ಗಂಟೆಗೆ ಚಿಂತಾಮಣಿ, 1 ಗಂಟೆಗೆ ಶ್ರೀನಿವಾಸಪುರ ಮತ್ತು ಅಪರಾಹ್ನ 2 ಗಂಟೆಗೆ ಕೋಲಾರದಲ್ಲಿ ಮುಕ್ತಾಯವಾಗಲಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9035744933, 9740422227, 9591463611












Click it and Unblock the Notifications