ಮೂಢನಂಬಿಕೆ ಚಕ್ರಸುಳಿಯಲ್ಲಿ ಕಳ್ಳಿಪಾಳ್ಯ ಗ್ರಾಮಸ್ಥರು
ರಾಮನಗರ, ನ.28: ಅತ್ತ ಇಡೀ ರಾಜ್ಯ ಮೂಢನಂಬಿಕೆ ಪರ-ವಿರೋಧದಲ್ಲಿ ತೊಡಗಿದ್ದರೆ ಇತ್ತ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಳ್ಳಿಪಾಳ್ಯ ಗ್ರಾಮವು ವಿಚಿತ್ರ ಘಟನೆಗೆ ಕಾರಣೀಭೂತವಾಗಿದೆ.
ಇಲ್ಲಿರುವ ಶ್ರೀ ಭಕ್ತ ಮುನೇಶ್ವರಸ್ವಾಮಿ ನಮ್ಮ ಸಂಕಷ್ಟ ಪರಿಹರಿಸಿ, ಇಷ್ಟಾರ್ಥ ನೆರವೇರಿಸುತ್ತಾನೆ ಎಂಬ ಅಚಲ ನಂಬಿಕೆ ಆ ಗ್ರಾಮದ ಭಕ್ತರದ್ದು. ಸುಮಾರು 100 ಮನೆಗಳಿರುವ ಗ್ರಾಮವಿದು. ಇಂತಿಪ್ಪ ಭಕ್ತಮುನೇಶ್ವರ ಸನ್ನಿಧಿಗೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಹೀಗಿರುವ ಗ್ರಾಮದಲ್ಲಿ ಸುಮಾರು 20 ಮನೆಗಳ ಮುಂದೆ ಕುಟುಂಬದ ಸದಸ್ಯರ ಹೆಸರನ್ನು ಬರೆದು ಅವರು ಹಾಳಾಗಿ ಹೋಗಲಿ ಎಂದು ಬರೆದು ಹಂದಿ ರಕ್ತ ಮೆತ್ತಿರುವ ಎಲೆಯನ್ನು ಮನೆ ಬಾಗಿಲಿಗೆ ಬಳಿದು ವಾಮಾಚಾರ ನಡೆಸಲಾಗಿದೆ. ಅಷ್ಟೇ ಅಲ್ಲ. ಭಕ್ತರ ತಲೆ ಕಾಯುವ ಮುನೇಶ್ವರ ಸ್ವಾಮಿ ದೇಗುಲದ ಸನ್ನಿಧಿಯಲ್ಲೂ ಹಂದಿ ಕಾಲು ಮತ್ತು ಹಂದಿ ರಕ್ತ ಹಾಕಿ ವಾಮಾಚಾರ ಮಾಡಲಾಗಿದೆ.
ದೇಗುಲದ ಆಡಳಿತ ಮಂಡಳಿ ಮತ್ತು ಗ್ರಾಮದ ಕೆಲವು ಮಂದಿ ವಾಮಾಚಾರ ಮಾಡಿದ್ದಾರೆ ಎಂದು ಪರಸ್ಪರ ಆರೋಪಿಸಿಕೊಂಡು ಪೊಲೀಸ್ ಠಾಣೆಗೆ ದೂರುಗಳನ್ನು ಸಹ ನೀಡಿದ್ದಾರೆ. ಈ ಬೆಳವಣಿಗೆಗಳಿಂದ ಅಸಮಾಧಾಗೊಂಡಿರುವ ಭಕ್ತರು ತೀವ್ರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಮೂಢನಂಬಿಕೆ ಕರಡು ಕಾಂಗ್ರೆಸ್ ಪಕ್ಷದ್ದಲ್ಲ: ಪರಮೇಶ್ವರ್)
ಆದರೆ ಇಂತಹ ವಿಚಿತ್ರ ವಾಮಾಚಾರಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ. ದೇವಾಲಯ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿರುವುದರಿಂದ ಸಹಿಸದ ಗ್ರಾಮದ ಕೆಲವರು ಅಪಪ್ರಚಾರ ನಡೆಸಿ ದೇಗುಲದ ಆಡಳಿತ ಮಂಡಳಿಯವರೇ ವಾಮಾಚಾರ ನಡೆಸಿದ್ದಾರೆ ಎಂಬ ಹಸಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ದೇಗುಲದ ಭಕ್ತರು ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಆದರೆ ಗ್ರಾಮದ ಯುವ ಮುಖಂಡ ಕೆಂಚೇಗೌಡ ಮತ್ತು ಶಿಕ್ಷಕರಾದ ಕೆಪಿ ರಂಗಸ್ವಾಮಿ, ನರಸಿಂಹಮೂರ್ತಿ ಅವರುಗಳು ಹೇಳುವುದೇ ಬೇರೆ. ಗ್ರಾಮದಲ್ಲಿ ಭಕ್ತಮುನೇಶ್ವರ ದೇಗುಲದಲ್ಲಿ ಮೌಢ್ಯ ತಾಂಡವವಾಡುತ್ತಿದೆ. ಭಕ್ತರಲ್ಲಿ ಭಯ ಹುಟ್ಟಿಸಿ ದೇವರ ಹೆಸರು ಹೇಳಿಕೊಂಡು ಹಣ ಮಾಡುವ ದಂಧೆಯನ್ನಾಗಿಸಿಕೊಂಡಿದ್ದಾರೆ. ಇಂತಹ ನೀತಿಯನ್ನು ನಾವು ವಿರೋಧ ಮಾಡಿಕೊಂಡು ಬಂದಿದ್ದೇವೆ.
ದೇಗುಲದ ಮೌಢ್ಯಾಚಾರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಸುಮಾರು 20 ಮಂದಿಯ ಮನೆಗಳ ಮುಂದೆ ಅರಳಿ ಎಲೆಯಲ್ಲಿ ಹೆಸರು ಬರೆದು ಹಂದಿ ರಕ್ತ ಬಳಿದು ಹೋಗಿರುವುದರಿಂದ ದೇಗುಲದ ಆಡಳಿತ ಮಂಡಳಿಯವರೇ. ಈ ರೀತಿಯಲ್ಲಿ ವಾಮಾಚಾರ ನಡೆಸಿ ವಿರೋಧ ಮಾಡುತ್ತಿದ್ದವರಲ್ಲಿ ಭೀತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅಲವತ್ತುಕೊಳ್ಳುತ್ತಾರೆ.
ಏನೇ ಆಗಲಿ, ಊರಿಗೇ ಊರೆ ವಾಮಾಚಾರದ ಭೀತಿಯಲ್ಲಿದೆ. ದೇವರು ನೆಲೆಸಿರುವ ಗ್ರಾಮದಲ್ಲಿ ವಾಮಾಚಾರ ನಡೆಸಿರುವವರು ಯಾರು ಎಂಬುದು ಎಲ್ಲರನ್ನೂ ಕಾಡುತ್ತಿದೆ. ದೇಗುಲದ ಪರ ವಿರೋಧ ಇರುವವರು ಪರಸ್ಪರ ಆರೋಪಗಳನ್ನು ಮಾಡಿಕೊಂಡು ಮಾಗಡಿ ತಾಲ್ಲೂಕು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications