ಮುಸ್ಲಿಂ ಹೆಣ್ಮಕ್ಳಿಗೆ ಶಾದಿ ಭಾಗ್ಯ: ಎಚ್ಡಿಕೆ ಏನನ್ತಾರೆ?
ಬೆಂಗಳೂರು, ನ.6: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಹೆಣ್ಣುಮಕ್ಕಳಿಗೆ ಸದ್ಯದಲ್ಲೇ ಕಲ್ಪಿಸಲಿರುವ Bidayee ಶಾದಿ ಭಾಗ್ಯ ಯೋಜನೆಗೆ ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗಿವೆ.
ಇದೇ ವೇಳೆ, ವಿರೋಧ ಪಕ್ಷದ ನಾಯಕ, ಜಾತ್ಯತೀತ ಜನತಾದಳದ ಎಚ್ ಡಿ ಕುಮಾರಸ್ವಾಮಿ ಅವರು 'ಶಾದಿಭಾಗ್ಯ' ಯೋಜನೆ ಬಗ್ಗೆ ಮಾತನಾಡಿದ್ದು, 'ಬಿಜೆಪಿ ಸರಕಾರದ ರೀತಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗ್ಗದ ಪ್ರಚಾರಕ್ಕಾಗಿ ಅಲ್ಪಸಂಖ್ಯಾತರಿಗೆ 'ಶಾದಿಭಾಗ್ಯ' ಯೋಜನೆ ಜಾರಿಗೆ ತಂದಿದ್ದಾರೆ. ಇದು ಭ್ರಷ್ಟ ಅಧಿಕಾರಿಗಳಿಗೆ 'ಹುಲ್ಲುಗಾವಲು' ಆಗಿ ಪರಿಣಮಿಸಲಿದೆ ಅಂಕಿ-ಸಂಖ್ಯೆ ಸಮೇತ ಎಂದು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ವರ್ಷಕ್ಕೆ 40 ಸಾವಿರ ಮುಸ್ಲಿಂ ಹೆಣ್ಣು ಮಕ್ಕಳು ಮದುವೆಯಾಗುತ್ತಾರೆ. ಆದರೆ, 'ಶಾದಿಭಾಗ್ಯ' ಯೋಜನೆ ಕೇವಲ 1,000 ಮಂದಿಗಷ್ಟೇ ಸರಕಾರದ ಸೌಲಭ್ಯ ದೊರೆಯಲಿದೆ. ದೊಡ್ಡ ಸಂಖ್ಯೆಯಲ್ಲಿರುವ ಜನರಲ್ಲಿ ಫಲಾನುಭವಿಗಳನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ.
ಶಾದಿಭಾಗ್ಯ ಯೋಜನೆ ಅಧಿಕಾರಿಗಳು ಹಣ ಮಾಡುವ ದಂಧೆಯಾಗಲಿದೆ. ಹೀಗಾಗಿ ಅಗ್ಗದ ಪ್ರಚಾರಕ್ಕಾಗಿ ಯೋಜನೆ ರೂಪಿಸುವುದನ್ನು ಸರಕಾರ ಕೈಬಿಟ್ಟು ಎಲ್ಲ ವರ್ಗದ ಕಲ್ಯಾಣಕ್ಕೆ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಯೋಜನವಿಲ್ಲದ ಬಿಎಸ್ವೈ ಧರಣಿ: 'ಶಾದಿ ಭಾಗ್ಯ; ಯೋಜನೆ ಎಲ್ಲ ವರ್ಗಗಳಿಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಮಾಜಿ ಸಿಎಂ ಯಡಿಯೂರಪ್ಪ ಕೈಗೊಂಡಿರುವ ಧರಣಿ ಸತ್ಯಾಗ್ರಹದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
'ಶಾದಿ ಭಾಗ್ಯ'ಕ್ಕಿಂತಲೂ ಗಂಭೀರವಾದ ಹಲವು ಸಮಸ್ಯೆಗಳು ರಾಜ್ಯದಲ್ಲಿದ್ದು, ಬಿಎಸ್ ವೈ ಆ ಸಮಸ್ಯೆಗಳತ್ತ ತಮ್ಮ ಗಮನಹರಿಸಬೇಕೆಂದು ವ್ಯಂಗ್ಯವಾಗಿ ಸಲಹೆ ಮಾಡಿದ ಎಚ್ ಡಿಕೆ, ಈ ಯೋಜನೆಯ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಹೀಗಿರುವಾಗ ಧರಣಿ ನಡೆಸುವ ಆತುರದ ತೀರ್ಮಾನ ಕೈಗೊಂಡಿರುವುದು ಯಾವ ಪುರುಷಾರ್ಥಕ್ಕಾಗಿ?' ಎಂದು ಆಕ್ಷೇಪಿಸಿದರು.
ಇನ್ನು, ಹಾಸ್ಟೆಲ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಸಮಾಜ ಕಲ್ಯಾಣ ಇಲಾಖೆ ಯೋಜನೆಗೆ ಸುಮಾರು 3 ಲಕ್ಷ ಅರ್ಜಿಗಳು ಬಂದಿದ್ದು, 20 ಸಾವಿರ ಮಂದಿ ವಿದ್ಯಾರ್ಥಿಗಳಿಗಷ್ಟೇ ಸಹಾಯಧನ ನೀಡಿದರೆ ಉಳಿದ ವಿದ್ಯಾರ್ಥಿಗಳೇನು ಪಾಪ ಮಾಡಿದ್ದಾರೆ. ಅವರೆಲ್ಲರಿಗೂ ಹಣ ಎಲ್ಲಿಂದ ಬರಬೇಕು ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.












Click it and Unblock the Notifications