7 ವರ್ಷದ ಹಿಂದೆ ನಾಪತ್ತೆಯಾಗಿದ್ದ ಟೆಕ್ಕಿ, ಹೆಂಡತಿ ಅಕೌಂಟ್ಗೆ ಹಣ ಹಾಕಿ ಸಿಕ್ಕಿಬಿದ್ದ
ಬೆಂಗಳೂರು, ಮಾ. 31: ಆತ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಪ್ರೀತಿಸಿ ಮದುವೆಯಾಗಿದ್ದ. ಏಳು ವರ್ಷದ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದ. ಗೊತ್ತಿಲ್ಲದೇ ಬ್ಯಾಂಕ್ ಖಾತೆಗೆ ಹತ್ತು ಸಾವಿರ ರೂ. ಹಣ ವರ್ಗಾವಣೆ ಮಾಡಿ ಹೆಂಡತಿ ಕೈಗೆ ಮತ್ತೆ ಸಿಕ್ಕಿ ಬಿದ್ದಿದ್ದಾನೆ!
ಆತನ ಹೆಸರು ಕೋಟೆಪ್ಪ. ಇಂಜಿನಿಯರಿಂಗ್ ಪದವಿ ಮುಗಿಸಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದ. ಅಲ್ಲದೇ ತನಗೆ ಪರಿಚಯವಾದ ಸವಿತಾ ಎಂಬುವರನ್ನು ಪ್ರೀತಿಸುತ್ತಿದ್ದ. ಇಬ್ಬರ ಪರಿಚಯ ಮದುವೆ ಹಂತಕ್ಕೆ ಕರೆದುಕೊಂಡು ಬಂದಿತ್ತು. ಅದೇ ಸಮಯಕ್ಕೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕೋಟೆಪ್ಪನಿಗೆ ಕೆಲಸ ಸಿಕ್ಕಿತ್ತು. ಇದೇ ಖುಷಿಯಲ್ಲಿ ಸವಿತಾ ಜತೆ ಸಪ್ತಪದಿ ತುಳಿದು ಮದುವೆಯಾಗಿದ್ದ.
ಪ್ರೇಮ ವಿವಾಹವಾಗಿದ್ದ ಕೋಟೆಪ್ಪನಿಗೆ ಖುಷಿಯೋ ಖುಷಿ. ಅನೋನ್ಯ ಜೀವನ. ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟರಲ್ಲಿ ಮನೆಯಲ್ಲಿ ಕಿರಿಕ್ ಶುರುವಾಗಿತ್ತು. ಸವಿತಾ ಮತ್ತು ಕೋಟೆಪ್ಪ ನಡುವೆ ದಾಂಪತ್ಯ ಕಲಹ ಶುರುವಾಗಿತ್ತು. ಇಬ್ಬರೂ ಪ್ರತಿದಿನ ಜಗಳ ಮಾಡುತ್ತಿದ್ದರು. ಸಂಸಾರದ ಹೊರೆ ತಾಳಲಾರದೆ ಕೋಟೆಪ್ಪ ಸಾಫ್ಟ್ ವೇರ್ ಕಂಪನಿ ಕೆಲಸಕ್ಕೆ ಗುಡ್ ಬೈ ಹೇಳಿ ನಾಪತ್ತೆಯಾಗಿದ್ದ. ಎಷ್ಟು ದಿನವಾದರೂ ಗಂಡ ಮನೆಗೆ ಬರಲಿಲ್ಲ.

ಗಂಡ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಸವಿತಾಗೆ ಆತಂಕ ಶುರುವಾಗಿತ್ತು. ತನ್ನ ಟೆಕ್ಕಿ ಗಂಡ ನಾಪತ್ತೆಯಾಗಿದ್ದಾನೆ ಎಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವೃತ್ತಿಯಲ್ಲಿ ಟೆಕ್ಕಿ ಆಗಿದ್ದರಿಂದ ಪೊಲೀಸರು ತಲೆ ಕೆಡಿಸಿಕೊಂಡು ಅನೇಕ ರಾಜ್ಯಗಳಲ್ಲಿ ಹುಡುಕಾಡಿದ್ದರು. ಎಲ್ಲಿಯೂ ಕೋಟೆಪ್ಪನ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಕೋಟೆಪ್ಪನ ವಾಂಟೆಂಡ್ ಭಿತ್ತಿಪತ್ರಗಳನ್ನು ತಯಾರಿಸಿ ಪೊಲೀಸರು ಎಲ್ಲಾ ರಾಜ್ಯಗಳಿಗೆ ಹಂಚಿದರೂ ಪ್ರಯೋಜನವಾಗಲಿಲ್ಲ. ಪೊಲೀಸರು ಕೊನೆಗೂ ಸುಮ್ಮನಾಗಿದ್ದರು. ಏಳು ವರ್ಷವಾದರೂ ಕೋಟೆಪ್ಪ ಸುಳಿವು ಸಿಕ್ಕಿರಲಿಲ್ಲ.
ತನ್ನ ಗಂಡ ಬದುಕಿಲ್ಲ ಎಂದೇ ಪತ್ನಿ ಭಾವಿಸಿ ಏಕಾಂಗಿ ಜೀವನ ಮಾಡುತ್ತಿದ್ದಳು. ಕೋಟೆಪ್ಪನ ಮನೆ ಕಡೆ ಹೋಗಿ ನೋಡಿದ್ರೂ ಆತನ ಬಗ್ಗೆ ಯಾರು ಏನೂ ವಿಚಾರ ತಿಳಿಸಿರಲಿಲ್ಲ. ಜೀವನ ಹೀಗಾಯಿತಲ್ಲಾ ಎಂದು ಗಲಾಟೆ ಪತ್ನಿ ಚಿಂತೆಗೀಡಾಗಿದ್ದಳು. ಕೆಟ್ಟವನೋ- ಒಳ್ಳೆಯವನೋ ಗಂಡ ಅಂತ ಇದ್ದರೆ ಮರ್ಯಾದೆಯೇ ಬೇರೆ, ಏಳು ವರ್ಷದ ಹಿಂದೆ ನಾಪತ್ತೆಯಾಗಿರುವ ಕೋಟೆಪ್ಪ ಅದ್ಯಾವ ಕೋಟೆಯಲ್ಲಿ ಅಡಗಿದ್ದಾನೋ ಎಂದು ಪತ್ನಿ ದಿನ ನಿತ್ಯ ಹುಡುಕುತ್ತಲೇ ಇದ್ದಳು. ಆದರೂ ಏನೂ ಪ್ರಯೋಜನವಾಗದೇ ಸುಮ್ಮನಾಗಿದ್ದಳು.

ಮಾ. 16 ಕ್ಕೆ ಮೆಸೇಜ್:
ಮಾ. 16 ರಂದು ಸವಿತಾ ಅವರ ಮೊಬೈಲ್ ನಂಬರ್ಗೆ ಒಂದು ಸಂದೇಶ ಬಂದಿತ್ತು. ಕೋಟೆಪ್ಪ ತನ್ನ ಬ್ಯಾಂಕ್ ಖಾತೆಯಲ್ಲಿ 10 ಸಾವಿರ ರೂಪಾಯಿ ಡೆಪಾಸಿಟ್ ಮಾಡಿದ್ದ ಸಂದೇಶ ಮೊಬೈಲ್ಗೆ ಬಂದಿತ್ತು. ಹೌದು, ಕೋಟೆಪ್ಪನ ಬ್ಯಾಂಕ್ ಖಾತೆಗೆ ಆರಂಭದಲ್ಲಿ ತನ್ನ ಪತ್ನಿ ಸವಿತಾ ನಂಬರ್ ನೋಂದಣಿ ಮಾಡಿಸಿದ್ದ. ಹೀಗಾಗಿ ಆ ಬ್ಯಾಂಕ್ ಖಾತೆಗೆ ಹತ್ತು ಸಾವಿರ ಡೆಪಾಸಿಟ್ ಮಾಡುತ್ತಿದ್ದಂತೆ ಸಂದೇಶ ಪತ್ನಿಯ ಮೊಬೈಲ್ಗೆ ಹೋಗಿದೆ.
ಈ ಮೊಬೈಲ್ ಸಂದೇಶ ಸಮೇತ ಸವಿತಾ ಆಡುಗೋಡಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಪೊಲೀಸರು ಸಂದೇಶದ ಜಾಡು ಹಿಡಿದು ತನಿಖೆ ನಡೆಸಿದಾಗ ಕಿಲಾಡಿ ಟೆಕ್ಕಿ ಕೋಟೆಪ್ಪ ಹಾವೇರಿಯಲ್ಲಿರುವುದು ಗೊತ್ತಾಗಿದೆ. ನಿನ್ನ ಮೇಲೆ ಮಿಸ್ಸಿಂಗ್ ಕೇಸ್ ಆಗಿದೆ ಬನ್ನಿ ಎಂದು ಕರೆದಾಗ, ನನ್ನ ಹೆಂಡತಿ ಜತೆ ಜಗಳ ಮಾಡಿ ದೂರವಾಗಿದ್ದೇನೆ. ನಾನು ಯಾವುದೇ ಕಾರಣಕ್ಕೂ ಹೆಂಡತಿ ಬಳಿ ಹೋಗಲ್ಲ. ಬೇಕಾದರೆ ಪೊಲೀಸ್ ಸ್ಟೇಷನ್ಗೆ ಬಂದು ಸಹಿ ಹಾಕಿ ವಾಪಸು ಬರುತ್ತೇನೆ ಎಂದು ಕಡ್ಡಿ ಮುರಿದಂತೆ ಪೊಲೀಸರಿಗೆ ಉತ್ತರ ಹೇಳಿದ್ದಾನೆ. ಅಷ್ಟೇ ಮಾಡು ಸಾಕು ಅಂತ ಪೊಲೀಸರು ಕೋಟೆಪ್ಪನ ಹೇಳಿಕೆ ಪಡೆದು ಮಿಸ್ಸಿಂಗ್ ಪ್ರಕರಣ ಮುಕ್ತಾಯಗೊಳಿಸಿದ್ದಾರೆ.

ಹಾವೇರಿಯಲ್ಲಿ ತಂಗಿದ್ದ ಕೋಟೆಪ್ಪ ಏಳು ವರ್ಷವಾದರೂ ಪತ್ನಿಗೆ ಸಣ್ಣ ಸುಳಿವು ಸಿಗದಂತೆ ವಾಸವಾಗಿದ್ದ. ತನ್ನ ಪತ್ನಿಯ ಮೊಬೈಲ್ ನಂಬರ್ ನೋಂದಣಿ ಮಾಡಿಸಿದ್ದ ಬ್ಯಾಂಕ್ ಖಾತೆಯಲ್ಲಿ ಹಣ ಡೆಪಾಸಿಟ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಏಳು ವರ್ಷದಿಂದ ಪೊಲೀಸರು ಪತ್ತೆ ಮಾಡಲಾಗದ ಪ್ರಕರಣ ಒಂದು ಮೊಬೈಲ್ ಸಂದೇಶ ಪತ್ತೆ ಮಾಡುವಂತೆ ಮಾಡಿದೆ.
Recommended Video













Click it and Unblock the Notifications