ದಟ್ಟಕಾಡಲ್ಲಿ ನಾಪತ್ತೆಯಾಗಿ 2 ರಾತ್ರಿ ಕಳೆದ ಟೆಕ್ಕಿಯ ರೋಚಕ ಕತೆ
Recommended Video
ಮಂಗಳೂರು, ಸೆಪ್ಟೆಂಬರ್ 18: ದಟ್ಟಕಾಡಿನ ಕತ್ತಲು ಕೇಳುವುದಕ್ಕೆಷ್ಟು ರೋಚಕವೋ, ಸ್ವತಃ ಅನುಭವಕ್ಕೆ ಬಂದರೆ ಅದರಷ್ಟು ಭಯಾನಕ ಮತ್ತೊಂದಿಲ್ಲ! ಸುಬ್ರಹ್ಮಣ್ಯದ ದಟ್ಟ ಕಾನನದಲ್ಲಿ ನಾಪತ್ತೆಯಾಗಿ, ಎರಡು ರಾತ್ರಿ ಒಂಟಿಯಾಗಿ, ಅಲ್ಲಿಯೇ ಕಳೆದು, ನಂತರ ಪವಾಡಸದೃಶವಾಗಿ ಬದುಕಿಬಂದ ಬೆಂಗಳೂರಿನ ಟೆಕ್ಕಿಯ ರೋಚಕ ಕತೆ ಇದು...
ಬೆಂಗಳೂರಿನ 25 ವರ್ಷ ವಯಸ್ಸಿನ ಟೆಕ್ಕಿ ಸಂತೋಷ್, ಸೆಪ್ಟೆಂಬರ್ 14 ರಂದು ತಮ್ಮ 11 ಜನ ಸ್ನೇಹಿತರೊಂದಿಗೆ ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ನಡುವೆ ಇರುವ ಕುಮಾರಪರ್ವತಕ್ಕೆ ಟ್ರಕ್ಕಿಂಗ್ ಗೆಂದು ಹೋಗಿದ್ದರು. ನಂತರ ಭಾನುವಾರ(ಸೆ.15) ಸಂಜೆ ವಾಪಸ್ ಹೊರಟ ಸಂದರ್ಭದಲ್ಲಿ ಸಂತೋಷ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಆ ನಂತರದ್ದೇ ರೋಚಕ ಕತೆ!
ತಂದೆ-ತಾಯಿಯ ಒಬ್ಬನೇ ಒಬ್ಬ ಮಗ ಸಂತೋಷ್ ಆ ಎರಡು ರಾತ್ರಿಯ ಯಮಯಾತನೆಯನ್ನು ವಿವರಿಸಿದ್ದು ಹೀಗೆ...

ಯಾವಾಗ ನಾಪತ್ತೆಯಾದೆ ಅನ್ನೋದೇ ಗೊತ್ತಿಲ್ಲ!
"ಭಾನುವಾರ ಸಂಜೆ ನಾವೆಲ್ಲ ವಾಪಸ್ ಹೊರಟಿದ್ದೆವು. ನಮ್ಮ ಹನ್ನೊಂದು ಜನರ ಎರಡು ಬ್ಯಾಚ್ ಮಾಡಲಾಗಿತ್ತು. ಮೊದಲ ಬ್ಯಾಚ್ ಸ್ವಲ್ಪ ಹೊತ್ತಿಗೂ ಮುಂಚೆ ಹೊರಟಿತ್ತು. ನಮ್ಮ ಗೈಡ್ ಸಹ ಅವರೊಂದಿಗೇ ಹೊರಟಿದ್ದರು. ನಮ್ಮ ಬ್ಯಾಚಿನವರೆಲ್ಲ ಶೂ ಹಾಕುತ್ತಿದ್ದರು. ನಾನು ಅವರಿಗಿಂತ ಐದು ನಿಮಿಷ ಮೊದಲು ಮೊದಲನೇ ಬ್ಯಾಚ್ ಹೊರಟ ದಾರಿಯಲ್ಲೇ ಹೊರಟೆ. ಕೆಲವೆ ಹೊತ್ತು ಕಳೆದು ನೋಡಿದರೆ ನನ್ನ ಹಿಂದೆ ಎರಡನೇ ಬ್ಯಾಚ್ ಸ್ನೇಹಿತರೂ ಇಲ್ಲ, ಮುಂದೆ ಮೊದಲಿನ ಬ್ಯಾಚ್ ಸ್ನೇಹಿತರೂ ಇಲ್ಲ. ಕೊಂಚ ಆತಂಕವಾಯ್ತು. ಆದರೆ ಐದು ನಿಮಿಷಗಳಲ್ಲಿ ನಾನು ಎಲ್ಲಿಗೆ ಬಂದಿದ್ದೆ ಎಂಬುದನ್ನು ಪತ್ತೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಇದ್ದಕ್ಕಿದ್ದಂತೆ ಕತ್ತಲಾಗುತ್ತಿರುವ ಅನುಭವವಾಗುತ್ತಿತ್ತು. ನನ್ನನ್ನು ಯಾರೋ ಹುಡುಕಿಕೊಂಡು ಬರಬಹುದು ಎಂದು ಯೋಚಿಸುತ್ತ ಸುಮ್ಮನಿರುವುದಕ್ಕಿಂತ ನಾನೇ ಜನರನ್ನು ಹುಡುಕಿಕೊಂಡು ಹೋಗಬೇಕು ಎಂದೆನ್ನಿಸಿ ಹೊರಟೆ"

ನೀರನ್ನು ಹುಡುಕುತ್ತ ಹೊರಟೆ
"ನೀರಿನ ತೊರೆಯನ್ನು ಅನುಸರಿಸುತ್ತಾ ಹೋದರೆ ಹತ್ತಿರದಲ್ಲಿ ಯಾವುದಾದರೂ ಊರು ಸಿಗಲೇಬೇಕು ಎಂಬುದು ಗೊತ್ತಿದ್ದರಿಂದ ನನ್ನ ಮೊದಲ ಹುಡುಕಾಟ ನೀರಿನ ತೊರೆ. ಸಿಕ್ಕ ನೀರಿನ ತೊರೆಯನ್ನೇ ಅನುಸರಿಸುತ್ತ ಹೊರಟೆ. ಆಗಲೇ ದಟ್ಟ ಕತ್ತಲಾಗಿತ್ತು. ಹಸಿವಾಗಿ ಹೊಟ್ಟೆ ತಾಳಹಾಕುತ್ತಿತ್ತು. ತೊರೆಯ ನೀರನ್ನೇ ಹೊಟ್ಟೆ ತುಂಬ ಕುಡಿದು ತೊರೆಯ ಬಳಿ ಇದ್ದ ಬಂಡೆಯ ಮೇಲೆ ಮಲಗಿದೆ. ಆ ನಿರ್ಜನ ಸ್ಥಳದಲ್ಲಿ, ಭಯಾನಕ ಕಾಡಲ್ಲಿ ನಿದ್ದೆ ಎಲ್ಲಿ ಹತ್ತಬೇಕು? ಬೆಳಗಾಗುವುದನ್ನೇ ಕಾಯುತ್ತ ಮಲಗಿದೆ. ಸೋಮವಾರವೂ ಮತ್ತೊಂದು ತೊರೆಯನ್ನು ಅನುಸರಿಸುತ್ತಾ ತೆರಳಿದೆ. ಅಂದೂ ರಾತ್ರಿ ಕಾಡಿನಲ್ಲೇ ನಿದ್ದೆ!"

ಕಣ್ಣೀರು ತರಿಸಿದ ತಂದೆ, ತಾಯಿ, ಸ್ನೇಹಿತರೆಲ್ಲರ ನೆನಪು
"ತಂದೆ-ತಾಯಿಗೆ ನಾನು ಒಬ್ಬನೇ ಮಗ. ಅವರನ್ನು ನೆನೆದು ಕಣ್ಣೀರು ಬರುತ್ತಿತ್ತು. ಸ್ನೇಹಿತರನ್ನೆಲ್ಲ ನೆನೆದು ದುಃಖ ಉಜಮ್ಮಳಿಸುತ್ತಿತ್ತು. ಅವರನ್ನೆಲ್ಲ ಮತ್ತೆ ಸೇರುತ್ತೇನೋ ಇಲ್ಲವೋ ಎಂಬ ವಿಷಾದ. ಮಂಗಳವಾರ ಬೆಳಗ್ಗೆ ಮತ್ತೆ ತೊರೆಯನ್ನು ಅನುಸರಿಸಿ ಪಯಣ ಆರಂಭವಾಯ್ತು. ಕೇವಲ ನೀರನ್ನಷ್ಟೇ ಕುಡಿದು, ನಿರಂತರವಾಗಿ ನಡೆದು, ನಿದ್ದೆಯೂ ಇಲ್ಲದೆ ಬಳಲಿದ್ದೆ. ಒಂದೈದು ನಿಮಿಷ ಸ್ನೇಹಿತರಿಗೆ ಕಾದು ಹೊರಟಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ? ನಾನ್ಯಾಕೆ ಅವಸರ ಮಾಡಿ ಒಬ್ಬನೇ ಹೊರಟೆ ಎಮದು ನನ್ನನ್ನು ನಾನೇ ಬೈದುಕೊಂಡೆ! ಬದುಕಿನ ಬಗೆಗಿನ ಭರವಸೆಯೇ ಕಳೆದುಹೋಗಬೇಕು, ಅಷ್ಟರಲ್ಲಿ ಹತಾಶೆಯಲ್ಲಿ ಬಾಗಿದ ಮುಖಕ್ಕೆ ಪೈಪ್ ಲೈನ್ ವೊಂದು ಕಾಣಿಸಿತ್ತು. ಆಯಾಸವೆಲ್ಲ ಮಾಯವಾಗಿ, ನಿಧಿ ಸಿಕ್ಕಷ್ಟು ಖುಷಿಯಾಗಿತ್ತು!"

