ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ಮೋದಿ ಚಾಲನೆ: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು ನವೆಂಬರ್ 10: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ 'ಕರ್ನಾಟಕ- ಭಾರತ್ ಗೌರವ್' ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಚಾಲನೆ ನೀಡಲಿದ್ದಾರೆ ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ರೈಲು ಪ್ಯಾಕೇಜ್ ಟೂರ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಚಾಲನೆ ದೊರೆಯುತ್ತಿರುವುದು ಬಹಳ ಸಂತಸದ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಪುನರ್ ನಿರ್ಮಾಣಗೊಳಿಸಲಾಗಿರುವ ಭವ್ಯ ಕಾಶಿ - ದಿವ್ಯ ಕಾಶಿಯನ್ನು ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ಕಣ್ತುಂಬಿಕೊಳ್ಳಲಿ ಎನ್ನುವ ಪ್ರಮುಖ ಉದ್ದೇಶದಿಂದ ಈ ರೈಲು ಪ್ರವಾಸವನ್ನು ಆಯೋಜಿಸಲಾಗಿದೆ. ನನ್ನ ಆಶಯಕ್ಕೆ ಬೆನ್ನೆಲುಬಾಗಿ ನಿಂತ ಮುಖ್ಯಮಂತ್ರಿಗಳಿಗೆ ವಿಶೇಷ ಅಭಿನಂದನೆಗಳನ್ನ ಸಲ್ಲಿಸಿದ್ದೇನೆ ಎಂದಿದ್ದಾರೆ.
'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಬುಕ್ಕಿಂಗ್ ಆರಂಭ, ದರ
ಕಾಶಿ ದರ್ಶನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ: ಎರಡನೇ ಟ್ರಿಪ್ ಕೂಡಾ ಸೋಲ್ಡ್ ಔಟ್
ನವೆಂಬರ್ 23, 2022 ರಂದು ಎರಡನೇ ಟ್ರಿಪ್ ಕರ್ನಾಟಕ - ಭಾರತ್ ಗೌರವ್ ಕಾಶಿ ದರ್ಶನ ರೈಲು ಯಾತ್ರೆಯ ಟ್ರಿಪ್ನ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಟಿಕೆಟ್ ಬುಕ್ಕಿಂಗ್ ಪ್ರಾರಂಭ ಮಾಡಿದ ಎರಡೇ ದಿನಗಳಲ್ಲಿ ಎರಡನೇ ಟ್ರಿಪ್ ನ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಕಾಶಿ ದರ್ಶನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ದೊರೆಯುತ್ತಿರುವುದು ಬಹಳ ಸಂತಸದ ಸಂಗತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಂದಿನ ಟ್ರಿಪ್ಗಳ ದಿನಾಂಕವನ್ನು ಘೋಷಿಸಲಾಗುವುದು ಎಂದು ಸಚಿವರಾದ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ಯಾಕೇಜ್ನ ಪ್ರವಾಸಕ್ಕೆ ಅ.30ರಂದು ಬುಕ್ಕಿಂಗ್ ಪ್ರಾರಂಭಿಸಲಾಯಿತು. ಮೊದಲ ದಿನದಲ್ಲೇ 200 ಸೀಟುಗಳನ್ನು ಬುಕ್ ಮಾಡಲಾಗಿತ್ತು. ಮೂರನೇ ದಿನದ ಸಂಜೆ ಹೊತ್ತಿಗೆ ಎಲ್ಲಾ 540 ಸೀಟುಗಳು ಭರ್ತಿಯಾದವು.
ಮೊದಲ ಟ್ರಿಪ್ನಲ್ಲಿ ಈ ಯಾತ್ರೆಗೆ ಬಳಸಲಾಗುತ್ತಿರುವ ಭಾರತ್ ಗೌರವ್ ರೈಲು ನವೆಂಬರ್ 11ರಂದು ಹೊರಟು ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್ಗಳ ಪ್ರವಾಸ ಮುಗಿಸಿ ನವೆಂಬರ್ 18ರಂದು ರೈಲು ಬೆಂಗಳೂರಿಗೆ ವಾಪಸ್ಸಾಗಲಿದೆ. ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದ್ದು, ಈ ರೈಲು ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್ವರೆಗೆ ಸಂಚರಿಸಲಿದೆ.
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಗೆ ಮುಂಗಡ ಬುಕ್ಕಿಂಗ್ ಶುರುವಾಗಿದೆ. ನವೆಂಬರ್ 11ಕ್ಕೆ ಮತ್ತು ನವೆಂಬರ್ 23ಕ್ಕೆ ರೈಲು ಬೆಂಗಳೂರಿನಿಂದ ಹೊರಡಲಿದೆ. ಅಯೋಧ್ಯೆ, ಪ್ರಯಾಗರಾಜ್ ಮತ್ತು ವಾರಾಣಸಿಗೆ ಯಾತ್ರಿಕರನ್ನು ಕರೆದೊಯ್ಯಲಿದೆ. ಈ ಪ್ರವಾಸಕ್ಕೆ ರಾಜ್ಯ ಸರ್ಕಾರ 5,000 ರೂಪಾಯಿ ಸಹಾಯಧನವನ್ನೂ ಕೊಡುತ್ತಿದೆ.
ಪ್ರವಾಸಿಗರಿಗೆ ಇರುವ ಸೌಲಭ್ಯಗಳೇನು..?
ಕರ್ನಾಟಕ - ಭಾರತ್ ಗೌರವ್ ಕಾಶಿ ದರ್ಶನ ರೈಲು ಯಾತ್ರೆಯ ಟ್ರಿಪ್ನ ಲ್ಲಿ ಪ್ರವಾಸಿಗರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆ ರಾಮಲಲ್ಲಾ ದೈವ ಭೂಮಿಯ ವೈಭವ ಭಾಗ್ಯ ಇದಾಗಿದೆ. 8 ದಿನಗಳ ಕಾಲದ ಈ ಟೂರ್ ಪ್ಯಾಕೇಜ್ನಲ್ಲಿ ಟ್ರೈನ್ ದರ, ಪ್ರವಾಸಿ ಸ್ಥಳಗಳಲ್ಲಿ ಬಸ್ ವ್ಯವಸ್ಥೆ, ತಂಗಲು ಹೋಟೆಲ್, 8 ದಿನಗಳಲ್ಲಿಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆ ಇರಲಿದೆ. ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯ ಸೇವೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎ.ಸಿ. ವ್ಯವಸ್ಥೆ ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಮಾಡಲಾಗಿದೆ. ನಮ್ಮ ರಾಜ್ಯದ ದೇವಸ್ಥಾನಗಳನ್ನು ಭಾರತದ ಉದ್ದಗಲಕ್ಕೂ ಸಂಚರಿಸಲಿರುವ ಟ್ರೈನ್ ಮೂಲಕ ಪ್ರಚಾರ ಮಾಡುವುದು ಇದರ ಉದ್ದೇಶವಾಗಿದೆ.