ಭಾರತ್ ಬಂದ್: ಯಾವ ಜಿಲ್ಲೆಗಳಲ್ಲಿ ಹೇಗೆ ನಡೀತಿದೆ ಬಂದ್
ಬೆಂಗಳೂರು, ಜನವರಿ 08: ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಹಲವು ಸಂಘಟನೆಗಳು ಇಂದು ಮತ್ತು ನಾಳೆ ನೀಡಲಾಗಿದ್ದ ಭಾರತ್ ಬಂದ್ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ ಆದರೆ ಜನರಿಲ್ಲದೆ ಅವು ಬಿಕೋ ಎನ್ನುತ್ತಿವೆ. ಸದಾ ಗಿಜಿಗುಡುತ್ತಿದ್ದ ಎಪಿಎಂಸಿ ಖಾಲಿ ಹೊಡೆಯುತ್ತಿದೆ ಆದರೆ ಅಲ್ಲಿನ ಅಂಗಡಿಗಳು ತೆರೆದಿವೆ.
ಚಿತ್ರಮಂದಿರಗಳು, ಮಾಲ್ಗಳು ತೆರೆದಿವೆ. ಓಲಾ-ಊಬರ್ ಟ್ಯಾಕ್ಸಿಗಳು ರಸ್ತೆಗಳಿದಿವೆ. ಕೆಲವು ಆಟೋ ಸಂಘಟನೆಗಳು ಸಹ ಬಂದ್ಗೆ ವಿರೋಧ ವ್ಯಕ್ತಪಡಿಸಿ ರಸ್ತೆಗಿಳಿದಿದ್ದಾರೆ. ಕಾರ್ಮಿಕ ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತ ಸೇರಿ ಕೆಲವು ಕಡೆ ಪ್ರತಿಭಟನೆ ಮಾಡಿದ್ದಾರೆ.
ರಾಯಚೂರಿನಲ್ಲಿ ಕಾರ್ಮಿಕ ಸಂಘಟನೆಗಳು ವೃಹತ್ ಬೈಕ್ rally ಮಾಡಿದ್ದಾರೆ. ಅಲ್ಲಿಯೂ ಸಹ ಸಂಚಾರ ವ್ಯವಸ್ಥೆ ಅಸ್ಥವ್ಯಸ್ತವಾಗಿದೆ. ಆದರೆ ಅಂಗಡಿಗಳು ತೆರಿದಿವೆ. ಪ್ರತಿಭಟನಾಕಾರರು ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸಿದ್ದಾರೆ, ಆದರೆ ಕೆಲವೆಡೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ಹಾಸನ, ಮಡಿಕೇರಿ, ತುಮಕೂರು ಸಾಮಾನ್ಯ
ಬೆಳಗಾವಿ, ಹಾಸನ, ಮಡಿಕೇರಿ, ತುಮಕೂರು ಇನ್ನೂ ಹಲವು ಜಿಲ್ಲೆಗಳಲ್ಲಿ ಜನಜೀವನ ಮಾಮೂಲಿನಂತೆಯೇ ಇದೆ. ಆದರೆ ಕೆಎಸ್ಆರ್ಟಿಸಿ ಇಲ್ಲದಿರುವ ಬಿಸಿ ಮಾತ್ರ ಎಲ್ಲ ಜಿಲ್ಲೆಗಳಿಗೂ ತಟ್ಟಿದೆ. ಸಂದರ್ಭದ ಲಾಭ ಪಡೆಯುತ್ತಿರುವ ಖಾಸಗಿ ಬಸ್ಗಳು ಮತ್ತು ಕ್ಯಾಬ್ ಆಟೋಗಳವರು ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಘಟನೆ ವರದಿ ಆಗಿವೆ.

ಹುಬ್ಬಳ್ಳಿಯಲ್ಲಿ ಪ್ರತಿಕೃತಿ ದಹನ
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಿತಿನ್ ಗಡ್ಕರಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಸಂಘ ಪ್ರತಿಭಟನೆಗೆ ಸಾತ್ ನೀಡಿದೆ. ಕಾರ್ಮಿಕ ಸಂಘಟನೆಗಳು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕೆಲವು ಖಾಸಗಿ ವಾಹನಗಳನ್ನು ಬಲವಂತದಿಂದ ತಡೆಯುವ ಯತ್ನವೂ ಸಹ ವರದಿ ಆಗಿದೆ.

ಮೈಸೂರಿನಲ್ಲಿ ಜನ ಜೀವನ ಸಾಮಾನ್ಯ
ಮೈಸೂರಿನಲ್ಲಿ ಬಂದ್ ಬಿಸಿ ಸಾಮಾನ್ಯ ನಾಗರೀಕರಿಗೆ ತಟ್ಟಿಲ್ಲ. ಬೆಳಗ್ಗೆಯಿಂದ ಮೈಸೂರಿನ ಲೋಕಲ್ ಬಸ್ ಸಂಚಾರ ಪ್ರಾರಂಭವಾಗಿದ್ದು, ಜನರ ಬೇಡಿಕೆಯಂತೆ ಬಸ್ ಸಂಚಾರ ಸೇವೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ಜಿಲ್ಲಾಡಳಿತದಿಂದ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರೂ ಮೈಸೂರಿನ ಬಿಜಿಎಸ್ ವಿದ್ಯಾಪೀಠ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ನಡೆಸುತ್ತಿತ್ತು. ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಪರೀಕ್ಷೆ ನಡೆಸಿದ ಸಂಸ್ಥೆ ನಿಯಮ ವಿರೋಧಿಸಿ ಇಬ್ಬರು ಪೊಲೀಸರು ಪರೀಕ್ಷೆ ಸ್ಥಗಿತಗೊಳಿಸಿದರು.

ಮಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ಕಾರ್ಮಿಕ ಸಂಘಟನೆಗಳು ಇಂದು ಮತ್ತು ನಾಳೆ ಕರೆ ನೀಡಿರುವ ಅಖಿಲ ಭಾರತ ಬಂದ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯನ್ನು ಸ್ವಲ್ಪ ಮಟ್ಟಿಗೆ ಜನ ಜೀವನವನ್ನು ಬಾಧಿಸಿದೆ.












Click it and Unblock the Notifications