ಕೊನೆಗೂ ಬದುಕಿದೆ!
"ಪೈಪ್ ಲೈನ್ ಅನ್ನೇ ಅನುಸರಿಸುತ್ತ, ಇದ್ದಬದ್ದ ಶಕ್ತಿಯನ್ನೆಲ್ಲ ಹಾಕಿ ಓಡುತ್ತ ಹೋದೆ. ಎರಡು ದಿನ ಇನ್ನಿಲ್ಲದಷ್ಟು ಕಾಡಿದ್ದ ಅದೃಷ್ಟ ಆವತ್ತು ಕೈಹಿಡಿದಿತ್ತು! ಕಲ್ಲುಗುಡ್ಡೆ ಎಂಬ ಸ್ಥಳಕ್ಕೆ ಬಂದು ನಿಂತಿದ್ದೆ. ಕೂಡಲೇ ಅಲ್ಲೇ ಇದ್ದ ಆಟೋವೊಂದನ್ನು ಹತ್ತಿ ಸಿಟಿಯತ್ತ ಹೊರಟೆ. ನನ್ನನ್ನು ಪೊಲೀಸರು ಹುಡುಕುತ್ತಿರುವ ವಿಷಯ ಆಟೋ ಡ್ರೈವರ್ ನಿಂದ ನನಗೆ ಗೊತ್ತಾಯ್ತು. ಆತನೇ ನನ್ನನ್ನು ಪೊಲೀಸ್ ಠಾಣೆಯ ಬಳಿ ಬಿಟ್ಟ. ಟ್ರೆಕ್ಕಿಂಗ್ ಹೋದಾಗ ಗುಂಪಿನಲ್ಲಿರದೆ ಒಬ್ಬರೇ ಹೋದರೆ ಆಗಬಹುದಾದ ಅನಾಹುತಗಳು ಅಂದು ಅನುಭವಕ್ಕೆ ಬಂತು. ಇನ್ನೆಂದೂ ಇಂಥ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂಬ ತೀರ್ಮಾನಕ್ಕೆ ಬಂದೆ. ನನ್ನ ಮನೆಯನ್ನು ಸೇರಿಕೊಂಡೆ. ಆತಂಕದಲ್ಲಿದ್ದ ತಂದೆ, ತಾಯಿ, ಸ್ನೇಹಿತರೆಲ್ಲ ನನ್ನನ್ನು ನೋಡಿ ಹಿಗ್ಗಿದರು. ಇವೆಲ್ಲ ಕನಸಾ ನನಸಾ ಎಂದು ಈಗಲೂ ಗೊಂದಲವಾಗುತ್ತದೆ"

ಸಂತೋಷ್ ಪತ್ತೆಗೆ 80 ಜನರ ತಂಡ
"ನಾಪತ್ತೆಯಾಗಿದ್ದ ಸಂತೋಷ್ ಪತ್ತೆಗಾಗಿ 80 ಜನರ ತಂಡ ಎರಡು ದಿನಗಳ ಕಾಲ ಹುಡುಕಾಟ ನಡೆಸಿತ್ತು. ಕಾಡಿನಲ್ಲಿ ನಾವು ಎಲ್ಲಾ ಜಾಗದಲ್ಲೂ ಹುಡುಕಾಟ ನಡೆಸುದ್ದೆವು. ಆದರೆ ಸಂತೋಷ್ ನಿಜಕ್ಕೂ ಧೈರ್ಯವಂತ ಮತ್ತು ಅದೃಷ್ಟವಂತ. ಅವರು ತಮ್ಮ ದಾರಿಯನ್ನು ತಾವೇ ಹುಡುಕಿಕೊಂಡು, ಸುರಕ್ಷಿತವಾಗಿ ವಾಪಸ್ಸಾದರು" ಎಂದು ಈ ಶೋಧ ತಂಡದ ಸದಸ್ಯರು ಹೇಳುತ್ತಾರೆ.

ಅಪಾಯಕಾರಿ ಸ್ಥಳ
ಸುಬ್ರಹ್ಮಣ್ಯದ ದಟ್ಟಾರಣ್ಯ ಟ್ರೆಕ್ಕಿಂಗ್ ಹೋಗುವವರಿಗೆ ಅತ್ಯಂತ ಸುಂದರ ಪ್ರದೇಶವಾದರೂ, ಅಷ್ಟೇ ಅಪಾಯಕಾರಿ. ಅದರಲ್ಲೂ ಮುಂಗಾರಿನ ಸಮಯದಲ್ಲಿ ಇಲ್ಲಿ ಗಾಢ ಮಂಜು ಇರುವುದರಿಂದ ನಾಪತ್ತೆಯಾಗುವ ಅಪಾಯ ಹೆಚ್ಚು. ಹತ್ತಿರ ಯಾವುದಾದರೂ ಪ್ರಾಣಿಗಳಿದ್ದರೂ ತಿಳಿಯುವುದಿಲ್ಲ ಎಂಬುದು ಪರಿಸರವಾದಿಗಳ ಮಾತು.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications