ಬಂಧನ ಭೀತಿಯಲ್ಲಿ ಹೈಕೋರ್ಟ್ ಮೊರೆ ಹೋದ ಭವಾನಿ ರೇವಣ್ಣ
ಬೆಂಗಳೂರು, ಜೂನ್ 01: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಬಂಧನ ಭೀತಿಯಲ್ಲಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕೆ.ಆರ್. ನಗರ ಠಾಣೆಯಲ್ಲಿ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಹಸ್ತಾಂತರ ಮಾಡಲಾಗಿದೆ.

ಈ ಪ್ರಕರಣದಲ್ಲಿ ಎಸ್ಐಟಿ ಭವಾನಿ ರೇವಣ್ಣ ವಿಚಾರಣೆ ನಡೆಸಬೇಕಿದೆ. ಬಂಧನ ಭೀತಿಯಲ್ಲಿರುವ ಅವರು ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಎಸ್ಐಟಿಯಿಂದ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಜಾಮೀನು ಅರ್ಜಿ ತಿರಸ್ಕಾರ: ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಲಾಗಿದೆ ಎಂಬುದು ದೂರು. ಈ ದೂರು ನೀಡಿದ್ದ ಮಹಿಳೆ ಅಪಹರಣವಾಗಿತ್ತು. ಮಹಿಳೆಯ ಪುತ್ರ ಕೆ.ಆರ್. ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ (ಎ1), ಎಚ್. ಡಿ. ರೇವಣ್ಣ (ಎ2) ಮತ್ತು ಭವಾನಿ ರೇವಣ್ಣ ಸಹ ಆರೋಪಿಗಳು. ಈ ಪ್ರಕರಣದಲ್ಲಿ ಭವಾನಿ ರೇವಣ್ಣ ವಿಚಾರಣೆ ನಡೆಸಲು ಎಸ್ಐಟಿ ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಆದರೆ ಪೊಲೀಸರ ಕೈಗೆ ಭವಾನಿ ರೇವಣ್ಣ ಸಿಕ್ಕಿಲ್ಲ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಕೋರ್ಟ್ ಅರ್ಜಿ ತಿರಸ್ಕಾರ ಮಾಡಿದೆ. ಶನಿವಾರ ಹೊಳೆನರಸೀಪುರ ಮನೆಗೆ ಭವಾನಿ ರೇವಣ್ಣ ವಿಚಾರಣೆಗೆ ಎಸ್ಐಟಿ ಪೊಲೀಸರು ತೆರಳಿದ್ದಾರೆ. ಆದರೆ ಮಧ್ಯಾಹ್ನದ ತನಕ ಭವಾನಿ ರೇವಣ್ಣ ಪತ್ತೆಯಾಗಿಲ್ಲ.
ಈ ಪ್ರಕರಣದಲ್ಲಿ ಎಸ್ಐಟಿ ಈಗಾಗಲೇ ಮಾಜಿ ಸಚಿವ ಎಚ್. ಡಿ. ರೇವಣ್ಣ ಬಂಧಿಸಿ, ವಿಚಾರಣೆ ನಡೆಸಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದಲ್ಲಿ ಎಚ್. ಡಿ. ರೇವಣ್ಣಗೆ ಜಾಮೀನು ನೀಡಿದೆ.
ವಿದೇಶದಿಂದ ಆಗಮಿಸಿ ಎಸ್ಐಟಿಯಿಂದ ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣರನ್ನು ಸಹ ಎಸ್ಐಟಿ ಅಧಿಕಾರಿಗಳು ಈ ಪ್ರಕರಣದಲ್ಲಿ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಜೂನ್ 6ರ ತನಕ ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಭವಾನಿ ರೇವಣ್ಣ ಶನಿವಾರ ಸಂಜೆಯ ತನಕ ವಿಚಾರಣೆಗೆ ಬಾರದಿದ್ದರೆ ಎಸ್ಐಟಿ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಜಾರಿಗೊಳಿಸುವ ನಿರೀಕ್ಷೆ ಇದೆ. 15 ದಿನಗಳಿಂದ ಭವಾನಿ ರೇವಣ್ಣ ಎಲ್ಲೂ ಕಾಣಿಸಿಕೊಂಡಿಲ್ಲ. ನಿರೀಕ್ಷಣಾ ಜಾಮೀನು ರದ್ದುಗೊಂಡರೂ ಸಹ ಶುಕ್ರವಾರ ಅವರು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳಲಿಲ್ಲ.
ಶನಿವಾರ ಭವಾನಿ ರೇವಣ್ಣ ವಿಚಾರಣೆಗೆ ಸಹಕಾರ ನೀಡದ ಹಿನ್ನಲೆಯಲ್ಲಿ ಎಸ್ಐಟಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ. ಈಗಾಗಲೇ ಅವರ ನಿರೀಕ್ಷಣಾ ಜಾಮೀನು ಅರ್ಜಿ ಕೋರ್ಟ್ನಲ್ಲಿ ತಿರಸ್ಕಾರವಾಗಿದೆ.
ಅಪಹರಣಗೊಂಡ ಮಹಿಳೆಯ ಮನವೊಲಿಸುವ ಬಗ್ಗೆ ಭವಾನಿ ರೇವಣ್ಣ, ರೇವಣ್ಣ ಆಪ್ತ ಸಹಾಯಕನ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಕರೆಗಳ ರೆಕಾರ್ಡ್ ಎಸ್ಐಟಿ ಬಳಿ ಇದೆ. ಇದೇ ಪ್ರಕರಣದಲ್ಲಿ ಎಸ್ಐಟಿ ರೇವಣ್ಣ ಆಪ್ತ ಸಹಾಯಕನನ್ನು ಬಂಧಿಸಿ ವಿಚಾರಣೆ ನಡೆಸಿದೆ, ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.












Click it and Unblock the Notifications