ರಾಜ್ಯೋತ್ಸವ ಮಾಸದಲ್ಲೇ ಕನ್ನಡಿಗರಿಗೆ ರೈಲ್ವೆ ಮಂಡಳಿ ಕೊಡುಗೆ
ಬೆಂಗಳೂರು, ನವೆಂಬರ್. 05: ರಾಜ್ಯೋತ್ಸವ ತಿಂಗಳಲ್ಲಿ ರಾಜ್ಯದ ಜನತೆಗೆ, ಕನ್ನಡಿಗರಿಗೆ ಕೇಂದ್ರ ರೈಲ್ವೆ ಮಂಡಳಿ ಸಿಹಿಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ನಗರ ರೈಲ್ವೆ ನಿಲ್ದಾಣ ಇನ್ನು ಮುಂದೆ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ರೈಲ್ವೆ ನಿಲ್ದಾಣ ಎಂದು ಕರೆಸಿಕೊಳ್ಳಲಿದೆ.
ಬೆಂಗಳೂರು ನಗರ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಹೆಸರನ್ನು ನಾಮಕರಣ ಮಾಡಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಹೊಸ ನಾಮಕರಣಕ್ಕೆ ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ರಾಜ್ಯ ಸರ್ಕಾರವು ರೈಲು ನಿಲ್ದಾಣಕ್ಕೆ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಹೆಸರನ್ನು ನಾಮಕರಣ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಬುಧವಾರ ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಹೆಸರಿಡಲು ಒಪ್ಪಿಗೆ ಸಿಕ್ಕಿದೆ.[ಸಿಟಿ ರೈಲ್ವೆ ನಿಲ್ದಾಣಕ್ಕೆ ಸ್ವಯಂ ಚಾಲಿತ ಟಿಕೆಟ್ ಯಂತ್ರ]
ಸಂಗೊಳ್ಳಿ ರಾಯಣ್ಣನ ಹೆಸರನ್ನು ಶೀಘ್ರದಲ್ಲೇ ನಾಮಕರಣ ಮಾಡಲಾಗುವುದು. ನಾಮಫಲಕ, ಟಿಕೆಟ್, ರೈಲುಗಳಲ್ಲಿ ಹೆಸರನ್ನು ಬದಲಿಸಬೇಕಾಗಿರುವುದರಿಂದ ಕೆಲ ದಿನಗಳ ಕಾಲಾವಕಾಶ ಬೇಕು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ರಾಯಣ್ಣ ಹೆಸರು ಇಡುವಂತೆ ಕೇಳಿಕೊಂಡಿದ್ದರು. ಅನೇಕ ದಿನಗಳಿಂದ ಕಾಡುತ್ತಿದ್ದ ಕನ್ನಡಿಗರ ಬಯಕೆ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ.
ಸಂಗೊಳ್ಳಿ ರಾಯಣ್ಣ ಯಾರು? ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆಯನ್ನು ಮೊದಲು ಮೂಡಿಸಿದವರಲ್ಲಿ ಕನ್ನಡಿಗ ಸಂಗೊಳ್ಳಿ ರಾಯಣ್ಣ ಎತ್ತರದಲ್ಲಿ ನಿಲ್ಲುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ ಎಂದು ಗುರುತಿಸಿಕೊಂಡಿದ್ದ ರಾಯಣ್ಣ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಜನಸಿದವರು. ಗೆರಿಲ್ಲಾ ಯುದ್ಧ ತಂತ್ರದಲ್ಲಿ ನಿಷ್ಣಾತನಾಗಿದ್ದ ರಾಯಣ್ಣ 1831 ರಲ್ಲಿ ಬ್ರಿಟಿಷರ ಗಲ್ಲಿಗೆ ಕುತ್ತಿಗೆ ಒಡ್ಡಬೇಕಾಯಿತು. ಸಂಗೋಳ್ಳಿ ರಾಯಣ್ಣ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದ್ದು ಯಶಸ್ಸು ಕಂಡಿದ್ದನ್ನು ನೋಡಿದ್ದೇವೆ.












Click it and Unblock the Notifications