ಬಿಹಾರ ಫಲಿತಾಂಶ ಪ್ರಕಟ : ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?
ಬೆಂಗಳೂರು, ನವೆಂಬರ್ 09 : ಲೋಕಸಭೆ ಚುನಾವಣೆ ಫಲಿತಾಂಶದಷ್ಟು ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. ಜೆಡಿಯು ಮಹಾಮೈತ್ರಿಕೂಟಕ್ಕೆ ಜನರು ಸ್ಪಷ್ಟಬಹುಮತ ನೀಡಿದ್ದು, ದೀಪಾವಳಿ ಕೊಡುಗೆ ನೀಡಿದ್ದಾರೆ. ಬಿಜೆಪಿ ಮೈತ್ರಿಕೂಟ 58 ಸ್ಥಾನಗಳನ್ನು ಮಾತ್ರ ಪಡೆದಿದೆ.
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ದೇಶದ ತುಂಬಾ ಚರ್ಚೆ ನಡೆಯುತ್ತಿದೆ. ಬಿಹಾರದ ಸೋಲು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಸೋಲು ಎಂದು ವಿರೋಧ ಪಕ್ಷಗಳು ಬಣ್ಣಿಸುತ್ತಿವೆ. ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. [ಬಿಹಾರ ಫಲಿತಾಂಶ : ಯಾರು, ಏನು ಹೇಳಿದರು?]
ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಸ್ಪಷ್ಟಬಹುಮತ ನೀಡಿದ ಬಿಹಾರದ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೊಮ್ಮೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. [ನಿತೀಶ್ ಹ್ಯಾಟ್ರಿಕ್, ನಡೆಯಲಿಲ್ಲ ಮೋದಿ ಟ್ರಿಕ್]
ಕನ್ನಡದ ದಿನ ಪತ್ರಿಕೆಗಳಲ್ಲಿಯೂ ಬಿಹಾರ ಚುನಾವಣಾ ಫಲಿತಾಂಶದ ಸುದ್ದಿಯನ್ನು ವಿವರವಾಗಿ ಪ್ರಕಟಿಸಲಾಗಿದೆ. ಅಂಕಿ-ಸಂಖ್ಯೆಗಳ ಲೆಕ್ಕಾಚಾರ, ನಾಯಕರ ಹೇಳಿಕೆ, ವಿಶ್ಲೇಷಣೆ ಹೀಗೆ ವಿವಿಧ ಪತ್ರಿಕೆಗಳಲ್ಲಿ ವಿವಿಧ ಅಂಶಗಳು ಗಮನ ಸೆಳೆಯುತ್ತಿವೆ. ಎಲ್ಲಾ ಪತ್ರಿಕೆಗಳಲ್ಲಿ ಗಮನ ಸೆಳೆಯುವುದು ಹೆಡ್ಲೈನ್. ಬಿಹಾರ ಚುನಾವಣೆಯ ಫಲಿತಾಂಶದ ಸುದ್ದಿಯ ಹೆಡ್ ಲೈನ್ ವಿವಿಧ ಪತ್ರಿಕೆಗಳಲ್ಲಿ ಹೇಗಿದೆ ನೋಡಿ ಚಿತ್ರಗಳಲ್ಲಿ......

ಪ್ರಜಾವಾಣಿ ಶೀರ್ಷಿಕೆ ಹೇಗಿದೆ ನೋಡಿ?
ಬಿಹಾರ ಚುನಾವಣೆಯಲ್ಲಿ ಲಾಲೂ ಪ್ರಸಾದ್ ನೇತೃತ್ವದ ಆರ್ಜೆಡಿ 80 ಸ್ಥಾನಗಳನ್ನು ಗಳಿಸುವ ಮೂಲಕ ಜೆಡಿಯು ಮೈತ್ರಿಕೂಟಕ್ಕೆ ಆನೆ ಬಲ ತುಂಬಿದೆ. ಪ್ರಜಾವಾಣಿ ಇದನ್ನು ಹೆಡ್ಲೈನ್ನಲ್ಲಿ ನೀಡಿದ್ದು 'ನಿತೀಶ್ ಹ್ಯಾಟ್ರಿಕ್ಗೆ ಲಾಲು ಆನೆಬಲ' ಎಂದು ಹೇಳಿದೆ.

ಮುಂದಿದೆ ಸರ್ಕಾರ ರಚನೆ ಸರ್ಕಸ್
ಮೈತ್ರಿಕೂಟ ಸ್ಥಾಪನೆ ಮಾಡಿಕೊಂಡು ಚುನಾವಣೆ ಎದುರಿಸುವುದಕ್ಕಿಂತ ಸರ್ಕಾರ ರಚನೆ ಮಾಡುವುದು ಸವಾಲಿನ ಕೆಲಸ. ವಿಜಯವಾಣಿ ಇದನ್ನು ಶೀರ್ಷಿಕೆಯಲ್ಲಿಯೇ ಸೂಕ್ಷ್ಮವಾಗಿ ಹೇಳಿದೆ. 'ಮಹಾಮೈತ್ರಿ ಸಕ್ಸಸ್ ಮುಂದಿದೆ ಸರ್ಕಸ್' ಎಂದು ಪತ್ರಿಕೆ ಶೀರ್ಷಿಕೆ ನೀಡಿದೆ.

ಬಿಹಾರದಲ್ಲಿ ಮತ್ತೆ ನಿತೀಶ್ ಆಡಳಿತ
ಬಿಹಾರ ಚುನಾವಣೆಯಲ್ಲಿ ಜೆಡಿಯು ಮೈತ್ರಿಕೂಟದ ಗೆಲುವಿಗೆ ನಿತೀಶ್ ಕುಮಾರ್ ಅವರು ಕಾರಣ ಎಂದು ವಿಜಯ ಕರ್ನಾಟಕ ಹೆಡ್ಲೈನ್ನಲ್ಲಿ ಹೇಳಿದ್ದು, 'ನಿತೀಶ್ ಶೈನಿಂಗ್' ಎಂದು ಶೀರ್ಷಿಕೆ ನೀಡಿದೆ.

ಬಿಹಾರ ಚುನಾವಣೆ ಮೋದಿ ಸೋಲು
ನಿತೀಶ್ ಬಿಹಾರ್, ಮೋದಿ ಬಾಹರ್! ಎಂದು ಉದಯವಾಣಿ ಶೀರ್ಷಿಕೆ ನೀಡಿದ್ದು, ಬಿಹಾರದಲ್ಲಿನ ಬಿಜೆಪಿ ಮೈತ್ರಿಕೂಟದ ಸೋಲು ಪ್ರಧಾನಿ ಮೋದಿ ಅವರ ಸೋಲು ಎಂದು ಸೂಕ್ಷ್ಮವಾಗಿ ಹೇಳಿದೆ.

ದೇಶದ ಮುಂದೆ ಬಿಹಾರ ಮಾದರಿ
ಕನ್ನಡ ಪ್ರಭ 'ದೇಶದ ಮುಂದೆ ಬಿಹಾರ ಮಾದರಿ' ಎಂದು ಹೆಡ್ಲೈನ್ ಕೊಟ್ಟಿದ್ದು, ಬಿಹಾರ ಚುನಾವಣೆಯ ಸುದ್ದಿಗಳನ್ನು ವಿವರವಾಗಿ ನೀಡಿದೆ.

ಮೈತ್ರಿಕೂಟಕ್ಕೆ ಜಯ : ಹೊಸದಿಗಂತ ಶೀರ್ಷಿಕೆ
ಬಿಹಾರದಲ್ಲಿ ಜೆಡಿಯು ಮಹಾಮೈತ್ರಿಕೂಟ ಜಯಸಾಧಿಸಿರುವುದನ್ನು ಹೊಸದಿಗಂತ ಶೀರ್ಷಿಕೆಯಲ್ಲಿ ನೀಡಿದೆ. 'ಮಹಾಮೈತ್ರಿಕೂಟ ಅಧಿಕಾರಕ್ಕೆ' ಎಂದು ಪತ್ರಿಕೆ ಶೀರ್ಷಿಕೆ ನೀಡಿದೆ.

ಬಿಹಾರದಲ್ಲಿ ಗೆಲುವಿನ ದೀಪಾವಳಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಹಾರ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ವಾರ್ತಾ ಭಾರತಿ ಅದನ್ನು ಉಪಯೋಗಿಸಿಕೊಂಡು 'ಮಹಾಮೈತ್ರಿಗೆ ದೀಪಾವಳಿ' ಎಂಬ ಶೀರ್ಷಿಕೆ ನೀಡಿದೆ.












Click it and Unblock the Notifications