ಆನಂದ್ ನ್ಯಾಮಗೌಡ ಹೇಳಿಕೆ ಖಂಡಿಸಿದ ಬ್ರಾಹ್ಮಣ ಮಹಾಸಭಾ
ಬೆಂಗಳೂರು, ನವೆಂಬರ್ 15 : ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಹೇಳಿಕೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ. ಈಗಾಗಲೇ ಶಾಸಕರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಅಸಗೋಡು ಜಯಸಿಂಹ ಅವರು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಬ್ರಾಹ್ಮಣ ಸಮಾಜದ ಬಗ್ಗೆ ಹಗರುವಾಗಿ ಮತ್ತು ಪೂರ್ವಗ್ರಹಪೀಡಿತರಾಗಿ ಮಾತನಾಡಿರುವುದನ್ನು ಖಂಡಿಸಿದ್ದಾರೆ.
ಶಾಸಕ ಆನಂದ್ ನ್ಯಾಮಗೌಡ ಅವರು ಬಹಿರಂಗವಾಗಿ ಬ್ರಾಹ್ಮಣ ಸಮಾಜದ ಕ್ಷಮೆಯನ್ನು ಕೋರಬೇಕು ಎಂದು ಅಸಗೋಡು ಜಯಸಿಂಹ ಅವರು ಆಗ್ರಹಿಸಿದ್ದಾರೆ. ಆನಂದ್ ನ್ಯಾಮಗೌಡ ಅವರು ಈಗಾಗಲೇ ಮಾಧ್ಯಗಳಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
'ಬ್ರಾಹ್ಮಣ ಸಮಾಜದ ಬಗ್ಗೆ ಶಾಸಕರು ಆಡಿರುವ ಮಾತುಗಳು ಅವರ ಅರಿವಿನ ಮಟ್ಟವನ್ನು ಸೂಚಿಸುತ್ತವೆ. ಸಮುದಾಯ ಎಂದೂ ಯಾರನ್ನೂ ದ್ವೇಷ ಮಾಡುವುದಿಲ್ಲ' ಎಂದು ಅಸಗೋಡು ಜಯಸಿಂಹ ಅವರು ಹೇಳಿದ್ದಾರೆ.

ಅಸಗೋಡು ಜಯಸಿಂಹ ಹೇಳುವುದೇನು?
ಅಸಗೋಡು ಜಯಸಿಂಹ ಅವರು, 'ಬ್ರಾಹ್ಮಣ ಸಮಾಜವು ಎಂದೂ ಯಾರನ್ನೂ ದ್ವೇಷಿಸುವುದಿಲ್ಲ. ಬದಲಿಗೆ ಸಮಾಜವು ಅಹಿಂಸೆ, ವಿದ್ವತ್ತು ಮತ್ತು ಸರ್ವಜನರ ಹಿತಕ್ಕೆ ಎಂದೆಂದಿಗೂ ಹೆಸರಾಗಿದೆ. ಬ್ರಾಹ್ಮಣರು ಔದಾರ್ಯ ಮತ್ತು ಶ್ರೀಮಂತ ಮೌಲ್ಯಗಳಿಗೆ ಇನ್ನೊಂದು ಹೆಸರಾಗಿದ್ದು, ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತ್ರಿಕರಣ ಶುದ್ಧಿಯಿಂದ ತೊಡಗಿಸಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.

ದ್ವೇಷ ಪ್ರಚೋದಿಸುವ ಹೇಳಿಕೆ
'ಯಾವುದೇ ಒಬ್ಬ ಜನಪ್ರತಿನಿಧಿಯು ಕೇವಲ ನಿರ್ದಿಷ್ಟ ಜನಾಂಗದ ಮತಗಳಿಂದ ಗೆಲ್ಲುವುದು ಸಾಧ್ಯವಿಲ್ಲ. ಆನಂದ ನ್ಯಾಮಗೌಡರು ಆಡಿರುವ ಮಾತುಗಳು ಜನಾಂಗಗಳ ನಡುವೆ ದ್ವೇಷವನ್ನು ಪ್ರಚೋದಿಸುವಂತಿದ್ದು, ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿಯಾಗಿವೆ. ಜತೆಗೆ, ಬ್ರಾಹ್ಮಣ ಸಮಾಜದ ಬಗ್ಗೆ ಅವರು ಆಡಿರುವ ಮಾತುಗಳು ಅವರ ಅರಿವಿನ ಮಟ್ಟವನ್ನು ಸೂಚಿಸುತ್ತವೆ' ಎಂದು ಅಸಗೋಡು ಜಯಸಿಂಹ ಟೀಕಿಸಿದ್ದಾರೆ.

ಆನಂದ್ ನ್ಯಾಮಗೌಡ ಹೇಳಿದ್ದೇನು?
ಜಮಖಂಡಿಯಲ್ಲಿ ಬುಧವಾರ ಅಲ್ಪ ಸಂಖ್ಯಾತ ಸಮುದಾಯದ ವತಿಯಿಂದ ನೂತನ ಶಾಸಕ ಆನಂದ್ ನ್ಯಾಮಗೌಡ ಅವರಿಗೆ ಅಭಿನಂದನಾ ಸಮಾರಂಭ ಆಯೋಜನೆ ಮಾಡಲಾಗಿತ್ತು. ಸಮಾರಂಭದಲ್ಲಿ ಮಾತನಾಡಿದ ಶಾಸಕರ, '1990ರಲ್ಲಿ ನಮ್ಮ ತಂದೆ ಸಿದ್ದು ನ್ಯಾಮಗೌಡ ಅವರು ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶಕ್ಕೆ ಚಿರಪರಿಚಿತರಾಗಿದ್ದರು. ನಾನೂ ಈಗ ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿದ್ದೇನೆ' ಎಂದು ಹೇಳಿದ್ದರು.

ಕ್ಷಮೆ ಕೇಳಿದ್ದ ಶಾಸಕರು
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬಳಿಕ ಶಾಸಕ ಆನಂದ್ ನ್ಯಾಮಗೌಡ ಅವರು ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ್ದರು. 'ಬ್ರಾಹ್ಮಣ ಸಮುದಾಯವನ್ನು ಸೋಲಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಚುನಾವಣೆಯಲ್ಲಿ ಗೆಲ್ಲುವುದು, ನಮ್ಮ ತಂದೆಯ ಕೆಲಸವನ್ನು ಮುಂದುವರೆಸುವುದು ನನಗೆ ಮುಖ್ಯವಾಗಿತ್ತು. ನನ್ನ ಮಾತಿನಿಂದ ಸಮುದಾಯಕ್ಕೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ' ಎಂದು ಹೇಳಿದ್ದರು.












Click it and Unblock the Notifications